10 ವರ್ಷಗಳಿಂದ ಅದೇ ಪ್ರಶ್ನೆ.. ಕೊನೆಗೂ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಚರಣ್-ಉಪಾಸನಾ
ಟಾಲಿವುಡ್ ನಟ ರಾಮ್ಚರಣ್ ತೇಜಾ ಹಾಗೂ ಉಪಾಸನಾ ದಂಪತಿ ಶೀಘ್ರದಲ್ಲೇ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಲಿದ್ದಾರೆ. ಸೊಸೆ ಉಪಾಸನಾ ಗರ್ಭಿಣಿ ಆಗಿರುವ ವಿಚಾರವನ್ನು ಮಾವ ಚಿರಂಜೀವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಮೆಗಾ ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ.
5 ತಿಂಗಳ ಹಿಂದೆಯಷ್ಟೆ ರಾಮ್ಚರಣ್- ಉಪಾಸನಾ 10ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ವಿದೇಶದಲ್ಲಿ ಆಚರಿಸಿಕೊಂಡಿದ್ದರು. ಇದೆಲ್ಲದರ ನಡುವೆ ಫ್ಯಾನ್ಸ್ ಮೆಗಾ ವಾರಸ್ದಾರ ಬರೋದು ಯಾವಾಗ? ಜ್ಯೂ. ರಾಮ್ಚರಣ್ ಅಥವಾ ಉಪಾಸನಾ ಯಾವಾಗ ಬರುತ್ತಾರೆ ಎಂದು ಕೇಳುತ್ತಲೇ ಇದ್ದರು. ಸದ್ಯ 'ವಾಲ್ತೇರು ವೀರಯ್ಯ' ಸಿನಿಮಾ ಸಾಂಗ್ ಶೂಟಿಂಗ್ಗಾಗಿ ವಿದೇಶಕ್ಕೆ ತೆರಳಿರುವ ಚಿರಂಜೀವಿ ಅಲ್ಲಿಂದಲೇ ಸೋಶಿಯಲ್ ಮೀಡಿಯಾದಲ್ಲಿ ತಾವು ಮತ್ತೊಮ್ಮೆ ತಾತ ಆಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.
ಚರಣ್ ಹಾಗೂ ಉಪಾಸನಾ ತಂದೆ ತಾಯಿ ಆಗುತ್ತಿರುವ ವಿಚಾರ ಕೇಳಿ ಫ್ಯಾನ್ಸ್ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸೆಲೆಬ್ರೆಟಿಗಳು ಕೂಡ ಸೋಷಿಯಲ್ ಮೀಡಿಯಾ ಮೂಲಕ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. 'RRR' ಸಕ್ಸಸ್ ನಂತರ ರಾಮ್ಚರಣ್ ತೇಜಾ ಶಂಕರ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ನಲ್ಲಿ ಸಾಂಗ್ ಶೂಟಿಂಗ್ ಮಾಡಿ ಬಂದಿತ್ತು ಚಿತ್ರತಂಡ.

ಮಕ್ಕಳ ಬಗ್ಗೆ ಪ್ರಶ್ನೆಗೆ ಉಪಾಸನಾ ಗರಂ
ಮಕ್ಕಳ ಬಗ್ಗೆ ಸಾಕಷ್ಟು ಬಾರಿ ಉಪಾಸನಾಗೆ ಪ್ರಶ್ನೆ ಎದುರಾಗುತ್ತಲೇ ಇತ್ತು. ಈ ಬಗ್ಗೆ ಚರಣ್ ಮೌನವಾಗಿದ್ದರೂ ಉಪಾಸನಾ ಮಾತ್ರ ತಿರುಗೇಟು ನೀಡುತ್ತಾ ಬಂದಿದ್ದರು. ಹಿಂದೆ ಒಮ್ಮೆ ಸಂದರ್ಶನವೊಂದರಲ್ಲಿ ಇದೇ ಪ್ರಶ್ನೆ ಎದುರಾದಾಗ "ಅದು ಸಂಪೂರ್ಣವಾಗಿ ನನ್ನ ಪರ್ಸನಲ್. ನನ್ನ ವೈಯಕ್ತಿಕ ವಿಷಯ. ನನಗಂತ ಒಂದಷ್ಟು ಗೆರೆ ಎಳೆದುಕೊಂಡಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ಏನೇನೊ ಪ್ರಶ್ನೆಗಳು ಬರ್ತಾನೆ ಇರುತ್ತದೆ. ಅದಕ್ಕೆಲ್ಲಾ ನಾನು ಉತ್ತರಿಸಬೇಕೆಂದು ಇಲ್ಲ" ಎಂದು ಉಪಾಸನಾ ಕೊಂಚ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು.

ಸಮಯ ಬಂದಾಗ ನಾನೇ ಹೇಳ್ತೀನಿ
ಈಗ ನಾನು ಏನೇ ಉತ್ತರ ಕೊಟ್ಟರೂ ಅದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗುತ್ತದೆ. ಮಾತನಾಡುವವರು ಏನು ಬೇಕಾದರೂ ಮಾತನಾಡಲಿ. ನಾನು ಇದಕ್ಕೆ ಉತ್ತರಿಸುವುದಿಲ್ಲ. ನೀವು ಏನು ಅಂದುಕೊಂಡರೂ ಅಭ್ಯಂತರವಿಲ್ಲ. ಇದು ನನ್ನ ಪರ್ಸನಲ್ ಲೈಫ್. ಆ ಸಮಯ ಬಂದಾಗ ನಾನೇ ಎಲ್ಲರಿಗೂ ಗುಡ್ನ್ಯೂಸ್ ಹೇಳುತ್ತೇನೆ. ಈಗ ನಾವು ಕೊರೋನಾ ಸಂಕಷ್ಟದಲ್ಲಿದ್ದೇವೆ. ಒಬ್ಬರಿಗೊಬ್ಬರು ಸಹಾಯ ಮಾಡಬೇಕು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಸದ್ಗುರು ಜೊತೆ ಈ ಬಗ್ಗೆ ಚರ್ಚೆ
ಕೆಲ ದಿನಗಳ ಹಿಂದೆ ಉಪಾಸನಾ, ಸದ್ಗುರು ಬಳಿ ಈ ರೀತಿ ಕೇಳಿದ್ದರು. "ನಾನು 10 ವರ್ಷದಿಂದ ಖುಷಿಯಾಗಿ ಸಾಂಸಾರಿಕ ಜೀವನ ನಡೆಸುತ್ತಿದ್ದೇನೆ. ಆದರೂ ಕೆಲವರು ನನ್ನ RRR ಬಗ್ಗೆ ಜನ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಅದೇನೆಂದರೆ ರಿಲೇಶನ್ಶಿಪ್ (ನನ್ನ ಸಂಬಂಧ), ರಿಪ್ರೊಡ್ಯೂಸ್ (ಸಂತಾನೋತ್ಪತ್ತಿ) ಹಾಗೂ ರೋಲ್ ಆಫ್ ಲೈಫ್ (ಜೀವನದ ಉದ್ದೇಶ) ಎಂದು ಉಪಾಸನಾ ಕೋನಿದೇಲ ಅಲವತ್ತುಕೊಂಡಿದ್ದರು.

ಉಪಾಸನಾ ಪ್ರಶ್ನೆಗೆ ಸದ್ಗುರು ಉತ್ತರ
ಉಪಾಸನಾ ಪ್ರಶ್ನೆ ಉತ್ತರಿಸಿದ್ದ ಸದ್ಗುರು, 'ರಿಲೇಶನ್ಶಿಪ್' ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಸಂಪೂರ್ಣವಾಗಿ ನಿಮಗೆ ಬಿಟ್ಟ ವಿಚಾರ. ಆದರೆ ರಿಪ್ರೊಡ್ಯೂಸ್ (ಸಂತಾನೋತ್ಪತ್ತಿ) ಬಗ್ಗೆ ಹೇಳಬಲ್ಲೆ. ಭಾರತದ ಯಾವ ಹೆಣ್ಣು ಮಕ್ಕಳು ಸಂತಾನೋತ್ಪತ್ತಿ ಮಾಡುವ ಶಕ್ತಿ ಹೊಂದಿದ್ದರೂ, ಸಂತಾನೋತ್ಪತ್ತಿ ಮಾಡದೇ ಇರುವ ನಿರ್ಧಾರ ಮಾಡಿದ್ದಾರೊ ಅವರಿಗೆ ನಾನು ಪ್ರಶಸ್ತಿ ನೀಡಲು ಬಯಸುತ್ತೇನೆ. ನಿಜವಾಗಿಯೂ ಆ ಮಹಿಳೆಯರು ಅಭಿನಂದನಾರ್ಹರು'' ಎಂದಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.


Click it and Unblock the Notifications










