ಸಿನಿಮಾ ನಿಲ್ಲಿಸಿದಿರಿ, ಈಗೇನು ಉಸಿರಾಟವನ್ನೂ ನಿಲ್ಲಿಸುತ್ತೀರಾ? ಪವನ್ ಕಲ್ಯಾಣ್ ಗುಡುಗು
ಆಂಧ್ರ ಪ್ರದೇಶದಲ್ಲಿ ಪವನ್ ಕಲ್ಯಾಣ್ ಹಾಗೂ ಆಡಳಿತ ಪಕ್ಷ ವೈಎಸ್ಆರ್ ಕಾಂಗ್ರೆಸ್ ನಡುವಿನ ತಿಕ್ಕಾಟ ಒಳ್ಳೆ ರಾಜಕೀಯ ಮನೊರಂಜನೆ ಒದಗಿಸುತ್ತಿವೆ.
ಪವನ್ ಕಲ್ಯಾಣ್ ಅಂತೂ ಥೇಟ್ ಸಿನಿಮಾ ಮಾದರಿಯಲ್ಲಿಯೇ ರಾಜಕೀಯ ಭಾಷಣಗಳನ್ನು ಮಾಡುತ್ತಿದ್ದಾರೆ. ಕಾರು ಟಾಪ್ ಏರಿ ಎಂಟ್ರಿ ಕೊಡುವುದು, ಧರಿಸಿದ್ದ ಚಪ್ಪಲಿ ತೋರಿಸಿ ವಿಪಕ್ಷಗಳಿಗೆ ಬೆದರಿಕೆ ಹಾಕುವುದು, ಆಡಳಿತ ಪಕ್ಷದ ಕಾರ್ಯಕರ್ತರು, ಮುಖಂಡರನ್ನುದ್ದೇಶಿಸಿ ಸಿನಿಮಾ ರೀತಿ ಮಾಸ್ ಡೈಲಾಗ್ಗಳನ್ನು ಹೊಡೆಯುವುದು ಪ್ರತಿದಿನವೂ ಜಾರಿಯಲ್ಲಿದೆ. ಇದರಿಂದಾಗಿ ಪವನ್ಗೆ ಜನಬೆಂಬಲವೂ ತುಸು ಹೆಚ್ಚೇ ದೊರೆಯುತ್ತಿದೆ.
ಅಂತೆಯೇ ಪವನ್ರನ್ನು ನಿಯಂತ್ರಿಸಲು ಸಹ ಆಂಧ್ರ ಸರ್ಕಾರ ಹಲವು ವಿಧವಾಗಿ ಯತ್ನಗಳನ್ನು ನಡೆಸುತ್ತಲೇ ಇದೆ. ಇದೀಗ ಪವನ್ ಕಲ್ಯಾಣ್, ಆಂಧ್ರ ಚುನಾವಣಾ ಪ್ರಚಾರಕ್ಕಾಗಿ ಹೊಸ ದೈತ್ಯ ವಾಹನವೊಂದನ್ನು ಖರೀದಿಸಿದ್ದಾರೆ. ಇದಕ್ಕೆ ವರಾಹಿ ಎಂದು ಹೆಸರಿಟ್ಟಿದ್ದಾರೆ. ಆದರೆ ಈ ವಾಹನದ ಬಗ್ಗೆ ಸರ್ಕಾರವು ಆಕ್ಷೇಪಣೆ ಎತ್ತಿದೆ. ಇದನ್ನೇ ಇಟ್ಟುಕೊಂಡು ಪವನ್ ಕಲ್ಯಾಣ್ ಮತ್ತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಾಹನದ ಬಣ್ಣ ಬದಲಿಸುವಂತೆ ಸೂಚಿಸಿದೆ ಸರ್ಕಾರ
ಪವನ್ ಕಲ್ಯಾಣ್ರ ಹೊಸ ಚುನಾವಣಾ ವಾಹನಕ್ಕೆ ಮಿಲ್ಟ್ರಿ ವಾಹನಗಳಿಗೆ ಬಳಸಲಾಗುವ ಹಸಿರು ಬಣ್ಣವನ್ನು ಬಳಿಯಲಾಗಿದೆ. ಪವನ್ರ ವಾಹನ ಒಂದು ರೀತಿ ಮಿಲ್ಟ್ರಿ ವಾಹನದ ಮಾದರಿಯಲ್ಲಿಯೇ ಕಾಣುತ್ತದೆ. ಇದಕ್ಕೆ ಆಂಧ್ರದ ಸಾರಿಗೆ ಇಲಾಖೆ ಆಕ್ಷೇಪಣೆ ತೆಗೆದಿದ್ದು, ಆ ಬಣ್ಣವನ್ನು ಬಳಸುವಂತಿಲ್ಲವೆಂದಿದ್ದು, ವಾಹನದ ಬಣ್ಣ ಬದಲಿಸುವಂತೆ ಸೂಚಿಸಿದೆ. ಆದರೆ ಇದು ಪವನ್ಗೆ ಹಿಡಿಸಿಲ್ಲ. ಇದೇ ಕಾರಣಕ್ಕೆ ಪವನ್ ಟ್ವೀಟ್ಗಳನ್ನು ಮಾಡಿ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

'ಸಿನಿಮಾ ನಿಲ್ಲಿಸಿದಿರಿ, ನನಗೆ ನಾನು ಅಡೆತಡೆ ಒಡ್ಡಿದಿರಿ'
''ಮೊದಲಿಗೆ ನೀವು ನನ್ನ ಸಿನಿಮಾಗಳನ್ನು ನಿಲ್ಲಿಸಿದಿರಿ. ವಿಶಾಖಪಟ್ಟಣಂನಲ್ಲಿ ನನ್ನನ್ನು ನನ್ನ ವಾಹನದಿಂದಲೂ ಕೆಳಗಿಳಿಯಲು ಹಾಗೂ ನನ್ನ ಹೋಟೆಲ್ ರೂಮ್ನಿಂದ ಹೊರಗೆ ಬರದಂತೆ ತಡೆದಿರಿ. ಬಲವಂತವಾಗಿ ನನ್ನನ್ನು ನಗರದಿಂದ ಹೊರಗೆ ಕಳಿಸಿದಿರಿ. ಮಂಗಳಗಿರಿಯಲ್ಲಿ ನನ್ನ ಕಾರನ್ನು ತಡೆದಿರಿ, ನಾನು ನಡೆದಾಡಲು ಸಹ ಬಿಡಲಿಲ್ಲ. ಈಗ ನನ್ನ ವಾಹನದ ಬಣ್ಣದ ಬಗ್ಗೆ ತಕರಾರು ತೆಗೆದಿದ್ದೀರಿ. ಇನ್ನೇನು ನಾನು ಉಸಿರಾಡುವುದನ್ನೂ ತಡೆದುಬಿಡುತ್ತೀರಾ? ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದಾರೆ.

ಈ ಅಂಗಿ ಧರಿಸಬಹುದೇ? ವ್ಯಂಗ್ಯವಾಗಿ ಅನುಮತಿ ಕೇಳಿದ ಪವನ್
ಮತ್ತೊಂದು ಟ್ವೀಟ್ನಲ್ಲಿ ತಮ್ಮ ಅಂಗಿಯೊಂದರ ಚಿತ್ರವನ್ನು ಪ್ರಕಟಿಸಿ ಇದನ್ನಾದರೂ ನಾನು ಧರಿಸಬಹುದಾ? ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದಾರೆ. ಪವನ್ ಕಲ್ಯಾಣ್ ಹಂಚಿಕೊಂಡಿರುವ ಅಂಗಿಯು ಸೈನಿಕರ ಸಮವಸ್ತ್ರದ ಮಾದರಿಯಲ್ಲಿದೆ. ಪವನ್ರ ವಾಹನ ಸೈನಿಕರ ವಾಹನದ ಬಣ್ಣದಲ್ಲಿರುವ ಕಾರಣ ಅದಕ್ಕೆ ಆಕ್ಷೇಪಣೆಯನ್ನು ಸರ್ಕಾರ ಎತ್ತಿದ್ದಾರೆ. ಹಾಗಾಗಿ ಮಿಲಿಟರಿ ಸಮವಸ್ತ್ರದ ಮಾದರಿಯ ಅಂಗಿಯನ್ನಾದರೂ ಬಳಸಬಹುದೇ ಎಂದು ಪವನ್ ಸರ್ಕಾರವನ್ನು ವ್ಯಂಗ್ಯವಾಗಿ ಅನುಮತಿ ಕೇಳಿದ್ದಾರೆ.

ಕೊಲ್ಲುವೆ, ಕತ್ತರಿಸುವೇ, ಚಪ್ಪಲಿಯಲ್ಲಿ ಹೊಡೆಯುವೆ ಎಂದಿದ್ದ ಪವನ್
ಪವನ್ ಕಲ್ಯಾಣ್ 'ಜನಸೇನಾ' ಪಕ್ಷದ ಸಂಸ್ಥಾಪಕರಾಗಿದ್ದು ಪಕ್ಷವನ್ನು ಬಲಗೊಳ್ಳಿಸುವ ನಿಟ್ಟಿನಲ್ಲಿ ಕಳೆದ ಕೆಲವರ್ಷಗಳಿಂದಲೂ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅದರಲ್ಲಿಯೂ ಜಗನ್ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿಗಳನ್ನು ನಡೆಸುತ್ತಲೇ ಬಂದಿರುವ ಪವನ್ ಕಲ್ಯಾಣ್, ಕೆಲವು ದಿನಗಳ ಹಿಂದೆಯಂತೂ ಕಾರ್ಯಕ್ರಮವೊಂದರಲ್ಲಿ, ಕೊಲ್ಲುವೆ, ಕತ್ತರಿಸುವೆ ಎಂದೆಲ್ಲ ಎಚ್ಚರಿಕೆಗಳನ್ನು ನೀಡಿದ್ದರು. ಆಂಧ್ರದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು ಎಲ್ಲ 117 ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪವನ್ ಯತ್ನಿಸುತ್ತಿದ್ದಾರೆ.


Click it and Unblock the Notifications











