ಆಂಧ್ರದಲ್ಲಿ ಮತ್ತೆ 'ಸಿನಿಮಾ ರಾಜಕೀಯ', ಬಾಲಯ್ಯನ ಸಿನಿಮಾ ಪ್ರೀರಿಲೀಸ್ ಇವೆಂಟ್ಗೆ ಅವಕಾಶ ನಿರಾಕರಣೆ!
ಆಂಧ್ರ ಪ್ರದೇಶದಲ್ಲಿ ರಾಜಕೀಯ ಮತ್ತು ಸಿನಿಮಾ ಬೆರೆತು ಹೋಗಿ ಬಹುಸಮಯವೇ ಆಗಿದೆ. ಮೊದಲೆಲ್ಲ ಸಿನಿಮಾದವರು ರಾಜಕೀಯಕ್ಕೆ ಸೇರಿ ರಾಜಕೀಯ ಮಾಡುತ್ತಿದ್ದರು. ಈಗ ರಾಜಕಾರಣಿಗಳು ಸಿನಿಮಾದವರ ವಿರುದ್ಧ 'ರಾಜಕೀಯ' ಮಾಡುತ್ತಿದ್ದಾರೆ.
ಮುಖ್ಯ ಮಂತ್ರಿ ಜಗನ್ ಸರ್ಕಾರಕ್ಕೆ ಸಿನಿಮಾ ರಂಗದವರ ಮೇಲೆ ಅದೇನೋ ಸಿಟ್ಟಿದ್ದಂತಿದೆ. ಮೊದಲಿಗೆ ಪವನ್ ಕಲ್ಯಾಣ್ ವಿರುದ್ಧ ಅವರ ಸಿನಿಮಾಗಳ ವಿರುದ್ಧ ಸಮರ ನಡೆಸಿದ ಜಗನ್ ಈಗ ನಟ ನಂದಮೂರಿ ಬಾಲಕೃಷ್ಣ ವಿರುದ್ಧ ತಮ್ಮ ರಾಜಕೀಯ ವರಸೆಗಳನ್ನು ಪ್ರಯೋಗಿಸುತ್ತಿದ್ದಾರೆ.
ಟಿಡಿಪಿ ಪಕ್ಷದ ಶಾಸಕರೂ ಆಗಿರುವ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದ್ದು, ಅದರ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಂಧ್ರದಲ್ಲಿ ಜಗನ್ ಸರ್ಕಾರ ಅನುಮತಿ ನಿರಾಕರಿಸಿದೆ.

'ವೀರ ಸಿಂಹ ರೆಡ್ಡಿ' ಸಿನಿಮಾಕ್ಕೆ ಸಮಸ್ಯೆ
ನಂದಮೂರಿ ಬಾಲಕೃಷ್ಣ ನಟಿಸಿರುವ 'ವೀರ ಸಿಂಹ ರೆಡ್ಡಿ' ಸಿನಿಮಾವು ಜನವರಿ 12 ರಂದು ತೆರೆಗೆ ಬರಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಆಂಧ್ರದ ಒಂಗೋಲು ಪಟ್ಟಣದ ಎಬಿಎಂ ಗ್ರೌಂಡ್ನಲ್ಲಿ ಆಯೋಜಿಸಲು ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ ಸಿದ್ಧರಾಗಿದ್ದರು. ಎರಡು ದಿನಗಳಿಂದಲೂ ಇದಕ್ಕಾಗಿ ಸಿದ್ಧತೆಯೂ ಭರದಿಂದ ಸಾಗಿತ್ತು. ಮೈದಾನವನ್ನು ಸಜ್ಜು ಮಾಡಲಾಗುತ್ತಿತ್ತು. ಭಾರಿ ಸಂಖ್ಯೆಯಲ್ಲಿ ಪಾಸುಗಳನ್ನು ಪ್ರಿಂಟ್ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಶಾಂತಿ ಭಂಗ, ಟ್ರಾಫಿಕ್ ಸಮಸ್ಯೆ ಎಂದು ಕಾರಣ
ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಬರುವುದರಿಂದ ಪಟ್ಟಣದ ಶಾಂತಿ ಭಂಗವಾಗಲಿದೆ. ಟ್ರಾಫಿಕ್ ಸಮಸ್ಯೆ ಉದ್ಭವಿಸಲಿದೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗಲಿದೆ ಎಂದು ಕಾರಣ ನೀಡಿ ಪ್ರೀ ರಿಲೀಸ್ ಇವೆಂಟ್ ಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಆದರೆ ಪಟ್ಟಣದ ಹೊರಗೆ ದೂರ ಪ್ರದೇಶದಲ್ಲಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮಾಡಿಕೊಳ್ಳಿ ಎಂದು ಪೊಲೀಸರು ಒಂದು ಸ್ಥಳವನ್ನು ಸೂಚಿಸಿದ್ದಾರೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಆದರೆ ಅಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯುತ್ತದೆಯಾ ಕಾದು ನೋಡಬೇಕಿದೆ.

ಚಿರಂಜೀವಿಗೂ ಸಮಸ್ಯೆ?
ಇನ್ನು ಅದೇ ದಿನ ಬಿಡುಗಡೆ ಆಗಲಿರುವ ಚಿರಂಜೀವಿ ನಟಿಸಿರುವ 'ವಾಲ್ತೇರು ವೀರಯ್ಯ' ಸಿನಿಮಾದ ಪ್ರೀ ರಿಲೀಸ್ ಇವೆಂಟ್ಗೂ ಆಂಧ್ರ ಸರ್ಕಾರ ಸಮಸ್ಯೆ ನೀಡುತ್ತಿದೆ ಎನ್ನಲಾಗಿದೆ. 'ವಾಲ್ತೇರು ವೀರಯ್ಯ' ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಜನವರಿ 8 ರಂದು ವೈಜಾಗ್ ಪಟ್ಟಣದಲ್ಲಿ ನಡೆಸಲು ಯೋಜಿಸಲಾಗಿದೆ. ಆದರೆ ಅಲ್ಲಿಯೂ ಸಹ ಅಧಿಕಾರಿಗಳು ಕಾರ್ಯಕ್ರಮಕ್ಕೆ ಸಮಸ್ಯೆ ನೀಡುತ್ತಿದ್ದಾರೆ. ಕಾರ್ಯಕ್ರಮದ ವೇದಿಕೆ ಬದಲಾಯಿಸುವಂತೆ ಕೋರಿದ್ದಾರೆ ಎನ್ನಲಾಗುತ್ತಿದೆ.

ಚಿತ್ರರಂಗದವರ ವಿರುದ್ಧ ನಿಂತಿರುವ ಸರ್ಕಾರ
ಜಗನ್ ಸರ್ಕಾರವು ಆರಂಭದಿಂದಲೂ ಸಿನಿಮಾದವರ ವಿರುದ್ಧ ನಿಲವುಗಳನ್ನು ತೆಗೆದುಕೊಂಡಿದೆ. ಚಿತ್ರಮಂದಿರಗಳ ಮೇಲೆ ನಿಯಮಗಳನ್ನು ಹೇರಿತ್ತು. ಸಿನಿಮಾ ಟಿಕೆಟ್ ಮಾರಾಟವನ್ನು ಸರ್ಕಾರವೇ ಮಾಡುವುದಾಗಿ ಘೋಷಿಸಿತು. ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ಇಳಿಸಿತು. ಆಂಧ್ರದಲ್ಲಿ ಹಲವಾರು ಚಿತ್ರಮಂದಿರಗಳನ್ನು ಬಂದ್ ಮಾಡಿಸಿತು. ಫ್ಯಾನ್ಸ್ ಶೋ, ಬೆನಿಫಿಟ್ ಶೋಗಳನ್ನು ಸಹ ಕ್ಯಾನ್ಸಲ್ ಮಾಡಿತು. ಈಗ ಸ್ಟಾರ್ ನಟ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್ಗೆ ಸಮಸ್ಯೆ ನೀಡುತ್ತಿದೆ.


Click it and Unblock the Notifications











