ರಾಜಕೀಯ ನನ್ನಿಂದ ದೂರ ಆಗಿಲ್ಲ; ಟ್ವಿಟರ್ನಲ್ಲಿ ಡೈಲಾಗ್ ಹೊಡೆದು ತಲೆಗೆ ಹುಳಬಿಟ್ಟ ಚಿರು!
2008ರಲ್ಲಿ ತನ್ನದೇ ಆದ ಪ್ರಜಾ ರಾಜ್ಯಂ ಪಕ್ಷವನ್ನು ಸ್ಥಾಪಿಸಿ ಸಾಮಾಜಿಕ ನ್ಯಾಯ ಕೊಡಿಸುವುದೇ ನಮ್ಮ ಪಕ್ಷದ ಧ್ಯೇಯೋದ್ದೇಶ ಎಂದು ಘೋಷಿಸಿದ್ದ ನಟ ಚಿರಂಜೀವಿ ನಂತರ ರಾಜಕೀಯದಲ್ಲಿ ಕೊಂಚ ಏಳು ಹಾಗೂ ಹೆಚ್ಚು ಬೀಳುಗಳನ್ನು ಕಂಡು ಕಾಲಕ್ರಮೇಣ ರಾಜಕೀಯ ಕ್ಷೇತ್ರದಿಂದ ದೂರ ಸರಿದು ಸದ್ಯ ಈ ಹಿಂದಿನಂತೆ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ರಾಜಕೀಯ ಪ್ರವೇಶದ ನಂತರ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದ್ದ ಚಿರಂಜೀವಿ ಎರಡು ಮೂರು ಚಿತ್ರಗಳಲ್ಲಿ ಅತಥಿ ಪಾತ್ರದಲ್ಲಿ ನಟಿಸಿದ್ದರು ಹಾಗೂ 2017ರಲ್ಲಿ ಖೈದಿ ನಂಬರ್ 150 ಚಿತ್ರದ ಮೂಲಕ ನಾಯಕನಾಗಿ ಕಮ್ಬ್ಯಾಕ್ ಮಾಡಿದ್ದರು. ಈ ಸಿನಿಮಾ ನಂತರ ಸೈರಾ ನರಸಿಂಹ ರೆಡ್ಡಿ ಹಾಗೂ ಇತ್ತೀಚೆಗಷ್ಟೆ ಆಚಾರ್ಯ ಸಿನಿಮಾದಲ್ಲಿ ನಟಿಸಿದ್ದ ಚಿರಂಜೀವಿ ಇದೀಗ ಗಾಡ್ ಫಾದರ್ ಎಂಬ ಸಿನಿಮಾದಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ.
ಈ ಚಿತ್ರ ಇದೇ ದಸರಾ ಪ್ರಯುಕ್ತ ತೆರೆಗೆ ಅಪ್ಪಳಿಸಲಿದ್ದು, ಇದರ ನಡುವೆಯೇ ಇದೀಗ ನಟ ಚಿರಂಜೀವಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಟ್ವೀಟ್ ಕುತೂಹಲ ಹುಟ್ಟುಹಾಕಿದೆ. ತಮ್ಮ ದನಿಯಲ್ಲಿ ಡೈಲಾಗ್ ಒಂದನ್ನು ರೆಕಾರ್ಡ್ ಮಾಡಿ ಆ ಆಡಿಯೊವನ್ನು ಚಿರು ಹಂಚಿಕೊಂಡಿದ್ದು, ಇದು ರಾಜಕೀಯಕ್ಕೆ ಸಂಬಂಧಿಸಿರುವುದರಿಂದ ಕೆಲವರು ಮತ್ತೆ ಚಿರು ರಾಜಕೀಯಕ್ಕೆ ಬರ್ತಾರಾ ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

"ನಾನು ರಾಜಕೀಯದಿಂದ ದೂರ ಉಳಿದಿದ್ದೇನೆ ಹೊರತು ರಾಜಕೀಯ ನನ್ನಿಂದ ದೂರಾಗಿಲ್ಲ" ಎಂಬ ತಮ್ಮದೇ ದನಿಯ ಡೈಲಾಗ್ ಅನ್ನು ಚಿರು ಹಂಚಿಕೊಂಡಿದ್ದಾರೆ. ಇನ್ನು ಈ ಡೈಲಾಗ್ ಅವರ ಅಭಿನಯದ ಮುಂದಿನ ಸಿನಿಮಾ ಗಾಡ್ ಫಾದರ್ನ ಡೈಲಾಗ್ ಆಗಿದೆ. ಮಲಯಾಳಂನ ಬ್ಲಾಕ್ಬಸ್ಟರ್ ಸಿನಿಮಾ ಲೂಸಿಫರ್ನ ರಿಮೇಕ್ ಆಗಿರುವ ಗಾಡ್ ಫಾದರ್ ಪೊಲಿಟಿಕಲ್ ಡ್ರಾಮಾ ಆಗಿದ್ದು, ಈ ಡೈಲಾಗ್ ಮೂಲಕ ಚಿರು ಚಿತ್ರ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ ಅಷ್ಟೇ. ಚಿತ್ರ ಅಕ್ಟೋಬರ್ 5ರ ವಿಜಯದಶಮಿ ಪ್ರಯುಕ್ತ ತೆರೆಕಾಣಲಿದೆ.


Click it and Unblock the Notifications











