ಮಹಾತ್ಮ ಗಾಂಧಿಯ ಕೊಂದ ಗೋಡ್ಸೆ ಗೆ ಜೈ ಎಂದ ಮೆಗಾಸ್ಟಾರ್ ಸಹೋದರ
ಮಹಾತ್ಮ ಗಾಂಧಿಯನ್ನು ಕೊಂದ ಕೊಲೆಗಡುಕ ನಾಥೂರಾಮ್ ಗೋಡ್ಸೆ ಗೆ ಜೈ ಎನ್ನುವ ಮೂಲಕ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗ ಬಾಬು ಹೊಸ ವಿವಾದ ಸೃಷ್ಟಿಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಹಲವು ಬಾರಿ ತಾವು ಗಾಂಧಿವಾದಿಯೆಂದು ಹೇಳಿಕೊಂಡಿದ್ದಾರೆ. ಗಾಂಧಿವಾದದ ಕತೆಯುಳ್ಳ ಸಿನಿಮಾ ಶಂಕರ್ ದಾದಾ ಜಿಂದಾಬಾದ್ ಸಿನಿಮಾದಲ್ಲಿ ನಟಿಸಿದ್ದರು ಚಿರಂಜೀವಿ. ಆದರೆ ಅವರ ತಮ್ಮ ಗಾಂಧಿ ಹಂತಕ ಗೋಡ್ಸೆ ಅಭಿಮಾನಿಯಾಗಿದ್ದಾನೆ.
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗ ಬಾಬು ನಾಥೋರಾಮ್ ಗೋಡ್ಸೆಯನ್ನು ಹೊಗಳಿ ಟ್ವೀಟ್ ಮಾಡಿದ್ದು, ಈ ಟ್ವೀಟ್ ಭಾರಿ ಆಂಧ್ರ ಮತ್ತು ತೆಲಂಗಾಣದಲ್ಲಿ ವಿವಾದ ಹುಟ್ಟಿಸಿದೆ. ಮತ್ತೊಬ್ಬ ಸಹೋದರ ಪವನ್ ಕಲ್ಯಾಣ್ ಅವರ ಮೌನ ಸಮ್ಮತಿಯೂ ಇದಕ್ಕಿದೆ ಎನ್ನಲಾಗುತ್ತಿದೆ.
ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ, ಜನಸೇನಾ ಪಕ್ಷದ ಮುಖಂಡರೂ ಆಗಿರುವ ನಾಗಬಾಬು ಮಂಗಳವಾರ ಟ್ವೀಟ್ ಮಾಡಿ, ನಾಥೂರಾಮ್ ಗೋಡ್ಸೆ ಜಯಂತಿ ಶುಭಾಶಯ ಕೋರಿದ್ದಾರೆ.

ಗೋಡ್ಸೆ ನಿಜವಾದ ದೇಶಭಕ್ತ: ನಾಗಬಾಬು
'ನಾಥೋರಾಮ್ ಗೋಡ್ಸೆ ನಿಜವಾದ ದೇಶಭಕ್ತ. ಆತ ಗಾಂಧಿಯನ್ನು ಕೊಂದಿದ್ದು ಸರಿಯಾ-ತಪ್ಪಾ ಎಂಬುದು ಚರ್ಚೆ ಮಾಡಬಹುದಾದ ವಿಷಯ. ಆತನ ವಾದವನ್ನು ಯಾವ ಮೀಡಿಯಾಗಳು ಸಹ ಆಗ ತೋರಿಸಿರಲಿಲ್ಲ. ಅವು ಏನಿದ್ದರೂ ಅಧಿಕಾರದಲ್ಲಿದ್ದವರ, ಸರ್ಕಾರದ ಪರವಾಗಿ ಕೆಲಸ ಮಾಡಿದವು, (ಈಗಲೂ ಹಾಗೆಯೇ ಮಾಡುತ್ತಿವೆ) ಆದರೆ ಆತನ ದೇಶಭಕ್ತಿ ಪ್ರಶ್ನೆ ಮಾಡುವಂತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ ನಾಗ ಬಾಬು.

ಗೋಡ್ಸೆ ಆತ್ಮಕ್ಕೆ ಶಾಂತಿ ಸಿಗಲಿ: ನಾಗ ಬಾಬು
ಮತ್ತೊಂದು ಟ್ವೀಟ್ ನಲ್ಲಿ, ಗಾಂಧಿಯನ್ನು ಕೊಂದರೆ ತನಗೆ ಅಪಖ್ಯಾತಿ ಬರುತ್ತದೆ ಎಂದು ಗೊತ್ತಿದ್ದರೂ ಸಹ ತಾನು ಅಂದುಕೊಂಡಂತೆಯೇ ಮಾಡಿದ. ಆತ ಒಬ್ಬ ನಿಜವಾದ ದೇಶಭಕ್ತ. ಆತನ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ಆತನನ್ನು ಒಮ್ಮೆ ನೆನಪಿಸಿಕೊಳ್ಳಬೇಕು ಎನಿಸಿದೆ. ಪಾಪ ನಾಥೂರಾಂ ಗೋಡ್ಸೆ, ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾಗ ಬಾಬು ಟ್ವೀಟ್ ಮಾಡಿದ್ದಾರೆ.

ನಾಗಬಾಬು ಟ್ವೀಟ್ ಗೆ ಭಾರಿ ವಿರೋಧ
ಆದರೆ ಈ ಟ್ವೀಟ್ಗೆ ಭಾರಿ ವಿರೋಧ ಕೇಳಿಬಂತು. ಕಾಂಗ್ರೆಸ್ ಸೇರಿದಂತೆ ನೆಟ್ಟಿಗರು, ಸಾಮಾನ್ಯ ಜನರೂ ಸಹ ವಿರೋಧ ವ್ಯಕ್ತಪಡಿಸಿದರು. ವಿಶ್ವವೇ ಮೆಚ್ಚುವ ವ್ಯಕ್ತಿಯನ್ನು ಕೊಂದವನ ಬಗ್ಗೆ ಸಹಾನುಭೂತಿ ತೋರಿದ್ದಾರೆಂದು ನಾಗ ಬಾಬು ಅವರನ್ನು ತರಾಟೆಗೆ ತೆಗೆದುಕೊಂಡರು.

ಸ್ಪಷ್ಟನೆ ನೀಡಿದ ನಾಗಬಾಬು
ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ನಾಗ ಬಾಬು, ದಯವಿಟ್ಟು ನನ್ನನ್ನು ಅರ್ಥ ಮಾಡಿಕೊಳ್ಳಿ, ನಾಥೂರಾಂ ಮಾಡಿದ ಅಪರಾಧ ಕಾರ್ಯವನ್ನು ನಾನು ಸಮರ್ಥಿಸಿಕೊಂಡಿಲ್ಲ. ನಾಥೂರಾಂ ವರ್ಷನ್ ಸಹ ಜನರಿಗೆ ಗೊತ್ತಾಗಲಿ ಎಂದು ಹೇಳಿದೆ ಅಷ್ಟೆ. ನಾನು ಮಹಾತ್ಮಾ ಗಾಂಧಿ ಅವರ ದೊಡ್ಡ ಅನುಯಾಯಿ. ಈಗ ನನ್ನ ಮೇಲೆ ಆರೋಪ ಮಾಡುತ್ತಿರುವವರು ಗಾಂಧಿ ಬಗ್ಗೆ ತೋರುವ ಗೌರವಕ್ಕಿಂತಲೂ ನಾನು ತೋರುವ ಗೌರವ ದೊಡ್ಡದು ಎಂದು ನಾಗಬಾಬು ಹೇಳಿದ್ದಾರೆ.

ಪವನ್ ಕಲ್ಯಾಣ್ ಮೌನ ಸಮ್ಮತಿ?
ನಾಗ ಬಾಬು, ಪವನ್ ಕಲ್ಯಾಣ್ ಸ್ಥಾಪಿಸಿರುವ ಜನಸೇನಾ ಪಕ್ಷದ ಮುಖಂಡ. ಪವನ್ ಅವರ ಜನಸೇನಾ ಪಕ್ಷ ಬಿಜೆಪಿ ಜೊತೆ ಕೈ ಜೋಡಿಸಿದೆ. ಹಾಗಾಗಿ ಆರ್ಎಸ್ಎಸ್ ಪ್ರಮುಖರನ್ನು ಮೆಚ್ಚಿಸಲು ನಾಗ ಬಾಬು ಹೀಗೆ ಟ್ವಿಟ್ ಮಾಡಿದ್ದಾರೆ ಎನ್ನಲಾಗಿದೆ. ಅಣ್ಣನ ಟ್ವೀಟ್ ಬಗ್ಗೆ ಪವನ್ ತುಟಿ ಬಿಚ್ಚದೇ ಇರುವುದು ಅನುಮಾನಕ್ಕೆ ಕಾರಣವಾಗಿದ್ದು, ಇದಕ್ಕೆ ಪವನ್ ಕಲ್ಯಾಣ್ ಮೌನ ಸಮ್ಮತಿ ಇದೆಯಾ ಎಂಬ ಅನುಮಾನ ಮೂಡಿಸಿದೆ.


Click it and Unblock the Notifications











