ಹೊಡೆದಾಡಿದ ಹೀರೋ-ನಿರ್ದೇಶಕ: ಇದೆಂತ ಹುಚ್ಚುತನ ಎಂದ ಪ್ರೇಕ್ಷಕರು!
ಸಿನಿಮಾ, ಸಾಮೂಹಿಕ ಶ್ರಮದಿಂದ ಉದ್ಭವಿಸುವ ಉತ್ಪನ್ನ. ಇಲ್ಲಿ ಒಬ್ಬರು, ಇಬ್ಬರು ಕೆಲಸ ಮಾಡಿದರೆ ಮಾತ್ರ ಸಾಕಾಗುವುದಿಲ್ಲ. ಬೇರೆ ಬೇರೆ ವಿಭಾಗದ ತಂತ್ರಜ್ಞರು, ಪರಿಣಿತರು ಬೇಕು, ಎಲ್ಲರೂ ತಮ್ಮ-ತಮ್ಮ ಅಭಿಪ್ರಾಯ ಮಂಡಿಸಬೇಕು, ಒಟ್ಟಿಗೆ ಕೆಲಸ ಮಾಡಬೇಕು.
ಹೀಗೆ ಬೇರೆ ಬೇರೆ ವಿಭಾಗದ, ಬೇರೆ ಬೇರೆ ಯೋಚನೆ, ಆಲೋಚನೆಗಳುಳ್ಳ ವ್ಯಕ್ತಿಗಳು ಒಂದು ಉತ್ಪನ್ನಕ್ಕಾಗಿ ಕೆಲಸ ಮಾಡುವಾಗ ಅವರ ನಡುವೆ ಸೃಜನಾತ್ಮಕ ಭೇದಗಳು ಬರುವುದು ಸಾಮಾನ್ಯ. ಇವು ಕೆಲವೊಮ್ಮೆ ಜಗಳಗಳಾಗಿಯೂ ಮಾರ್ಪಡುತ್ತವೆ, ಕೆಲವೊಮ್ಮೆ ತೀರದ ದ್ವೇಷಕ್ಕೂ ಕಾರಣವಾಗುತ್ತವೆ.
ಇತ್ತೀಚೆಗೆ ತೆಲುಗು ಸಿನಿಮಾ ತಂಡವೊಂದರ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋನಲ್ಲಿ ಸಿನಿಮಾದ ಹೀರೋ ಹಾಗೂ ನಿರ್ದೇಶಕ ಜಗಳವಾಡುತ್ತಿದ್ದಾರೆ. ಜಗಳದ ಕೊನೆಯ ಹಂತದಲ್ಲಂತೂ ಇಬ್ಬರೂ ಕೈ-ಕೈ ಸಹ ಮಿಲಾಯಿಸುತ್ತಾರೆ.

'ನೀತೋ' ಹೆಸರಿನ ತೆಲುಗು ಸಿನಿಮಾ ಬಿಡುಗಡೆ ಆಗಲಿಕ್ಕಿದ್ದು, ಸಿನಿಮಾದ ಟ್ರೈಲರ್ ಇದೀಗ ಹೊರಬರುವುದು ತುಸು ತಡವಾಗಿದ್ದರಿಂದ ಸಿನಿಮಾದ ಹೀರೋ ಅಭಿರಾಮ್ ವರ್ಮಾ ಹಾಗೂ ಸಿನಿಮಾದ ನಿರ್ದೇಶಕ ಬಾಲು ಶರ್ಮಾ ಟ್ರೈಲರ್ ಬಿಡುಗಡೆ ವಿಷಯವಾಗಿ ಜಗಳವಾಡುತ್ತಿರುವ ವಿಡಿಯೋ ಬಹಳ ವೈರಲ್ ಆಗಿದೆ. ಆದರೆ ಕೊನೆಗೆ ಗೊತ್ತಾದ ವಿಷಯವೆಂದರೆ ಈ ಜಗಳ ನಿಜವಲ್ಲ ಬದಲಿಗೆ ಸಿನಿಮಾದ ಪ್ರಚಾರಕ್ಕಾಗಿ ಮಾಡಿರುವ ಜಗಳ ಇದು.
ಸಿನಿಮಾದ ನಾಯಕ ಹಾಗೂ ನಿರ್ದೇಶಕ ಜೋಡಿ ಪ್ರಚಾರಕ್ಕಾಗಿ ಜಗಳ ಮಾಡಿಕೊಂಡಿದ್ದಾರೆ. ಆದರೆ ಅವರ ಪ್ರಚಾರ ತಂತ್ರ ವಿಫಲವಾಗಿದೆ. ಜಗಳ ಮಾಡಿದ ನಾಯಕ-ನಿರ್ದೇಶಕನನ್ನು ಜನ ಟೀಕಿಸುತ್ತಿದ್ದಾರೆ.
'ನೀತೋ' ಸಿನಿಮಾ, ಆಧುನಿಕ ಜೋಡಿಯ ಪ್ರೇಮ-ಕಾಮದ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ಅಭಿರಾಮ್ ವರ್ಮಾ ನಾಯಕ, ಸಾತ್ವಿಕಾ ನಾಯಕಿ. ಸಿನಿಮಾವನ್ನು ಎವಿಆರ್ ಸ್ವಾಮಿ, ಕಿರ್ತನಾ ಮತ್ತು ಸ್ನೇಹಲ್ ಒಟ್ಟಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ಒದಗಿಸಿರುವುದು ವಿವೇಕ್ ಸಾಗರ್, ಸಿನಿಮಾವು ಸೆಪ್ಟೆಂಬರ್ 23 ರಂದು ತೆರೆಗೆ ಬರಲಿದೆ.


Click it and Unblock the Notifications











