ವಿಡಿಯೋ: ಪವನ್ ಕಲ್ಯಾಣ್ ಅಭಿಮಾನಿಗಳಿಂದ ದಾಂಧಲೆ
ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾ ಇಂದು (ಏಪ್ರಿಲ್ 09) ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ ಸೇರಿ ಇನ್ನೂ ಕೆಲವು ರಾಜ್ಯಗಳಲ್ಲಿ ಬಿಡುಗಡೆ ಆಗಿದೆ.
ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಏಪ್ರಿಲ್ 8 ರ ಮಧ್ಯರಾತ್ರಿಯೇ ವಿಶೇಷ ಶೋಗಳನ್ನು ಆಯೋಜಿಸಲಾಗಿತ್ತು. ಆದರೆ ರಾಜ್ಯ ಸರ್ಕಾರದ ಆದೇಶದಿಂದಾಗಿ ವಿಶೇಷ ಶೋಗಳನ್ನು ಚಿತ್ರಮಂದಿರಗಳು ರದ್ದು ಮಾಡಿವೆ.
ಚಿತ್ರಮಂದಿರಗಳ ಈ ಹಠಾತ್ ನಿರ್ಧಾರದಿಂದ ರೊಚ್ಚಿಗೆದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಆಂಧ್ರದ ಹಲವು ಚಿತ್ರಮಂದಿರಗಳಲ್ಲಿ ದಾಂಧಲೆ ಮಾಡಿ, ಚಿತ್ರಮಂದಿರಗಳಿಗೆ ಹಾನಿ ಮಾಡಿದ್ದಾರೆ.

ಕೊರೊನಾ ಹೆಚ್ಚಳ ಆಗುತ್ತಿರುವ ಕಾರಣ ಆಂಧ್ರದಲ್ಲಿ ಚಿತ್ರಮಂದಿರಗಳು ವಿಶೇಷ ಶೋ ಪ್ರದರ್ಶನ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಹಾಗಾಗಿ ಏಪ್ರಿಲ್ 8 ರ ರಾತ್ರಿ ಹಾಗೂ ಏಪ್ರಿಲ್ 9 ರ ಬೆಳ್ಳಂಬೆಳಗ್ಗೆ ನಿಗದಿಯಾಗಿದ್ದ ಶೋಗಳನ್ನು ರದ್ದು ಮಾಡಲಾಗಿದೆ.
ಆಂಧ್ರ ಸರ್ಕಾರವು ಪವನ್ ಕಲ್ಯಾಣ್ ಮೇಲಿನ ರಾಜಕೀಯ ದ್ವೇಷದಿಂದ ಈ ರೀತಿ ಆದೇಶ ಹೊರಡಿಸಿದೆ ಎಂದು ಆರೋಪಿಸಿ ಹಲವೆಡೆ ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಚಿತ್ರಮಂದಿರಗಳಿಗೆ ಕಲ್ಲು ತೂರಿದ್ದಾರೆ. ಚಿತ್ರಮಂದಿರಗಳ ಒಳಗೂ ಸೀಟುಗಳು, ಸ್ಕ್ರೀನ್ಗಳಿಗೆ ಹಾನಿ ಮಾಡಿದ್ದಾರೆ. ದಾಂಧಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಆಂಧ್ರದ ಗದ್ವಾಲ, ನೆಲ್ಲೂರು, ಕಡಪ, ಅನಂತಪುರಂ, ಒಂಗೋಲೆ ಇನ್ನೂ ಕೆಲವು ಕಡೆಗಳಲ್ಲಿ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ದಾಂಧಲೆ ನಡೆಸಿದ್ದಾರೆ. ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
'ವಕೀಲ್ ಸಾಬ್' ಬಿಡುಗಡೆ ವೇಳೆಗೆ ಕೊರೊನಾ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗಷ್ಟೆ ಅವಕಾಶ ನೀಡಲಾಗಿದೆ. ಪವನ್ಕಲ್ಯಾಣ್ಗೆ ಸಾಕಷ್ಟು ಅಭಿಮಾನಿಗಳಿರುವ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಆಂಧ್ರ, ತೆಲಂಗಾಣಗಳಲ್ಲಿ ಚಿತ್ರಮಂದಿರಗಳ ಮೇಲೆ ಪ್ರಸ್ತುತ ಯಾವುದೇ ನಿರ್ಬಂಧ ಹೇರಿಲ್ಲವಾದರೂ ತೆಲಂಗಾಣ ರಾಜ್ಯದಲ್ಲಿ ನಿರ್ಬಂಧ ಹೇರುವ ಬಗ್ಗೆ ಚರ್ಚೆ ಜಾರಿಯಲ್ಲಿದೆ. ಈ ನಡುವೆ ಆಂಧ್ರ ಪ್ರದೇಶ ಸರ್ಕಾರವು ಚಿತ್ರಮಂದಿರಗಳು ವಿಶೇಷ ಶೋ ಪ್ರದರ್ಶಿಸುವಂತಿಲ್ಲ ಎಂದಿದೆ.


Click it and Unblock the Notifications











