'ಭೀಮ್ಲಾ ನಾಯಕ್' ಬಿಡುಗಡೆಗೆ ಮುನ್ನಾ ಭಾವುಕರಾದ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ನಟನೆಯ 'ಭೀಮ್ಲಾ ನಾಯಕ್' ಸಿನಿಮಾ ಇಂದು (ಫೆಬ್ರವರಿ 24)ರಂದು ರಾಷ್ಟ್ರದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ (ಫೆಬ್ರವರಿ 23)ರ ರಾತ್ರಿ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ.
'ಭೀಮ್ಲಾ ನಾಯಕ್' ಪ್ರೀ ರಿಲೀಸ್ ಕಾರ್ಯಕ್ರಮ ಮೊದಲಿಗೆ ಫೆಬ್ರವರಿ 22 ರಂದು ಆಯೋಜಿತವಾಗಿತ್ತು. ಆದರೆ ಆಂಧ್ರದ ಕೈಗಾರಿಕಾ ಸಚಿವ ಮೇಕಪೇಟಿ ಗೌತಮ ರೆಡ್ಡಿ ಹೃದಯಾಘಾತದಿಂದ ನಿಧನ ಹೊಂದಿದ ಕಾರಣದಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಫೆಬ್ರವರಿ 23 ರ ರಾತ್ರಿ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿತವಾಗಿತ್ತು. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ರಾಣಾ ದಗ್ಗುಬಾಟಿ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, 'ಭೀಮ್ಲಾ ನಾಯಕ್' ಸಿನಿಮಾ ನಿರ್ದೇಶಕ ಸಾಗರ್, ನಿರ್ಮಾಪಕ ಸೂರ್ಯದೇವರ ನಾಗ ವಂಶಿ ಸೇರಿದಂತೆ ಹಲವು ನಟರು, ತಂತ್ರಜ್ಞರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಟ ಪವನ್ ಕಲ್ಯಾಣ್ ತುಸು ಭಾವುಕರಾಗಿಯೇ ಮಾತನಾಡಿದರು.

ಸಿನಿಮಾ ನನಗೆ ನೀಡಿದ ಭಿಕ್ಷೆ ದೊಡ್ಡದು: ಪವನ್
''ಸಿನಿಮಾ ನನಗೆ ಸಾಕಷ್ಟು ಭಿಕ್ಷೆ ನೀಡಿದೆ. ನನ್ನ ಈ ಜೀವನ, ಕೋಟ್ಯಂತರ ಮಂದಿ ಅಭಿಮಾನಿಗಳು ಎಲ್ಲವೂ ಸಿನಿಮಾ ನೀಡಿರುವ ಭಿಕ್ಷೆ. ಸಿನಿಮಾ ಇಲ್ಲದೇ ಇದ್ದಿದ್ದರೆ ನಾನು ಇಂದು ಏನಾಗಿದ್ದೇನೆಯೊ ಅದು ಆಗಿರುತ್ತಿರಲಿಲ್ಲ. ನಾನು ಪ್ರಜಾ ಸೇವೆಯಲ್ಲಿ ಇರಲು ಸಹ ಸಿನಿಮಾ ಕಾರಣ. ಇಷ್ಟು ಮಂದಿ ನನ್ನನ್ನು ಅಭಿಮಾನಿಸುತ್ತಿದ್ದಾರೆಂದರೆ ನಾನು ಏನೋ ಆಗಿಬಿಡುತ್ತೇನೆ ಎಂಬ ಅಹಂ ಇಲ್ಲ. ಬದಲಿಗೆ ಈ ದೇಶಕ್ಕೆ, ನಮ್ಮ ರಾಜ್ಯಗಳಿಗೆ, ನಮ್ಮ ಜನರಿಗೆ ಏನಾದರೂ ತುಸು ಸೇವೆ ಮಾಡಬೇಕು ಎನ್ನುವ ಆಶಯವಷ್ಟೆ ನನ್ನದು'' ಎಂದರು ಪವನ್ ಕಲ್ಯಾಣ್.

ಸಿನಿಮಾ ಬಿಟ್ಟು ಬೇರೆ ವೃತ್ತಿ ಗೊತ್ತಿಲ್ಲ: ಪವನ್
''ಸಿನಿಮಾ ಬಿಟ್ಟು ಬೇರೆ ವೃತ್ತಿ ನನಗೆ ಗೊತ್ತಿಲ್ಲ. ಇದರಿಂದಷ್ಟೆ ನಾನು ಸಂಪಾದನೆ ಮಾಡಬಲ್ಲೆ. ಇದನ್ನು ಬಿಟ್ಟು ಬೇರೆ ದಾರಿಯಿಲ್ಲ ಹಾಗಾಗಿ ಈಗ ಇಷ್ಟು ವರ್ಷವಾಗಿದೆ, ಅಭಿಮಾನಿಗಳಿದ್ದಾರೆ ಏನು ಮಾಡಿದರೂ ನಡೆಯುತ್ತದೆ ಎಂದುಕೊಳ್ಳುವುದರ ಬದಲು ಸಿನಿಮಾ ರಂಗಕ್ಕೆ ಮೊದಲು ಬಂದಾಗ ಹೇಗೆ ಶ್ರಮಹಾಕಿ, ಪ್ರೀತಿಯಿಂದ, ಏಕಾಗ್ರತೆಯಿಂದ ಕೆಲಸ ಮಾಡುತ್ತಿದ್ದೆನೊ ಹಾಗೆಯೇ ಈಗಲೂ ಮಾಡಲು ಯತ್ನಿಸುತ್ತೇನೆ. 'ತೊಲಿ ಪ್ರೇಮ', 'ಖುಷಿ' ಸಿನಿಮಾಗಳನ್ನು ಎಷ್ಟು ಕಷ್ಟಪಟ್ಟು, ಇಷ್ಟಪಟ್ಟು ಮಾಡಿದೆವೊ ಈಗಲೂ ಅದೇ ಎಚ್ಚರಿಕೆಯಿಂದ ಸಿನಿಮಾ ಮಾಡುತ್ತೇನೆ'' ಎಂದಿದ್ದಾರೆ ಪವನ್ ಕಲ್ಯಾಣ್.

ಹೊಸ ನಿರ್ದೇಶಕ ಸಾಗರ್ಗೆ ಹೊಗಳಿಕೆ
ರಾಜಕೀಯದಲ್ಲಿ ಇದ್ದರೂ ಸಹ ಸಿನಿಮಾಕ್ಕೆ ಸಾಕಷ್ಟು ಸಮಯ ನೀಡಿದೆ. ನಾನು ಮಾತ್ರವಲ್ಲ ನನ್ನ ರಾಜಕೀಯ ಕಾರ್ಯಕ್ರಮಗಳಿಗೆ ಅನುಗುಣವಾಗಿ ಸಿನಿಮಾ ತಂಡ ಚಿತ್ರೀಕರಣ ಮಾಡಿ ಸಹಕರಿಸಿತು. ಅವರಿಗೆ ನಾನು ಧನ್ಯವಾದ ಹೇಳಲೇ ಬೇಕು. ವಿಶೇಷವಾಗಿ ನಿರ್ಮಾಪಕರಾದ ಚಿನ್ನ ಬಾಬು ಹಾಗೂ ನಾಗ ವಂಶಿ ಅವರಿಗೆ ಧನ್ಯವಾದ'' ಎಂದ ಪವನ್, ಸಿನಿಮಾದ ನಿರ್ದೇಶಕ ಸಾಗರ್ ಬಗ್ಗೆ ವಿಶೇಷವಾಗಿ ಹೊಗಳಿದರು. ಅಮೆರಿಕದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸಾಗರ್ ಸಿನಿಮಾ ನಿರ್ದೇಶಕ ಆಗಬೇಕೆಂದು ಕನಸು ಕಂಡು ಭಾರತಕ್ಕೆ ಬಂದು ಈಗ ಸಿನಿಮಾ ಪಟ್ಟುಗಳನ್ನು ಕಲಿತು, ಉತ್ತಮ ನಿರ್ದೇಶಕ ಆಗುವತ್ತ ಸಾಗುತ್ತಿದ್ದಾರೆ'' ಎಂದರು ಪವನ್ ಕಲ್ಯಾಣ್.

ತ್ರಿವಿಕ್ರಮ್ ಶ್ರೀನಿವಾಸ್ ಇಲ್ಲದೆ ಈ ಸಿನಿಮಾ ಇಲ್ಲ: ಪವನ್
''ಈ ಸಿನಿಮಾ ಅಹಂಕಾರ ಮತ್ತು ಆತ್ಮಗೌರವದ ನಡುವಿನ ವ್ಯತ್ಯಾಸದ ಕತೆಯನ್ನು ಹೊಂದಿದೆ. ಸಿನಿಮಾದ ಮೂಲ ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದಲ್ಲಿ ಡ್ಯಾನಿಯಲ್ ಪಾತ್ರದಲ್ಲಿ ನಟಿಸಿರುವ ರಾಣಾ ದಗ್ಗುಬಾಟಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ'' ಎಂದು ಪವನ್ ಕಲ್ಯಾಣ್, ''ಈ 'ಭೀಮ್ಲಾ ನಾಯಕ್' ಸಿನಿಮಾ ಆಗಲು ಮುಖ್ಯ ಕಾರಣ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್. ಈ ಸಿನಿಮಾದ ಸಂಪೂರ್ಣ ಶ್ರೇಯ ಅವರಿಗೆ ಸಲ್ಲಬೇಕು. ಸಿನಿಮಾದ ಆದಿಯಿಂದ ಅಂತ್ಯದ ವರೆಗೆ ಅವರ ಶ್ರಮವೇ ಪ್ರಮುಖವಾದುದು. ಅವರು ಇಲ್ಲದೇ ಇದ್ದಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಸಿನಿಮಾದ ಕತೆಯನ್ನು ತಿದ್ದು, ಹೊಸದಾಗಿ ಅವರು ಪ್ರೆಸೆಂಟ್ ಮಾಡಿದ್ದಾರೆ. ಸಿನಿಮಾಕ್ಕೆ ಒಳ್ಳೆಯ ಸಂಭಾಷಣೆಯನ್ನೂ ಬರೆದಿದ್ದಾರೆ'' ಎಂದ ಪವನ್, ಸಂಗೀತ ನಿರ್ದೇಶಕ ತಮನ್, ಸಿನಿಮಾದ ನಾಯಕಿಯರು, ಕಾರ್ಯಕ್ರಮದಲ್ಲಿ ಹಾಜರಿದ್ದ ತೆಲಂಗಾಣ ಸಚಿವ, ಶಾಸಕರಿಗೆ ಧನ್ಯವಾದ ಹೇಳಿದರು.


Click it and Unblock the Notifications











