ಮಹೇಶ್ ಬಾಬು- ಜೂ. ಎನ್ಟಿಆರ್ ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಯ್ತು ಒಂದು ಡೈಲಾಗ್!
ಫ್ಯಾನ್ಸ್ ವಾರ್ ಯಾವ ಚಿತ್ರರಂಗದಲ್ಲಿಲ್ಲ? ಅದರಲ್ಲಿಯೂ ಸಿನಿಮಾಗಳು ಮತ್ತು ತಮ್ಮ ನೆಚ್ಚಿನ ನಟರ ಬಗ್ಗೆ ಅತಿಯಾದ ಪ್ರೀತಿ ಪ್ರದರ್ಶಿಸುವ ತೆಲುಗು ಚಿತ್ರರಂಗದಲ್ಲಿ ತಾರಾ ಸಮರ ಹಾಗೂ ಅಭಿಮಾನಿಗಳ ನಡುವಿನ ಯುದ್ಧ ಮಾಮೂಲು. ಆದರೆ ಮೂರನೇ ವ್ಯಕ್ತಿಯೊಬ್ಬರ ಕಾರಣಕ್ಕೆ ಮಹೇಶ್ ಬಾಬು ಹಾಗೂ ಜೂ. ಎನ್ಟಿಆರ್ ಅಭಿಮಾನಿಗಳ ನಡುವೆ ಫೈಟ್ ಶುರುವಾಗಿದೆ.
ಮಹೇಶ್ ಬಾಬು ಹಾಗೂ ಜೂ. ಎನ್ಟಿಆರ್ ಅಭಿಮಾನಿಗಳು ತಮ್ಮ ನಟನೇ ಮೇಲು ಎಂದು ಕಿತ್ತಾಡುತ್ತಿದ್ದಾರೆ. ಅದರಲ್ಲಿಯೂ ಮಹೇಶ್ ಬಾಬು ಅಭಿಮಾನಿಗಳು 'ಉಗ್ರ' ರೂಪ ತಾಳಿದ್ದಾರೆ. ಈ ಜಗಳಕ್ಕೆ ಕಾರಣರಾಗಿರುವುದು 'ಬಾಹುಬಲಿ' ನಿರ್ಮಾಪಕರು. ಪ್ರಸಾದ್ ದೇವಿನೇನಿ ಮತ್ತು ಶೋಭು ಯರ್ಲಗುಡ್ಡ ನಿರ್ಮಾಣದ 'ಉಮಾ ಮಹೇಶ್ವರ ಉಗ್ರ ರೂಪಸ್ಯ' ಚಿತ್ರ ಇದಕ್ಕೆಲ್ಲ ಮೂಲ ಕಾರಣ. ಮುಂದೆ ಓದಿ...

ಮಲಯಾಳಂ ಚಿತ್ರದ ರೀಮೇಕ್
ಮಹಾ ವೆಂಕಟೇಶ್ ನಿರ್ದೇಶನದ 'ಉಮಾ ಮಹೇಶ್ವರ ಉಗ್ರ ರೂಪಸ್ಯ' ಎಂಬ ತೆಲುಗು ಚಿತ್ರ ಒಟಿಟಿಯಲ್ಲಿ ತೆರೆಕಂಡಿದೆ. ಕೇರ್ ಆಫ್ ಕಂಚರಪಾಳೆಮ್ ಬಳಿಕ ವೆಂಕಟೇಶ್ ನಿರ್ದೇಶಿಸಿರುವ ಎರಡನೆಯ ಚಿತ್ರವಿದು. ಇದು ಮಲಯಾಳಂನ 'ಮಹೆಶಿಂತೆ ಪ್ರತಿಕಾರಮ್' ಚಿತ್ರದ ರೀಮೇಕ್. ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಾಸ್ಯ ನಟ ಸುಹಾಸ್
ಸತ್ಯದೇವ್ ನಾಯಕರಾಗಿರುವ ಈ ಚಿತ್ರದಲ್ಲಿ ಹಾಸ್ಯ ನಟ ಸುಹಾಸ್, ಜೂ. ಎನ್ಟಿಆರ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ದೃಶ್ಯವೊಂದರಲ್ಲಿ ಯುವತಿಯೊಬ್ಬಳು ಜೂ. ಎನ್ಟಿಆರ್ ಅಭಿನಯದ 'ಸಿಂಹಾದ್ರಿ' ಚಿತ್ರದ ಫೈಟಿಂಗ್ ದೃಶ್ಯ ನೋಡುತ್ತಿರುತ್ತಾಳೆ. ಆಗ ಸುಹಾಸ್, 'ನೀವು ಜೂ. ಎನ್ಟಿಆರ್ ಅಭಿಮಾನಿಯೇ?' ಎಂದು ಕೇಳುತ್ತಾರೆ. ಆಕೆ, 'ಅಲ್ಲ ನಾನು ಮಹೇಶ್ ಬಾಬು ಅಭಿಮಾನಿ' ಎನ್ನುತ್ತಾಳೆ.

ಮಹೇಶ್ ಬಾಬು ಸೋಮಾರಿ ನಟ
ಯುವತಿಗೆ ಪ್ರತಿಕ್ರಿಯೆ ನೀಡುವ ಸುಹಾಸ್, 'ಮಹೇಶ್ ಬಾಬು ಬಹಳ ಸೋಮಾರಿ. ಒಂದೇ ಜಾಗದಲ್ಲಿ ನಿಂತು ವಿಲನ್ಗಳನ್ನು ಹೊಡೆಯುತ್ತಾನೆ. ಎಲ್ಲಿಯೂ ಮುನ್ನುಗ್ಗುವುದಿಲ್ಲ. ಆದರೆ ಜೂ. ಎನ್ಟಿಆರ್ ಹಾಗಲ್ಲ, ಕ್ರೇಜಿ. ಎಲ್ಲಾ ಕಡೆ ನುಗ್ಗಿ ರೌಡಿಗಳನ್ನು ಹೊಡೆಯುತ್ತಾನೆ' ಎಂದು ಹೇಳುತ್ತಾರೆ.

ಸಿಟ್ಟಿಗೆದ್ದ ಮಹೇಶ್ ಬಾಬು ಫ್ಯಾನ್ಸ್
ಮಹೇಶ್ ಬಾಬು ಅವರನ್ನು ಸೋಮಾರಿ ನಟ ಎಂದು ಲೇವಡಿ ಮಾಡಿರುವುದು ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಜೂ, ಎನ್ಟಿಆರ್ ಅಭಿಮಾನಿಗಳು ಸಿನಿಮಾ ಡೈಲಾಗಿನಿಂದ ಖುಷಿಯಾಗಿ ಇದು ಸೂಪರ್ ಆಗಿದೆ ಎನ್ನುತ್ತಿದ್ದಾರೆ. ಇದರಿಂದ ಮಹೇಶ್ ಬಾಬು ಅಭಿಮಾನಿಗಳು ಮತ್ತಷ್ಟು ಕೆರಳಿದ್ದಾರೆ. ಹೀಗಾಗಿ ಇದು ಇಬ್ಬರೂ ಹೀರೋಗಳ ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಗಿದೆ. ಇದು ಇನ್ನು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ನೋಡಬೇಕು.


Click it and Unblock the Notifications











