ಯಾವುದೇ ರಿಹೆರ್ಸಲ್ ಇಲ್ಲದೇ ನಟಿಸುತ್ತಿದ್ದ ಏಕೈಕ ನಟನನ್ನು ಹೊಗಳಿದ ನಯನತಾರಾ!
ನಯನತಾರಾ ಈ ವರ್ಷ ಬ್ರೇಕಿಂಗ್ ನ್ಯೂಸ್ಗಳಿಂದ ಹೆಚ್ಚಾಗಿ ಸದ್ದು ಮಾಡಿದ ನಟಿ. ಮೊದಲಿಗೆ ತಮ್ಮ ಬಹುದಿನಗಳ ಗೆಳೆಯ ನಿರ್ದೇಶಕ ವಿಘ್ನೇಶ್ ಶಿವನ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಯನತಾರಾ ನಂತರ ಎರಡು ಮಕ್ಕಳಿಗೆ ಮದುವೆಯಾದ ಐದೇ ತಿಂಗಳಲ್ಲಿ ತಾಯಿ ಆಗುವುದರ ಮೂಲಕ ಸುದ್ದಿಗೀಡಾಗಿದ್ದರು. ನಂತರ ಸರೋಗಸಿ ವಿಧಾನದಲ್ಲಿ ಮಗು ಪಡೆದು ವಿವಾದಕ್ಕೆ ಒಳಗಾಗಿದ್ದರು ನಯನತಾರಾ.
ಇಷ್ಟೆಲ್ಲಾ ವಿವಾದಗಳ ನಡುವೆಯೂ ಓ2, ಗಾಡ್ಫಾದರ್ ಹಾಗೂ ಗೋಲ್ಡ್ ಎಂಬ ಚಿತ್ರಗಳಲ್ಲಿ ನಟಿಸಿದ್ದ ನಟಿ ನಯನತಾರಾ ಸದ್ಯ ತಮ್ಮ ಮತ್ತೊಂದು ಚಿತ್ರ 'ಕನೆಕ್ಟ್' ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೌದು, ನಯನತಾರಾ ನಟನೆಯ ಕನೆಕ್ಟ್ ಎಂಬ ಥ್ರಿಲ್ಲರ್ ಚಿತ್ರ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಾಳೆ ( ಡಿಸೆಂಬರ್ 22 ) ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ತೆಲುಗು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು.
ಮೂಲತಃ ಮಲಯಾಳಂ ನಟಿಯಾದರೂ ಸಹ ತಮಿಳು ಚಿತ್ರರಂಗದ ಮೂಲಕ ಹೆಚ್ಚು ಸಕ್ಸಸ್ ಗಳಿಸಿದ ನಯನತಾರಾ ತೆಲುಗು ಚಿತ್ರಗಳಲ್ಲೂ ಸಹ ಹೆಚ್ಚಾಗಿ ನಟಿಸಿದ್ದಾರೆ. ತೆಲುಗಿನ ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳಲ್ಲೂ ಬಣ್ಣ ಹಚ್ಚಿರುವ ನಟಿ ನಯನತಾರಾ ಈ ಸಂದರ್ಶನದಲ್ಲಿ ತೆಲುಗು ನಟರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಸದ್ಯ ಈ ಹೇಳಿಕೆಗಳು ವೈರಲ್ ಆಗಿವೆ.

ರಿಹರ್ಸೆಲ್ ಇಲ್ಲದೆ ನಟಿಸುತ್ತಿದ್ದ ನಟ
ಸಂದರ್ಶನದಲ್ಲಿ ಜೂನಿಯರ್ ಎನ್ಟಿಆರ್ ಬಗ್ಗೆ ವಿಶೇಷವಾಗಿ ಮಾತನಾಡಿದ ನಯನತಾರಾ "ಅವರು ಯಾವುದೇ ರೀತಿಯ ರಿಹೆರ್ಸಲ್ ಮಾಡಿದ್ದನ್ನು ನಾನು ನೋಡಿಯೇ ಇಲ್ಲ, ಅವರು ರಿಹೆರ್ಸಲ್ ಮಾಡದೇ ನಟಿಸುವ ಏಕೈಕ ನಟ. ಈಗ ರಿಹೆರ್ಸಲ್ ಮಾಡಬುಹುದೇನೋ ಆದರೆ ಆ ಸಮಯದಲ್ಲಿ ಅವರು ಯಾವುದೇ ರಿಹೆರ್ಸಲ್ ಮಾಡುತ್ತಿರಲಿಲ್ಲ" ಎಂದು ಹೇಳಿಕೆ ನೀಡಿದ್ದಾರೆ. ಎನ್ ಟಿ ಆರ್ ಹಾಗೂ ನಯನತಾರಾ ಸೂಪರ್ ಹಿಟ್ ಚಿತ್ರ ಅದುರ್ಸ್ನಲ್ಲಿ ತೆರೆಹಂಚಿಕೊಂಡಿದ್ದರು.

ಬಾಲಕೃಷ್ಣ ಬಗ್ಗೆ ನಯನತಾರಾ ಹೇಳಿದ್ದೇನು?
ಇನ್ನು ತೆಲುಗು ಚಿತ್ರರಂಗದ ಮತ್ತೋರ್ವ ದಿಗ್ಗಜ ನಟ ಬಾಲಕೃಷ್ಣ ಬಗ್ಗೆ ಸಹ ನಯನತಾರಾ ಮಾತನಾಡಿದ್ದಾರೆ. ಇನ್ನು ಬಾಲಕೃಷ್ಣ ಅವರ ವರ್ತನೆಗೆ ಚಿತ್ರರಂಗದವರು ಹಾಗೂ ಪ್ರೇಕ್ಷಕರು ಭಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಮೊಬೈಲ್ ಬಿಸಾಡುವ, ಕಿರುಚಾಡುವ ಬಾಲಕೃಷ್ಣ ಸ್ವೀಟೆಸ್ಟ್ ಪರ್ಸನ್ ಎಂದು ನಯನತಾರಾ ಹೊಗಳಿದ್ದಾರೆ. ಹೌದು, ಬಾಲಕೃಷ್ಣ ಎಂದರೆ ಎಲ್ಲರೂ ಭಯಪಡುತ್ತಾರೆ, ಆದರೆ ನನ್ನ ಜತೆ ಅವರು ತಮಾಷೆಯಿಂದ ಮಾತನಾಡುತ್ತಾ ಇದ್ದರು ಎಂದು ನಯನತಾರಾ ಹೇಳಿದ್ದಾರೆ.

ವಿಕ್ಟರಿ ವೆಂಕಟೇಶ್, ಚಿರಂಜೀವಿ ಕುರಿತು ನಯನ್ ಮಾತು
ಇನ್ನು ತಮ್ಮ ಮೊದಲ ಹೀರೊ ವಿಕ್ಟರಿ ವೆಂಕಟೇಶ್, ಮೆಗಾಸ್ಟಾರ್ ಚಿರಂಜೀವಿ ಹಾಗೂ ಅಕ್ಕಿನೇನಿ ನಾಗಾರ್ಜುನ ಬಗ್ಗೆ ಕೂಡ ನಯನತಾರಾ ಮಾತನಾಡಿದ್ದಾರೆ. "ವೆಂಕಟೇಶ್ ಅವರು ತೆಲುಗಿನಲ್ಲಿ ನನ್ನ ಮೊದಲ ಹೀರೊ, ಅವರ ಜತೆ ಕೆಲಸ ಮಾಡುವಾಗ ಕುಟುಂಬದವರ ಜತೆ ಕೆಲಸ ಮಾಡಿದಂತಾಗುತ್ತದೆ. ನಾಗಾರ್ಜುನ್ ಅವರು ಚಾರ್ಮರ್. ಚಿರಂಜೀವಿ ಅವರು ತುಸು ಸ್ಟಾರ್ಡಂ ಹಾಗೂ ಆಟಿಟ್ಯೂಡ್ ತೋರಿಸಬಹುದು, ಆದರೆ ಅವರು ತುಂಬಾ ಡೌನ್ ಟು ಅರ್ಥ್" ಎಂದು ನಯನತಾರಾ ಹೊಗಳಿದ್ದಾರೆ.

ರವಿತೇಜಾ ಹಾಗೂ ಪ್ರಭಾಸ್
ಇನ್ನೂ ಮುಂದುವರಿದು ಮಾತನಾಡಿದ ನಯನತಾರಾ "ರವಿತೇಜಾ ನನ್ನ ಆಪ್ತ ಸ್ನೇಹಿತರಲ್ಲಿ ಓರ್ವರು. ಪ್ರಭಾಸ್ ತುಂಬಾ ಒಳ್ಳೆಯ ಮನಸ್ಸುಳ್ಳವರು. ಅಂದಿನ ಸಮಯದಲ್ಲಿ ಚಿತ್ರೀಕರಣದ ಸಮಯದಲ್ಲಿ ಜೋಕ್ ಹೇಳುತ್ತಾ ಪುಟ್ಟ ಬಾಲಕನಂತೆ ಕುಣಿದಾಡುತ್ತಿದ್ದ ಪ್ರಭಾಸ್ ಇಂದು ದೊಡ್ಡ ಸ್ಟಾರ್. ಆತನನ್ನು ಈ ರೀತಿ ನೋಡುವುದಕ್ಕೆ ಖುಷಿಯಾಗುತ್ತೆ" ಎಂದು ಹೇಳಿಕೆ ನೀಡಿದ್ದಾರೆ.


Click it and Unblock the Notifications











