"ಹೀರೊ ಹೆಚ್ಚು ಸಂಭಾವನೆ ತಗೊಂಡ್ರೆ ತಪ್ಪೇನು?": ಚಿರಂಜೀವಿ
ಕೊರೊನಾ ಲಾಕ್ಡೌನ್ ಸಮಯದಲ್ಲಿ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ಆಗಿತ್ತು. ಇದನ್ನು ಸರಿದೂಗಿಸಿಕೊಳ್ಳಲು ಸ್ಟಾರ್ ನಟರು ತಮ್ಮ ಸಂಭಾವನೆ ಕಮ್ಮಿ ಮಾಡಿಕೊಳ್ಳಬೇಕು ಎನ್ನುವ ವಾದ ಕೇಳಿಬಂದಿತ್ತು. ಇದೇ ಪ್ರಶ್ನೆಯನ್ನು ನಟ ಚಿರಂಜೀವಿ ಮುಂದೆ ಇಟ್ಟರೆ ಯಾಕೆ ಕಮ್ಮಿ ಮಾಡಿಕೊಳ್ಳಬೇಕು? ಎಂದು ಮರುಪ್ರಶ್ನೆ ಹಾಕಿದ್ದಾರೆ.
ಸದ್ಯ ಚಿತ್ರರಂಗದಲ್ಲಿ ಬಹುಕೋಟಿ ವೆಚ್ಚದ ಸಿನಿಮಾಗಳು ನಿರ್ಮಾಣ ಆಗ್ತಿದ್ದು, ಸ್ಟಾರ್ ನಟರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಚಿತ್ರದ ಬಜೆಟ್ನಲ್ಲಿ ಅರ್ಧ ಸಂಭಾವನೆಯಾಗಿ ಸ್ಟಾರ್ ನಟರಿಗೆ ಕೊಡುವಂತಾಗಿದೆ. ಕೇಳಿದರೆ ಮಾರ್ಕೆಟ್ ಇದೆ ಅಂತಾರೆ. ಸ್ಟಾರ್ಗಳ ಸಿನಿಮಾಗಳು ಹೇಗೆ ಬ್ಯುಸಿನೆಸ್ ಮಾಡುತ್ತವೆ ಎನ್ನುವುದರ ಮೇಲೆ ಸಂಭಾವನೆ ನಿಗದಿ ಆಗುತ್ತದೆ. ಬಜೆಟ್, ಕಲೆಕ್ಷನ್ಗೂ ಅವರ ಸಂಭಾವನೆಗೂ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಹಾಗಾಗಿ ಸ್ಟಾರ್ಗಳು ತಮ್ಮ ಸಂಭಾವನೆ ಕಮ್ಮಿ ಮಾಡಿಕೊಂಡರೆ ನಿರ್ಮಾಪಕರಿಗೆ ಸಹಾಯಕವಾಗುತ್ತದೆ, ಚಿತ್ರದಿಂದ ಭಾರೀ ನಷ್ಟ ಆಗುವ ಪ್ರಮೇಯ ಕಮ್ಮಿ ಆಗುತ್ತದೆ ಎನ್ನುವ ವಾದ ಇದೆ.
ಸ್ಟಾರ್ ನಟರು ಸಂಭಾವನೆಯನ್ನು ತಗ್ಗಿಸಿಕೊಳ್ಳಬೇಕು ಅಲ್ಲವೇ? ಎನ್ನುವ ಪ್ರಶ್ನೆಗೆ ಮೆಗಾಸ್ಟಾರ್ ಚಿರಂಜೀವಿ ಜಾಣತನದ ಉತ್ತರ ಕೊಟ್ಟಿದ್ದಾರೆ. ಪ್ರಶ್ನೆ ಕೇಳಿದವರಿಗೆ ಮರು ಪ್ರಶ್ನೆ ಹಾಕಿ ಬಚಾವಾಗಿದ್ದಾರೆ.

'ವಾಲ್ತೇರು ವೀರಯ್ಯ' ತೆರೆಗೆ ಸಿದ್ಧ
ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರ್ತಿದೆ. ಬಾಬಿ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಮೋಷನ್ ಭಾಗವಾಗಿ ನಟ ಚಿರಂಜೀವಿ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಸಿನಿಮಾ ಬಿಟ್ಟು ಸಾಕಷ್ಟು ಅಂಶಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. 'ವಾಲ್ತೇರು ವೀರಯ್ಯ' ಸಿನಿಮಾ ಬಜೆಟ್ ಬಗ್ಗೆ ಮಾತನಾಡುತ್ತಾ ಸ್ಟಾರ್ಗಳ ಸಂಭಾವನೆ ಪ್ರಶ್ನೆ ಬಂದಿದೆ.

ಸಂಭಾವನೆ ಯಾಕೆ ತಗ್ಗಿಸಬೇಕು?
'ವಾಲ್ತೇರು ವೀರಯ್ಯ' ಸಿನಿಮಾ ಬಜೆಟ್ ಬಗ್ಗೆ ಮಾತನಾಡುತ್ತಾ ಲೆಕ್ಕಾಚಾರವಾಗಿ ಕೆಲಸ ಮಾಡಿದರೆ ದುಂದು ವೆಚ್ಚ ತಡೆಯಬಹುದು. ಈ ಸಿನಿಮಾದಲ್ಲಿ ಆ ಪ್ರಯತ್ನ ಆಗಿದೆ ಎಂದು ಚಿರಂಜೀವಿ ಹೇಳಿದ್ದಾರೆ. ಇದೇ ವೇಳೆ ನಿರೂಪಕ "ಬಜೆಟ್ನಲ್ಲಿ ಅರ್ಧ ನಟರ ಸಂಭಾವನೆಯಾಗಿ ಹೋಗುತ್ತಿದೆ. ಅವರು ಯಾಕೆ ಸಂಭಾವನೆ ಕಮ್ಮಿ ಮಾಡಿಕೊಳ್ಳಬಾರದು ಎನ್ನುವ ವಾದ ಕೇಳಿಬರ್ತಿದೆ. ಇದರ ಬಗ್ಗೆ ನೀವು ಏನು ಹೇಳ್ತೀರಾ? ಎಂದು ಕೇಳಿದ್ದಾರೆ. ಕೂಡಲೇ ಚಿರು "ಸಂಭಾವನೆ ಕಮ್ಮಿ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ನೀವು ಹೇಳುತ್ತೀರಾ? ಇಷ್ಟು ದೊಡ್ಡ ಸಿನಿಮಾ ನಿರ್ಮಾಣ ಆಗುತ್ತಿರುವಾಗ ಇಷ್ಟು ದೊಡ್ಡ ಮಾರ್ಕೆಟ್ ಇದ್ದಾಗ ಅದಕ್ಕೆ ಕಾರಣರ್ತನಾದವನು ಸಿಂಹಪಾಲು ಪಡೆಯುವುದರಲ್ಲಿ ತಪ್ಪೇನಿದೆ?" ಎಂದು ಚಿರು ಮರು ಪ್ರಶ್ನೆ ಹಾಕಿದ್ದಾರೆ.

ಶ್ರಮಕ್ಕೆ ತಕ್ಕ ಪ್ರತಿಫಲ
ಮಾತು ಮುಂದುವರೆಸಿರುವ ಚಿರು, "ಆದರೆ ಎಷ್ಟು ಸಂಭಾವನೆ ಪಡೆಯಬೇಕು ಎನ್ನುವುದು ಮುಖ್ಯ. ಎಲ್ಲರಿಗೂ ವಿನ್ ವಿನ್ ಸಿಚ್ಯುಯೇಷನ್ ಬರಬೇಕು ಎನ್ನುವಂತೆ ನ್ಯಾಯಸಮ್ಮತವಾಗಿ ಆಲೋಚಿಸಬೇಕು. ಅದು ಬಿಟ್ಟು ಎಲ್ಲಾ ನನಗೆ ಬರಬೇಕು, ನನ್ನ ಹೆಸರಿನಲ್ಲಿ ಮಾರ್ಕೆಟ್ ಇದೆ. ಅಥವಾ ನಾನು ನಿರ್ದೇಶಕ, ಎಲ್ಲಾ ನನಗೆ ಬೇಕು, ನನ್ನ ಹೆಸರಿನಲ್ಲಿ ಬ್ಯುಸಿನೆಸ್ ನಡೀತಿದೆ, ಅನ್ನುವುದನ್ನೆಲ್ಲಾ ಬಿಟ್ಟು, ಅವರವರ ಇಮೇಜ್ಗೆ ತಕ್ಕಂತೆ ಶ್ರಮಕ್ಕೆ ತಕ್ಕಂತೆ ಪಾಲು ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ" ಎಂದಿದ್ದಾರೆ.

ವೀರಯ್ಯ Vs ವೀರಸಿಂಹ ರೆಡ್ಡಿ
ಸಂಕ್ರಾಂತಿ ಸಂಭ್ರಮದಲ್ಲಿ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಜೊತೆಗೆ ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಸಿನಿಮಾ ಕೂಡ ತೆರೆಗೆ ಬರ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 2 ಸಿನಿಮಾಗಳನ್ನು ನಿರ್ಮಿಸಿದೆ. 2 ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿರೋದು ವಿಶೇಷ. ಈ ಹಿಂದೆ ಹಲವು ಬಾರಿ ಚಿರು- ಬಾಲಯ್ಯ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಎದುರುಬದಿರಾಗಿವೆ. ಕೆಲವೊಮ್ಮೆ ಚಿರು ಗೆದ್ದರೆ ಮತ್ತೆ ಕೆಲವೊಮ್ಮೆ ಬಾಲಯ್ಯ ಸಕ್ಸಸ್ ಕಂಡಿದ್ದಾರೆ. ಈ ಬಾರಿ ಒಂದೇ ದಿನದ ಅಂತರದಲ್ಲಿ 2 ಬಿಗ್ ಬಜೆಟ್ ಸಿನಿಮಾಗಳು ತೆರೆಗಪ್ಪಳಿಸುತ್ತಿರುವುದು ಕುತೂಹಲ ಮೂಡಿಸಿದೆ.


Click it and Unblock the Notifications











