ಥಿಯೇಟರ್ ಒಳಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದ ಪ್ರಭಾಸ್ ಅಭಿಮಾನಿಗಳು!
ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪ್ರಭಾಸ್ ಸಹ ಒಬ್ಬರು. 'ಬಾಹುಬಲಿ' ಸಿನಿಮಾದ ಬಳಿಕ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ. ಪ್ರಭಾಸ್ಗೆ ಸಹ ಅಭಿಮಾನಿಗಳೆಂದರೆ ಪ್ರಾಣ, ಅವರನ್ನು ಡಾರ್ಲಿಂಗ್ಸ್ ಎಂದು ಸಂಭೋದಿಸುತ್ತಾರೆ.
ಆದರೆ ಕೆಲವೊಮ್ಮೆ ಈ ವೀರಾಭಿಮಾನ ಎಲ್ಲೆ ಮೀರಿ ಹೋಗಿ ಸಾಕಷ್ಟು ಅನಾಹುತಗಳಿಗೆ ಸಹ ಕಾರಣವಾಗುತ್ತದೆ. ಆಂಧ್ರ-ತೆಲಂಗಾಣಗಳಲ್ಲಿ ಅಂತೂ ಈ ರೀತಿ ಎಲ್ಲೆ ಮೀರಿದ ಅಭಿಮಾನದ ಪ್ರದರ್ಶನ ಆಗಾಗ್ಗೆ ಆಗುತ್ತಲೇ ಇರುತ್ತದೆ.
ಇದೀಗ ಪ್ರಭಾಸ್ ಅಭಿಮಾನಿಗಳು ಇದೇ ರೀತಿಯ ಹುಚ್ಚು ಅಭಿಮಾನ ಪ್ರದರ್ಶಿಸಿ ಚಿತ್ರಮಂದಿರದ ಒಳಗೆ ಬೆಂಕಿ ಹಚ್ಚಿ, ಹುಚ್ಚಾಟ ಮೆರೆದಿದ್ದಾರೆ. ಇದರಿಂದ ಪಾಪ, ಚಿತ್ರಮಂದಿರದವರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಆಗಿರುವುದಿಷ್ಟು, ಅಕ್ಟೋಬರ್ 23 ರಂದು ನಟ ಪ್ರಭಾಸ್ರ ಹುಟ್ಟುಹಬ್ಬ. ಈ ಕಾರಣದಿಂದ ಆಂಧ್ರ ಹಾಗೂ ತೆಲಂಗಾಣಗಳ ಹಲವು ಕಡೆ ಪ್ರಭಾಸ್ ಅಭಿಮಾನಿಗಳು ಅವರ ಹಳೆಯ ಸಿನಿಮಾಗಳ ಮರು ಪ್ರದರ್ಶನವನ್ನು ಏರ್ಪಡಿಸಿದ್ದರು. ಕೆಲವೊಂದು ಚಿತ್ರಮಂದಿರದಲ್ಲಿ ನಾಲ್ಕು ಶೋಗೆ ಪ್ರಭಾಸ್ರ ನಾಲ್ಕು ಹಿಟ್ ಸಿನಿಮಾಗಳನ್ನು ಪ್ರದರ್ಶಿಸಲಾಯಿತು. ಹಲೆವೆಡೆ ಈ ವಿಶೇಷ ಶೋಗಳು ತುಂಬಿದ ಗೃಹಗಳ ಪ್ರದರ್ಶನಗಳನ್ನು ಕಂಡವು.

ಚಿತ್ರಮಂದಿರದ ಒಳಗೆ ಬೆಂಕಿ!
ಅಂತೆಯೇ ಪಶ್ಚಿಮ ಗೋಧಾವರಿ ಜಿಲ್ಲೆಯ ತಾಡಪಲ್ಲಿ ಪಟ್ಟಣದ ವೆಂಕಟರಾಮ ಚಿತ್ರಮಂದಿರದಲ್ಲಿ ಪ್ರಭಾಸ್ ಅಭಿಮಾನಿ ಸಂಘವು, ಪ್ರಭಾಸ್ರ ಹಳೆಯ ಸಿನಿಮಾಗಳನ್ನು ಪ್ರದರ್ಶಿಸಿತ್ತು. ಪ್ರಭಾಸ್ರ 'ಬಿಲ್ಲಾ' ಸಿನಿಮಾ ಪ್ರದರ್ಶನ ಆಗುವ ವೇಳೆ, ಅಭಿಮಾನಿಗಳು ಆವೇಶಕ್ಕೆ ಒಳಗಾಗಿ ಚಿತ್ರಮಂದಿರದ ಒಳಗೆ ಪಟಾಕಿ ಹೊಡೆದಿದ್ದಾರೆ. ಇದರಿಂದಾಗಿ ಚಿತ್ರಮಂದಿರದ ಒಳಗೆ ಬೆಂಕಿ ಹತ್ತುಕೊಂಡಿತ್ತು.

ಪೋಸ್ಟರ್ ಹಿಡಿದು ನರ್ತಿಸಿರುವ ಅಭಿಮಾನಿಗಳು
ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಕೆಲವು ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ ಕೆಲವರು ಮಾತ್ರ ಬೆಂಕಿ ಹತ್ತಿದ್ದರೂ ಪ್ರಭಾಸ್ರ ಪೋಸ್ಟರ್ಗಳನ್ನು ಕೈಯಲ್ಲಿ ಹಿಡಿದು ಬೆಂಕಿಯ ಸುತ್ತ ನರ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬೆಂಕಿಗೆ ಚಿತ್ರಮಂದಿರದ ಕೆಲವು ಸೀಟುಗಳು ಸುಟ್ಟುಹೋಗಿವೆ. ಚಿತ್ರಮಂದಿರದ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅದೃಷ್ಟವಶಾತ್, ಸ್ಕ್ರೀನ್ ಹಾಗೂ ಪ್ರೊಜೆಕ್ಟರ್ಗಳಿಗೆ ಹಾನಿಯಾಗಿಲ್ಲ. ಆದರೆ ಅಭಿಮಾನಿಗಳ ಈ ಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಖಂಡಿಸಲಾಗುತ್ತಿದೆ.

ಆವೇಶದಿಂದ ವರ್ತಿಸುವ ಅಭಿಮಾನಿಗಳು
ನಟರ ಹುಟ್ಟುಹಬ್ಬದಂದು ಅವರ ಹಳೆಯ ಸಿನಿಮಾಗಳನ್ನು ಬಿಡುಗಡೆ ಮಾಡುವ ಅದರಿಂದ ಬಂದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಅಥವಾ ಆ ನಟನ ಅಭಿಮಾನಿ ಸಂಘಗಳಿಗೆ ದಾನ ಮಾಡುವ ಪದ್ಧತಿ ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಪ್ರಾರಂಭವಾಗಿದೆ. ಆದರೆ ಹೀಗೆ ವಿಶೇಷ ಪ್ರದರ್ಶನ ಆಯೋಜನೆಗೊಂಡಾಗ ಅಭಿಮಾನಿಗಳು ಅತಿರೇಕದಿಂದ ವರ್ತಿಸುವುದು ಸಹ ಸಾಮಾನ್ಯ ಎಂಬಂತಾಗಿಬಿಟ್ಟಿದೆ.

ಅತಿರೇಕ ತುಸು ಹೆಚ್ಚಿಗೆ ಇದೆ
ತೆಲುಗು ರಾಜ್ಯಗಳಲ್ಲಿ ಅಭಿಮಾನಿಗಳ ಅತಿರೇಕದ ವರ್ತನೆ ತುಸು ಹೆಚ್ಚೇ ಇದೆ. ಪವನ್ ಕಲ್ಯಾಣ್ರ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆಗಿದ್ದಾಗ ವಿಶೇಷ ಪ್ರದರ್ಶನ ಆಯೋಜನೆ ಮಾಡಿಲ್ಲವೆಂದು ಅಭಿಮಾನಿಗಳು ಹಲವು ಕಡೆ ಚಿತ್ರಮಂದಿರಗಳನ್ನು ಒಡೆದು ಹಾಕಿದ್ದರು. ಅದಕ್ಕೂ ಹಿಂದೆ, ಜೂ ಎನ್ಟಿಆರ್ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳ ನಡುವೆ ನಡೆದ ಜಗಳವಂತೂ ಒಬ್ಬ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ರೀತಿಯ ಹಲವು ಉದಾಹರಣೆಗಳು ತೆಲುಗು ರಾಜ್ಯಗಳಲ್ಲಿ ಸಿಗುತ್ತವೆ.


Click it and Unblock the Notifications











