ಭದ್ರತೆ ನೀಡಿ, ಡ್ರಗ್ಸ್ ಸೇವಿಸುವ ತೆಲುಗು ನಟ-ನಟಿಯರ ಪಟ್ಟಿ ಕೊಡ್ತೀನಿ: ಶ್ರೀರೆಡ್ಡಿ ಬಾಂಬ್
ಕನ್ನಡ ಸಿನಿಮಾ ಉದ್ಯಮಕ್ಕೆ ಸುತ್ತಿಕೊಂಡಿರುವ ಮಾದಕ ವಸ್ತು ನಂಟು ನಿಧಾನಕ್ಕೆ ಪಕ್ಕದ ತೆಲುಗು ಸಿನಿಮಾ ಉದ್ಯಮಕ್ಕೂ ವ್ಯಾಪಿಸುತ್ತಿದೆ.
'ಭದ್ರತೆ ಕೊಟ್ಟರೆ ಎಲ್ಲರ ಹೆಸರೂ ಹೇಳುತ್ತೀನಿ' ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಪ್ರಕರಣ ಪತ್ತೆಯಾದ ಆರಂಭದ ದಿನದಲ್ಲಿ ಹೇಳಿದ್ದರು. ಆ ಹೇಳಿಕೆ ನಂತರ ಡ್ರಗ್ಸ್ ಪ್ರಕರಣ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತು. ದೊಡ್ಡ ನಟಿಯರೇ ಬಂಧನವಾದರು.
ಪಕ್ಕದ ತೆಲುಗು ಸಿನಿಮಾ ರಂಗದಲ್ಲಿಯೂ ಈಗ ಇಂಥಹುದೇ ಮಾತುಗಳು ಕೇಳಿಬರುತ್ತಿದ್ದು, ನಟಿಯೊಬ್ಬರು, 'ನನಗೆ ಭದ್ರತೆ ನೀಡಿದರೆ ಯಾವ-ಯಾವ ನಟ-ನಟಿಯರು ಡ್ರಗ್ಸ್ ಸೇವಿಸುತ್ತಾರೆ, ಯಾರ್ಯಾರು ಮಾದಕ ವಸ್ತು ಜಾಲದಲ್ಲಿದ್ದಾರೆ ಎಂಬ ಪಟ್ಟಿ ಕೊಡುತ್ತೀನಿ' ಎಂದಿದ್ದಾರೆ.

ವಿವಾದಗಳಿಂದಲೇ ಖ್ಯಾತರಾಗಿರುವ ಶ್ರೀರೆಡ್ಡಿ
ವಿವಾದಗಳಿಂದಲೇ ಹೆಸರುಮಾಡಿರುವ ನಟಿ ಶ್ರೀರೆಡ್ಡಿ ಫೇಸ್ಬುಕ್ನಲ್ಲಿ 8 ನಿಮಿಷದ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್, ವ್ಯಭಿಚಾರ ಮುಂತಾದ ಅನಾಚಾರಗಳಿವೆ ಎಂದು ಆರೋಪಿಸಿದ್ದು, ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.

ದೊಡ್ಡ ನಟರ ಮನೆಯಲ್ಲಿ ಡ್ರಗ್ಸ್ ಸರಬರಾಜಾಗುತ್ತದೆ
ದೊಡ್ಡ-ದೊಡ್ಡ ನಟರ ಮನೆಯಲ್ಲಿ ನಡೆಯುವ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು ಆಗುತ್ತದೆ. ದೊಡ್ಡ ನಟರ ಮಕ್ಕಳು ರೇವ್ ಪಾರ್ಟಿಗಳನ್ನು ಮಾಡುತ್ತಾರೆ. ಅಲ್ಲೆಲ್ಲಾ ಡ್ರಗ್ಸ್ ಸರಬರಾಜು ಆಗುತ್ತದೆ. ಡ್ರಗ್ಸ್ ಮಾತ್ರವೇ ಅಲ್ಲ ವ್ಯಭಿಚಾರದ ದೊಡ್ಡ ಜಾಲವೇ ತೆಲುಗು ಸಿನಿಉದ್ಯಮದಲ್ಲಿದೆ ಎಂದಿದ್ದಾರೆ ಶ್ರೀರೆಡ್ಡಿ.

ರಾಕುಲ್ ಪ್ರೀತ್ ಸಿಂಗ್ ಅನ್ನು ಬಂಧಿಸಲು ಒತ್ತಾಯ
ರಾಕುಲ್ ಪ್ರೀತ್ ಸಿಂಗ್ ಅಂಥಹಾ ನಟಿಯರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿ ಚೆನ್ನಾಗಿ 'ಡ್ರಿಲ್' ಮಾಡಿದರೆ ಎಲ್ಲಾ ವಿಷಯಗಳು ಹೊರಗೆ ಬರುತ್ತವೆ. ತೆಲಂಗಾಣ ಸರ್ಕಾರವು ನನಗೆ ಸೂಕ್ತ ಭದ್ರತೆ ಒದಗಿಸಿದರೆ ನಾನು ಎಲ್ಲರ ಹೆಸರನ್ನೂ ಬಹಿರಂಗಗೊಳಿಸುತ್ತೇನೆ, ಪೊಲೀಸರಿಗೆ ಪಟ್ಟಿ ಕೊಡುತ್ತೇನೆ ಎಂದಿದ್ದಾರೆ ಶ್ರೀರೆಡ್ಡಿ.

ಬಿಜೆಪಿಯನ್ನು ಹೊಗಳಿದ ಶ್ರೀರೆಡ್ಡಿ
ಇನ್ನು ತಮ್ಮ ದೀರ್ಘ ವಿಡಿಯೋದಲ್ಲಿ ಬಿಜೆಪಿಯನ್ನು ಹೊಗಳಿರುವ ಶ್ರೀರೆಡ್ಡಿ, ಸುಶಾಂತ್ ಸಿಂಗ್ ಪ್ರಕರಣದಲ್ಲಿ ಬಿಜೆಪಿ ಉತ್ತಮ ಕಾರ್ಯ ಮಾಡುತ್ತಿದೆ ಎಂದಿದ್ದಾರೆ. ಇಲ್ಲಿಯೂ ಸಹ ಎನ್ಸಿಬಿ ಅಧಿಕಾರಿಗಳು ಗಟ್ಟಿಯಾದ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದಿರುವ ಶ್ರೀರೆಡ್ಡಿ, 'ಜೈ ಬಿಜೆಪಿ' ಎನ್ನುವ ಮೂಲಕ ವಿಡಿಯೋ ಮುಗಿಸಿದ್ದಾರೆ.


Click it and Unblock the Notifications











