ಚಿರಂಜೀವಿಗೆ ಮತ್ತೆ ಕೋವಿಡ್: ಆರೋಗ್ಯ ಹೇಗಿದೆ?
ತೆಲುಗಿನ ಮೆಗಾಸ್ಟಾರ್ ಚಿಂರಜೀವಿಗೆ ಮತ್ತೆ ಕೋವಿಡ್ ಪಾಸಿಟಿವ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಚಿರಂಜೀವಿ, ತಾವು ಮನೆಯಲ್ಲಿಯೇ ಹೋಮ್ ಕ್ವಾರೆಂಟೈನ್ ಆಗಿರುವುದಾಗಿ ಹೇಳಿದ್ದಾರೆ.
ಇಂದು ಬೆಳಿಗೆ ಈ ಬಗ್ಗೆ ಟ್ವೀಟ್ ಮಾಡಿರುವ ನಟ ಚಿರಂಜೀವಿ, ''ಎಲ್ಲ ಮುಂಜಾಗೃತೆಗಳನ್ನು ತೆಗೆದುಕೊಂಡಿದ್ದಾಗ್ಯೂ ನನಗೆ ಕೋವಿಡ್ ಪಾಸಿಟಿವ್ ಆಗಿದೆ. ನಿನ್ನೆ (ಜನವರಿ 25) ರಾತ್ರಿ ಕೆಲವು ರೋಗಲಕ್ಷಣಗಳೂ ಕಾಣಿಸಿಕೊಂಡಿವೆ. ನಾನೀಗ ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಗಾಗಿದ್ದೇನೆ. ಕೆಲವು ದಿನಗಳ ಹಿಂದಿನಿಂದ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ನಾನು ಮನವಿ ಮಾಡುತ್ತಿದ್ದೇನೆ'' ಎಂದಿರುವ ಚಿರಂಜೀವಿ, ''ನಿಮ್ಮನ್ನು ಮತ್ತೆ ನೋಡಲು ಕಾತರನಾಗಿ ಕಾಯುತ್ತಿದ್ದೇನೆ'' ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
ಚಿರಂಜೀವಿ ಅವರಿಗೆ ಈ ಮೊದಲು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕೋವಿಡ್ ಪಾಸಿಟಿವ್ ಆಗಿತ್ತು. ಅಪಾಯಕಾರಿಯಾಗಿದ್ದ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದರೂ ಚಿರುಗೆ ಏನೂ ಸಮಸ್ಯೆ ಆಗಿರಲಿಲ್ಲ.

ಚಿರಂಜೀವಿಗೆ ಕೋವಿಡ್ ಆಗಿರುವ ವಿಷಯ ಹೊರಬೀಳುತ್ತಿದ್ದಂತೆ ನಟ ಜೂ ಎನ್ಟಿಆರ್, ಅಲ್ಲು ಅರ್ಜುನ್, ನಟ ನಾನಿ, ವೆಂಕಟೇಶ್, ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಸೇರಿದಂತೆ ಹಲವು ನಟ-ನಟಿಯರು ಚಿರಂಜೀವಿ ಅವರು ಬೇಗ ಗುಣಮುಖರಾಗಲೆಂದು ಟ್ವೀಟ್ ಮಾಡಿದ್ದಾರೆ.
ನಟ ಚಿರಂಜೀವಿ ಕೆಲವು ದಿನಗಳ ಹಿಂದಷ್ಟೆ ತಮ್ಮ ಹೊಸ ಸಿನಿಮಾ 'ಭೋಲೆ ಶಂಕರ್' ಚಿತ್ರೀಕರಣ ಆರಂಭಿಸಿದ್ದರು. ಈಗ ಅವರಿಗೆ ಕೋವಿಡ್ ಆಗಿರುವುದು ಚಿತ್ರತಂಡಕ್ಕೆ ಆತಂಕ ತಂದಿದೆ. 'ಭೋಲೆ ಶಂಕರ್' ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್, ಚಿರಂಜೀವಿ ಸಹೋದರಿಯಾಗಿ ನಟಿಸುತ್ತಿದ್ದಾರೆ. ನಟಿ ಕೀರ್ತಿ ಸುರೇಶ್ಗೆ ಸಹ ಕೆಲವು ದಿನಗಳ ಹಿಂದೆ ಕೋವಿಡ್ ಆಗಿತ್ತು.
ನಟ ಚಿರಂಜೀವಿ ಕೆಲವು ದಿನಗಳ ಹಿಂದೆಯಷ್ಟೆ ಆಂಧ್ರ ಸಿಎಂ ಜಗನ್ ಅವರನ್ನು ಭೇಟಿಯಾಗಿದ್ದರು. ಆದರೆ ಜಗನ್ ಅನ್ನು ಭೇಟಿಯಾಗಿ ಹತ್ತು ದಿನಕ್ಕೂ ಹೆಚ್ಚಾದ ಕಾರಣ ಜಗನ್ಗೆ ಸೋಂಕಿನ ಆತಂಕವಿಲ್ಲ. ಆಂಧ್ರದಲ್ಲಿ ಚಿತ್ರಂದಿರಗಳ ಟಿಕೆಟ್ ದರ ತಗ್ಗಿಸಿದ ಕಾರಣ ಚಿತ್ರರಂಗಕ್ಕೆ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಚಿರಂಜೀವಿ, ಸಿಎಂ ಜಗನ್ ಅವರನ್ನು ಭೇಟಿ ಮಾಡಿದ್ದರು. ಆ ಭೇಟಿಯ ಬಳಿಕ ತೆಲುಗು ಚಿತ್ರರಂಗದವರೊಟ್ಟಿಗೆ ಸಹ ಇತ್ತೀಚೆಗೆ ಸಭೆ ನಡೆಸಿದ್ದರು ಚಿರಂಜೀವಿ. ಆದರೆ ಈಗ ಚಿರಂಜೀವಿ ಕೋವಿಡ್ ಸೋಕಿನಿಂದ ಕ್ವಾರಂಟೈನ್ ಆಗಿರುವುದು ತೆಲುಗು ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಚಿರಂಜೀವಿ ಮಾಡುತ್ತಿರುವ ಪ್ರಯತ್ನಗಳಿಗೆ ಅಲ್ಪ ಹಿನ್ನಡೆ ಆಗಲಿದೆ.
ನಟ ಚಿರಂಜೀವಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಸಮಾಜ ಸೇವೆ ಮಾಡಿದ್ದರು. ತಮ್ಮ ಫೌಂಡೇಶನ್ ವತಿಯಿಂದ ಹಲವು ಜಿಲ್ಲೆಗಳಿಗೆ ಆಮ್ಲಜನಕ ಸಿಲಿಂಡರ್ಗಳನ್ನು ಕಳುಹಿಸಿದ್ದರು. ಮೆಡಿಕಲ್ ಕಿಟ್ಗಳನ್ನು ಕಳಿಸಿದ್ದರು. ಕೋವಿಡ್ ಸಮಯದಲ್ಲಿ ರಕ್ತದಾನ ಕಡಿಮೆಯಾಗಿ ಕೆಲವು ರೋಗಿಗಳಿಗೆ ರಕ್ತದ ಕೊರತೆ ಎದುರಾದ ಕಾರಣ ರಕ್ತದಾನ ಅಭಿಯಾನ ಆರಂಭಿಸಿ ತಾವೂ ಹಾಗೂ ತಮ್ಮ ಕುಟುಂಬದವರು ರಕ್ತದಾನ ಮಾಡಿದರು. ಕೊರೊನಾ ಲಸಿಕೆ ತೆಗೆದುಕೊಂಡು ಎಲ್ಲರೂ ಲಸಿಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.


Click it and Unblock the Notifications











