ಮಾ ಚುನಾವಣೆ: ಗೆದ್ದೆನೆಂದು ಸಂಭ್ರಮಿಸಿದ್ದ ಅನುಸೂಯ ಸೋತಿದ್ದು ಹೇಗೆ? ರಾತ್ರಿ ಏನಾಯಿತು?
ತೀವ್ರ ಕುತೂಹಲ ಮತ್ತು ಹಣಾಹಣಿಗೆ ಕಾರಣವಾಗಿದ್ದ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ಚುನಾವಣಾ ಫಲಿತಾಂಶ ಈಗಾಗಲೇ ಘೋಷಣೆಯಾಗಿದ್ದು, ಮಂಚು ವಿಷ್ಣುವರ್ಧನ್ ಬಣ ಎದುರಾಳಿ ಪ್ರಕಾಶ್ ರೈ ವಿರುದ್ಧ ಭರ್ಜರಿ ಗೆಲುವನ್ನು ದಾಖಲಿಸಿದೆ. ಸ್ವತಃ ಅಧ್ಯಕ್ಷ ಚುನಾವಣೆಯಲ್ಲಿ ಪ್ರಕಾಶ್ ರೈ ತನ್ನ ಎದುರಾಳಿ ಮಂಚು ವಿಷ್ಣುವರ್ಧನ್ ಎದುರು ಹೀನಾಯವಾಗಿ ಸೋಲನ್ನು ಕಂಡಿದ್ದಾರೆ.
ತಮ್ಮ ಸೋಲಿನಿಂದ ಆಘಾತಕ್ಕೊಳಗಾಗಿರುವ ಪ್ರಕಾಶ್ ರೈ ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ 'ಲೋಕಲ್ V/s ನಾನ್ ಲೋಕಲ್ ಎಂಬ ವಿಷಯದ ಮೇಲೆ ಸದಸ್ಯರು ನನ್ನನ್ನು ಸೋಲಿಸಿದ್ದಾರೆ. ಅತಿಥಿಯಾಗಿ ಬಂದವನು ಅತಿಥಿಯಾಗಿ ಉಳಿದು ಹೋಗುತ್ತೇನೆ. ಹೌದು ನನ್ನ ಸೋಲಿನ ಹಿಂದೆ ಬಿಜೆಪಿಯ ಕಾರ್ಯತಂತ್ರ ಕೂಡ ಕೆಲಸ ಮಾಡಿದೆ. ಹೀಗಾಗಿಯೇ ನಾನು ಸೋತ ಕ್ಷಣವೇ ತೆಲಂಗಾಣ ಬಿಜೆಪಿ ನಾಯಕರಾದ ಬಂಡಿ ಸಂಜಯ್ ರಾಷ್ಟ್ರೀಯವಾದವನ್ನು ಗೆಲ್ಲಿಸಿದ, ತುಕಡೆ ಗ್ಯಾಂಗ್ ಸೋಲಿಸಿದ 'ಮಾ' ಸದಸ್ಯರಿಗೆ ಅಭಿನಂದನೆಗಳು ಅಂತ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ನಿಸ್ಸಂದೇಹವಾಗಿ ಬಿಜೆಪಿಯವರ ತಂತ್ರಗಳು ಇಲ್ಲಿ ಕೆಲಸ ಮಾಡಿದೆ, ಅದರಿಂದ ನಾನು ಸೋತಿದ್ದೇನೆ.
ಇಲ್ಲಿ ಈ ಚುನಾವಣೆಯಲ್ಲಿ ಜಾತಿವಾದ, ನಾನ್ ಲೋಕಲ್, ರಾಷ್ಟ್ರೀಯವಾದದಂತಹ ಸಂಕುಚಿತ ಮನೋಭಾವಗಳು ನನ್ನ ಸೋಲಿನ ಹಿಂದೆ ಕೆಲಸ ಮಾಡಿದೆ. ಹೀಗಾಗಿ ಇಂತಹ ಸಂಘಟನೆಯಲ್ಲಿ ಒಬ್ಬ ಸದಸ್ಯನಾಗಿ ಮುಂದುವರೆಯುವುದಕ್ಕೆ ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ನನ್ನ 21 ವರ್ಷದ 'ಮಾ'ಜೊತೆಗಿನ ಪಯಣವನ್ನು ಇಂದಿಗೆ ಮುಕ್ತಾಯ ಗಳಿಸುತ್ತಿದ್ದೇನೆ. ಹಾಗಂತ ನಾನು ತೆಲುಗು ಸಿನಿಮಾರಂಗದಿಂದ ದೂರವಾಗುವುದಿಲ್ಲ. ತೆಲುಗು ಸಿನಿಮಾ ರಂಗದೊಂದಿಗೆ ನನ್ನ ಪಯಣ ಎಂದೆಂದಿಗೂ ಮುಂದುವರಿಯುತ್ತದೆ' ಅಂತ ಹೇಳಿರುವ ಅವರು ನೋವಿನಿಂದ ತಮ್ಮ ಸೋಲಿನ ಹಿನ್ನೆಲೆಯಲ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ನಾಗಬಾಬು ಕೂಡ ರಾಜೀನಾಮೆ
ಪ್ರಕಾಶ್ ರೈಗೆ ಮೊದಲೇ ಚಿರಂಜೀವಿ ಸೋದರ ನಟ ನಾಗಬಾಬು ಸದಸ್ಯತ್ವಕ್ಕೆ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ. ನಾಗಬಾಬು ಚುನಾವಣೆಗೆ ಎರಡು ದಿನಗಳ ಮೊದಲು ಮೋದಿ ವಿರುದ್ಧ ನೀಡಿದ ಒಂದು ಹೇಳಿಕೆಯಿಂದಲೇ ಪ್ರಕಾಶ್ ರೈ ಹೀನಾಯವಾಗಿ ಸೋಲಲು ಕಾರಣವಾಯಿತು. ಹೀಗಾಗಿ ಎಲ್ಲ ಕಡೆಯಿಂದ ನಾಗಬಾಬು ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಟೀಕೆಗಳಿಂದ ಬೇಸತ್ತಿರುವ ನಾಗಬಾಬು 'ಮಾ' ಸದಸ್ಯತ್ವಕ್ಕೆ ರಾಜೀನಾಮೆ ಕೂಡ ನೀಡಿದ್ದಾರೆ.

ಗೆದ್ದೆನೆಂದು ಸಂಭ್ರಮಿಸಿದ್ದ ಅನುಸೂಯ
ಇನ್ನು ಭಾನುವಾರ ಸಂಜೆ ಕೌಂಟಿಂಗ್ ನಡೆದ ಸಂದರ್ಭದಲ್ಲಿ ಆರಂಭದ ಹಂತದಲ್ಲಿ ಪ್ರಕಾಶ್ ರೈ ಬಣದ ಹೆಚ್ಚಿನ ಸದಸ್ಯರು EC ( ಎಕ್ಸಿಕ್ಯೂಟಿವ್ ಕಮಿಟಿ) ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ್ದರು. ಅಲ್ಲದೆ ಮೊದಲ 2 EC ಸದಸ್ಯರಾಗಿ ಜಯಭೇರಿ ಗಳಿಸಿದ್ದು ಕೂಡ ಪ್ರಕಾಶ್ ರೈ ಬಣದ ಸದಸ್ಯರು. ಕೌಶಿಕ್, ಶಿವಾರೆಡ್ಡಿ ಜಯಗಳಿಸಿದ್ದಾರೆ ಅಂತ ಡಿಕ್ಲೇರ್ ಆದಮೇಲೆ ಬಂದದ್ದೆ ಪ್ರಕಾಶ್ ರೈ ಬಣದಿಂದ ಸ್ಪರ್ಧಿಸಿದ್ದ ಖ್ಯಾತ ಆಂಕರ್ ಮತ್ತು ನಟಿ ಅನುಸೂಯಾ ಭಾರದ್ವಾಜ್ ಹೆಸರು. ಹೌದು ಅನುಸೂಯಾ ಭಾರದ್ವಾಜ್ ಭಾರಿ ಅಂತರದಿಂದ ಜಯಗಳಿಸಿದ್ದಾರೆ ಅಂತ ಮಾಧ್ಯಮಗಳಲ್ಲೂ ಕೂಡ ಪ್ರಕಟವಾಯಿತು. ವಿಜಯದ ನಗೆ ಬೀರಿದ ಅನುಸೂಯಾ ಕೂಡ ಗೆಲುವಿನ ಸಿಹಿಯನ್ನು ಹಂಚಿದರು. ಎಲ್ಲಡೆಯಿಂದ ಆಕೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂತು, ಅವಳ ಅಭಿಮಾನಿಗಳಂತೂ ಹುಚ್ಚೆದ್ದು ಕುಣಿದರು.

ಸೋಮವಾರ ಅನುಸೂಯ ಸೋತಿದ್ದರು
ಭಾನುವಾರದ ರಾತ್ರಿಯ ಕಥೆ ಹೀಗಿದ್ದರೆ, ಸೋಮವಾರದ ಮಧ್ಯಾಹ್ನದ ಹೊತ್ತಿಗೆ ಕಥೆಯ ಬದಲಾಗಿತ್ತು. ಅಧಿಕೃತವಾಗಿ ಚುನಾವಣಾ ಅಧಿಕಾರಿ ಪ್ರಕಟಿಸಿದ ಫಲಿತಾಂಶದಲ್ಲಿ ಅನುಸೂಯ ಸೋತಿದ್ದರು. ಈ ಫಲಿತಾಂಶ ನೋಡಿ ತೀವ್ರ ಶಾಕ್ ಗೆ ಗುರಿಯಾಗಿರುವ ಅನುಸೂಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ. 'ಕ್ಷಮಿಸಬೇಕು... ನಿಮ್ಮೆಲ್ಲರ ಜೊತೆ ಒಂದು ವಿಷಯ ಹಂಚಿಕೊಳ್ಳುತ್ತಿದ್ದೇನೆ. ಅವರು ನಿನ್ನೆ ರಾತ್ರಿ ಗೆದ್ದಿದ್ದೀರಿ ಎಂದು ಹೇಳಿದರು. ಈಗ ನೀವು ಸೋಲನ್ನು ಹೇಗೆ ಘೋಷಿಸುತ್ತೀರಿ? ನಿನ್ನೆ ರಾತ್ರಿ ಏನಾಯಿತೋ" ಎಂದು ಅನಸೂಯಾ ಟ್ವೀಟ್ ಮಾಡಿದ್ದಾರೆ. 'ಚುನಾವಣಾ ನಿಯಮಗಳಿಗೆ ವಿರುದ್ಧವಾಗಿ ಮತಪತ್ರಗಳನ್ನು ಮನೆಗೆ ತೆಗೆದುಕೊಂಡು ಹೋಗಲಾಗಿದೆಯೇ?' ಸರಣಿ ಟ್ವೀಟ್ಗಳ ಮೂಲಕ ಪ್ರಶ್ನಿಸುತ್ತ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.ಮುಂದೆ ಯಾವುದೇ ತರದ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಕೂಡ ಅವರು ಘೋಷಿಸಿದ್ದಾರೆ.

ಅನುಸೂಯಾ ಸೋಲಿನ ಒಳ ಕತೆ ಏನು?
ಅನುಸೂಯಾ ಮಾತ್ರವಲ್ಲ ಪ್ರಕಾಶ್ ರೈ ಬಣದ ಮತ್ತಷ್ಟು ಸದಸ್ಯರ ಗೆಲುವಿನ ಕಥೆ ಕೂಡ ಇದೇ ಆಗಿದೆ. ಆರಂಭದ ಹಂತದಲ್ಲೇ ಅವರು ತಾವು ಗೆದ್ದು ಬಿಟ್ವಿ ಎಂಬ ಸಂಭ್ರಮದಲ್ಲಿ ಸಿಹಿ ಕೂಡ ಹಂಚಿಬಿಟ್ಟರು. ಮಾಧ್ಯಮಗಳಲ್ಲಿ ಕೂಡ ಅವರು ಜಯಗಳಿಸಿದ್ದಾರೆ ಅಂತಲೇ ಪ್ರಚಾರ ಮಾಡಲಾಯಿತು. ಮತ ಎಣಿಕೆ ಮುಕ್ತಾಯವಾದಾಗ ಅವರು ಲೀಡ್ ನಲ್ಲಿ ಇದ್ದಿದ್ದು ನಿಜ ಆದರೆ ಚುನಾವಣಾ ಅಧಿಕಾರಿಗಳು ಅಧಿಕೃತವಾಗಿ ಜಯಗಳಿಸಿದ್ದಾರೆ ಅಂತ ಪ್ರಕಟಿಸಿರಲಿಲ್ಲ. ರಾತ್ರಿ ತುಂಬಾ ತಡವಾಗಿದ್ದ ಕಾರಣಕ್ಕೆ ಚುನಾವಣಾ ಪ್ರತಿಕ್ರಿಯೆಯನ್ನು ಸೋಮವಾರದ ಬೆಳಗ್ಗೆ ಮುಂದೂಡಲಾಯಿತು.

ಕತೆಗೆ ರೋಚಕ ತಿರುವು!
ಸೋಮವಾರ ಬೆಳಗ್ಗೆ ವರೆಗೂ ಗೆದ್ದು ಬೀಗುತ್ತಿದ್ದ ಅನುಸೂಯಾ ಗೆ ಶಾಕ್ ಆಗಿದ್ದು ಸೋಮವಾರದ ಮಧ್ಯಾಹ್ನದ ನಂತರ. ಮತ ಎಣಿಕೆ ಮುಕ್ತಾಯವಾಗಿತ್ತು ಬ್ಯಾಲೆಟ್ ಮತ ಎಣಿಕೆ ಮುಕ್ತಾಯವಾಗಿತ್ತು. ಆದರೆ ಪೋಸ್ಟಲ್ ಬ್ಯಾಲೆಟ್ ಗಳ ಲೆಕ್ಕ ಇದರೊಳಗೆ ಸೇರಿರಲಿಲ್ಲ. ಪೋಸ್ಟಲ್ ಬ್ಯಾಲೆಟ್ ಗಳನ್ನು ಲೆಕ್ಕ ಹಾಕಿದಾಗ ಅನುಸೂಯ ಮಾತ್ರವಲ್ಲ ಪ್ರಕಾಶ್ ರೈ ಬಣ್ಣದ ಅನೇಕ ಸದಸ್ಯರಿಗೆ ಶಾಕ್ ಕಾದಿತ್ತು. ಪೋಸ್ಟಲ್ ಬ್ಯಾಲೆಟ್ ಗಳಲ್ಲಿ ವಾರ್ ಒನ್ ಸೈಡ್ ಆಗಿತ್ತು. ಬಹುತೇಕ ಪೋಸ್ಟಲ್ ಬ್ಯಾಲೆಟ್ ಮತದಾರರು ವಿಷ್ಣುವರ್ಧನ್ ಬಣದ ಪರವಾಗಿಯೇ ಮತಚಲಾಯಿಸಿದ್ದರು. ಕೊನೆಗೆ ಎಲ್ಲಾ ಲೆಕ್ಕ ಹಾಕಿದಾಗ ಅನುಸೂಯ ಸೋತಿದ್ದರು. ಗೆದ್ದ ಸಿಹಿ ತಿಂದು ಜೀರ್ಣಿಸಿಕೊಳ್ಳುವ ಅದರೊಳಗೆ ಸೋಲಿನ ಕಹಿ ಅನುಸೂಯ ಮುಂದೆ ನಿಂತಿತ್ತು. ಬಹುಶಃ ಅನುಸೂಯ ಗೆದ್ದು ಸೋತವಳಾಗಿ ಉಳಿದುಬಿಟ್ಟಳು. ಪ್ರಕಾಶ್ ರೈ ಸಿಂಡಿಕೇಟ್ನಿಂದ ಸ್ಪರ್ಧಿಸಿದ್ದ ಹಲವು ಸ್ಪರ್ಧಿಗಳಿಗೆ ಸೋಲಾಗಿದೆ. ತಮ್ಮ ಸಿಂಡಿಕೇಟ್ನಲ್ಲಿ ಸ್ವತಃ ಪ್ರಕಾಶ್ ರೈ ಹೀನಾಯವಾಗಿ ಸೋತಿದ್ದಾರೆ.


Click it and Unblock the Notifications











