'ಭೀಷ್ಮಾ' ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ನಿತಿನ್
ತೆಲುಗು ಸಿನಿಮಾರಂಗದ ಖ್ಯಾತ ನಟ ನಿತಿನ್ ನಿರ್ದೇಶಕರಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇತ್ತೀಚಿಗಷ್ಟೆ ನಟ ಪ್ರಭಾಸ್ ತನ್ನ ಜಿಮ್ ಟ್ರೈನರ್ ಗೆ ಐಷಾರಾಮಿ ಕಾರನ್ನು ಗಿಫ್ಟ್ ಆಗಿ ನೀಡಿದ್ದರು. ಇದರ ಬೆನ್ನಲ್ಲೇ ಈಗ ನಟ ನಿತಿನ್ ಸಹ ಕಾರು ಉಡುಗೊರೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ನಿತಿನ್ ಇತ್ತೀಚಿಗೆ ರಿಲೀಸ್ ಆದ ಭೀಷ್ಮಾ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಇದೇ ಸಂತಸದಲ್ಲಿ ಭೀಷ್ಮಾ ಸಿನಿಮಾದ ನಿರ್ದೇಶಕ ವೆಂಕಿ ಕುಡುಮುಲ ಅವರಿಗೆ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇತ್ತೀಚಿಗೆ ನಿರ್ದೇಶಕ ವೆಂಕಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜನ್ಮದಿನಕ್ಕೆ ನಟ ನಿತಿನ್ ಕಾರನ್ನು ಗಿಫ್ಟಾಗಿ ನೀಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.
ಅಂದ್ಹಾಗೆ ನಿತಿನ್ ಗಿಫ್ಟಾಗಿ ನೀಡಿರುವುದು ಹೊಸ ರೇಂಜ್ ರೋವರ್ ಕಾರನ್ನು. ಬೂದು ಬಣ್ಣದ ರೇಂಜ್ ರೋವರ್ ಕಾರಿನ ಬಳಿ ನಟ ನಿತಿನ್ ಮತ್ತು ನಿರ್ದೇಶಕ ವೆಂಕಿ ಕುಡುಮುಲ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ನಿರ್ದೇಶಕ ವೆಂಕಿ " ನೀವು ಅತ್ಯುತ್ತಮ ಸಿನಿಮಾ ಮಾಡಿದಾಗ, ಉತ್ತಮ ವ್ಯಕ್ತಿ, ಉತ್ತಮ ಸಂಗತಿಗಳು ಸಂಭವಿಸುತ್ತವೆ, ಈ ಹುಟ್ಟುಹಬ್ಬದ ಉಡುಗೊರೆಗೆ ತುಂಬಾ ಧನ್ಯವಾದಗಳು ನಿತಿನ್ ಅಣ್ಣ" ಎಂದು ಬರೆದುಕೊಂಡು ಕಾರಿನ ಫೋಟೋವನ್ನು ಶೇರ್ ಮಾಡಿದ್ದಾರೆ.
ಭೀಷ್ಮಾ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಭೀಷ್ಮಾ ಸಕ್ಸಸ್ ನ ಬಳಿಕ ನಿರ್ದೇಶಕ ವೆಂಕಿ ಕುಡುಮುಲ ನಟ ರಾಮ್ ಚರಣ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ರಾಮ್ ಚರಣ್ ಆರ್ ಆರ್ ಆರ್ ಸಿನಿಮಾ ಪೂರ್ಣಗೊಂಡ ಬಳಿಕ ರಾಮ್ ಚರಣ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ.


Click it and Unblock the Notifications











