ವಿಚ್ಛೇಧನ ಸುದ್ದಿ: ಮೌನ ಮುರಿದ ನಾಗ ಚೈತನ್ಯ
ಸಮಂತಾ ಮತ್ತು ನಾಗ ಚೈತನ್ಯ ಮತ್ತು ವಿವಾಹಕ್ಕೆ ಇತಿಶ್ರೀ ಹಾಡಲಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನದ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿವೆ. ಆದರೆ ಈವರೆಗೆ ಸಮಂತಾ ಆಗಲಿ ನಾಗ ಚೈತನ್ಯ ಆಗಲಿ ಈ ಸುದ್ದಿಗಳನ್ನು ಖಾತ್ರಿ ಪಡಿಸಿಲ್ಲ, ಅಥವಾ ಅಲ್ಲಗಳೆದೂ ಇಲ್ಲ.
ಆದರೆ ಇದೇ ಮೊದಲ ಬಾರಿಗೆ ಈ ಗಾಳಿ ಸುದ್ದಿಗಳ ಬಗ್ಗೆ ನಟ ನಾಗ ಚೈತನ್ಯ ಬಹಿರಂಗವಾಗಿ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಾಳಿ ಸುದ್ದಿ ಹರಿದಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾಗ ಚೈತನ್ಯ, ಸಾಯಿ ಪಲ್ಲವಿ ನಟಿಸಿರುವ 'ಲವ್ ಸ್ಟೋರಿ' ಸಿನಿಮಾವು ಸೆಪ್ಟೆಂಬರ್ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನಾಗ ಚೈತನ್ಯಗೆ ಎಲ್ಲೇ ಹೋದರು ವಿಚ್ಛೇದನದ ಪ್ರಶ್ನೆಗಳು ಎದುರಾಗುತ್ತಿವೆ.
ಇತ್ತೀಚೆಗೆ ನಾಗ ಚೈತನ್ಯ ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಪ್ರಶ್ನೆ ಕೇಳಿದಾಗ, ''ನಾನು ನನ್ನ ಕರಿಯರ್ನ ಆರಂಭದಲ್ಲಿಯೇ ವೃತ್ತಿ ಜೀವನ ಹಾಗೂ ಖಾಸಗಿ ಜೀವನ ಎರಡನ್ನೂ ಪರಸ್ಪರ ಬೆರೆಸುವುದನ್ನು ಬಿಟ್ಟುಬಿಟ್ಟಿದ್ದೇನೆ. ಇದನ್ನು ನಾನು ನನ್ನ ಪೋಷಕರನ್ನು ನೋಡಿ ಕಲಿತದ್ದು. ಮನೆಗೆ ಬಂದ ಮೇಲೆ ಅವರು ಎಂದೂ ಕೆಲಸದ ಬಗ್ಗೆ ಮಾತನಾಡುತ್ತಿರಲಿಲ್ಲ ಮತ್ತು ಅವರ ಖಾಸಗಿ ಬದುಕು ಎಂದಿಗೂ ಅವರ ವೃತ್ತಿಯ ಮಧ್ಯೆ ಬರಲಿಲ್ಲ. ಇದನ್ನು ನಾನು ಬಹಳ ಚಿಕ್ಕವನಾಗಿದ್ದಾಗಿನಿಂದಲೂ ಗಮನಿಸಿದ್ದೇನೆ'' ಎಂದಿದ್ದಾರೆ ನಾಗಾರ್ಜುನ.
''ನನ್ನ ಖಾಸಗಿ ಬದುಕಿನ ಬಗ್ಗೆ ಕ್ಷಣ-ಕ್ಷಣದ ಸುದ್ದಿಗಳನ್ನು ಬಿತ್ತರಿಸುತ್ತಿರುವುದು ನೋಡಿದರೆ ಬೇಸರವಾಗುತ್ತದೆ. ಸುಳ್ಳು ಸುದ್ದಿಗಳನ್ನು ಪ್ರೊಮೋಟ್ ಮಾಡಲು ನನ್ನ ಹೆಸರು ಬಳಸಿಕೊಳ್ಳುತ್ತಿರುವುದನ್ನು ಕಂಡು ಬಹಳ ಬೇಸರವಾಗುತ್ತಿದೆ. ಆದರೆ ಈ ಮನೊರಂಜನಾ ಮಾಧ್ಯಮದ ಒಳಮರ್ಮವನ್ನು ನಾನು ಅರಿತುಕೊಂಡಿದ್ದೇನೆ. ಇಲ್ಲಿ ಒಂದು ಸುದ್ದಿಯನ್ನು ಮತ್ತೊಂದು ಸುದ್ದಿ ಮರೆಸುತ್ತದೆ'' ಎಂದಿದ್ದಾರೆ ನಾಗ ಚೈತನ್ಯ.

ಒಂದು ಸುದ್ದಿ ಮತ್ತೊಂದು ಸುದ್ದಿಯನ್ನು ಮರೆಸುತ್ತದೆ
''ಒಂದು ಸುದ್ದಿ ಇಂದು ಬರುತ್ತದೆ ಅದಕ್ಕೆ ಆ ದಿನವಷ್ಟೆ ಜೀವ ನಾಳೆ ಹೊಸ ಸುದ್ದಿ ಬಂದಾಗ ಅದು ಮರೆತು ಹೋಗುತ್ತದೆ. ನನ್ನ ತಾತನವರ ಕಾಲದಲ್ಲಿ ಮ್ಯಾಗಜೀನ್ಗಳು ಇರುತ್ತಿದ್ದವು. ಅವು ತಿಂಗಳಿಗೊಮ್ಮೆ ಬರುತ್ತಿದ್ದವು. ಈ ತಿಂಗಳು ಮ್ಯಾಜಜೀನ್ ಒಂದು ಸುದ್ದಿ ಪ್ರಕಟಿಸಿದರೆ ಅದು ಮುಂದಿನ ತಿಂಗಳ ಮ್ಯಾಗಜೀನ್ ಬರುವವರೆಗೂ ಜೀವಂತ ಇರುತ್ತಿತ್ತು. ಈಗ ಹಾಗಿಲ್ಲ. ಈಗ ಒಂದು ಸುದ್ದಿ ಬರುತ್ತದೆ, ಮರು ನಿಮಿಷವೇ ಮತ್ತೊಂದು ಸುದ್ದಿ ಬಂದ ಅದರ ಜಾಗವನ್ನು ಇದು ಆಕ್ರಮಿಸಿಕೊಳ್ಳುತ್ತದೆ. ಇದನ್ನೆಲ್ಲ ನೋಡಿದಾಗ ಮನೊರಂಜನಾ ಮಾಧ್ಯಮ ಎತ್ತ ಕಡೆ ಸಾಗುತ್ತಿದೆ ಎಂದು ಆತಂಕವಾಗುತ್ತದೆ'' ಎಂದಿದ್ದಾರೆ ನಾಗ ಚೈತನ್ಯ.

''ಕಳೆದ ವರ್ಷದಿಂದ ಸಾಮಾಜಿಕ ಜಾಲತಾಣ ಬಳಸುತ್ತಿಲ್ಲ''
ಸಾಮಾಜಿಕ ಜಾಲತಾಣದ ಟ್ರೋಲ್ಗಳ ಬಗ್ಗೆ ಮಾತನಾಡಿದ ನಾಗ ಚೈತನ್ಯ, ಕಳೆದ ವರ್ಷ ನಾನೊಂದು ಬಹಳ ಒಳ್ಳೆಯ ನಿರ್ಣಯ ಮಾಡಿದೆ. ನಾನು ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಣಯ ಮಾಡಿದೆ. ಇದರಿಂದ ನನ್ನ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಹಾಯವಾಗಿದೆ. ಈಗಂತೂ ನಾನು ಸಾಮಾಜಿಕ ಜಾಲತಾಣಗಳ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿದ್ದೇನೆ'' ಎಂದಿದ್ದಾರೆ ನಾಗ ಚೈತನ್ಯ.

ವಿಚ್ಛೇಧನದ ಸುದ್ದಿಯನ್ನು ಅಲ್ಲಗಳೆದಿಲ್ಲ ನಾಗ ಚೈತನ್ಯ
ಸಂದರ್ಶನದಲ್ಲಿ ತಮ್ಮ ಖಾಸಗಿ ಜೀವನದ ಬಗ್ಗೆ ಮಾಧ್ಯಮಗಳು ಕ್ಷಣ-ಕ್ಷಣದ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆಯೇ ವಿನಃ ಸಮಂತಾ ಹಾಗೂ ತಮ್ಮ ಸಂಬಂಧ ಚೆನ್ನಾಗಿದೆಯೆಂದು, ವಿಚ್ಛೇಧನದ ಸುದ್ದಿಗಳು ವದಂತಿಗಳೆಂದು ಹೇಳಿಲ್ಲ. ಹಾಗಾಗಿ ವಿಚ್ಛೇಧನದ ಸುದ್ದಿಗಳು ಇನ್ನೂ ಜೀವಂತವಾಗಿಯೇ ಇವೆ.

ಅಕ್ಟೋಬರ್ 7 ರಂದು ವಿಚ್ಛೇಧನ?
ಇದೀಗ ಹರಿದಾಡುತ್ತಿರುವ ಹೊಸ ಸುದ್ದಿಯ ಪ್ರಕಾರ ನಾಗ ಚೈತನ್ಯ ಹಾಗೂ ಸಮಂತಾ ದೂರಾಗುವುದು ಖಾತ್ರಿಯಾಗಿದ್ದು ಅಕ್ಟೋಬರ್ 7ರಂದು ತಮ್ಮ ವಿಚ್ಛೇಧನವನ್ನು ಈ ಜೋಡಿ ಘೋಷಿಸಲಿದೆ. ವಿಚ್ಛೇಧನದ ಬಳಿಕ ಸಮಂತಾಗೆ 50 ಕೋಟಿ ರುಪಾಯಿ ಹಣ ಜೀವನಾಂಶದ ರೂಪದಲ್ಲಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ವಿಚ್ಛೇಧನದ ವಿಷಯದಲ್ಲಿ ನಾಗ ಚೈತನ್ಯ ಅನ್ನು ಮಾಧ್ಯಮಗಳು ಮತ್ತು ಜನರು ಆರೋಪಿ ಸ್ಥಾನದಲ್ಲಿ ನಿಲ್ಲಿಸಬಾರದೆಂದೇ ಅಮೀರ್ ಖಾನ್ ಅನ್ನು ಹೈದರಾಬಾದ್ಗೆ ಕರೆಸಿ ಅವರ ಕೈಲಿ ನಾಗ ಚೈತನ್ಯ ಅನ್ನು ಹಿಗ್ಗಾ-ಮುಗ್ಗಾ ಹೊಗಳಿಸಲಾಗಿದೆ ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ.


Click it and Unblock the Notifications











