ರಮ್ಯಾ, ಪ್ರಜ್ವಲ್ ಪ್ರಣಯಗೀತೆಗೆ 'ಈಗ' ಸೆಂಥಿಲ್ ಸಾಥ್
ಕಿಚ್ಚ ಸುದೀಪ್ ಅಭಿನಯದ ತೆಲುಗು ಸೂಪರ್ ಹಿಟ್ ಚಿತ್ರ 'ಈಗ' ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕನ್ನಡಕ್ಕೆ ಬರಲಿದ್ದಾರೆ. ಅವರನ್ನು ಕನ್ನಡಕ್ಕೆ ಮೊದಲ ಬಾರಿಗೆ ಕರೆತರುತ್ತಿರುವುದು ಪ್ರಜ್ವಲ್ ದೇವರಾಜ್ ಅಭಿನಯದ 'ದಿಲ್ ಕಾ ರಾಜಾ' ಚಿತ್ರದ ನಿರ್ದೇಶಕ ಸೋಮನಾಥ್ ಪಾಟೀಲ್. ರಮ್ಯಾ ಹಾಗೂ ಪ್ರಜ್ವಲ್ ಜೋಡಿ ಅಭಿನಯದ ಈ ಚಿತ್ರವು ಸೆಪ್ಟೆಂಬರ್ 3, 2012 ರಿಂದ ಚಿತ್ರೀಕರಣ ಆರಂಭಿಸಲಿದೆ. ರಮ್ಯಾ, ಪ್ರಜ್ವಲ್ ಪ್ರಣಯಗೀತೆಗೆ 'ಈಗ' ಸೆಂಥಿಲ್ ಸಾಥ್ ನೀಡಲಿದ್ದಾರೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ 5 ತೆಲುಗು ಚಿತ್ರಗಳಲ್ಲಿ ಹಾಗೂ ಸಲ್ಮಾನ್ ಖಾನ್ 'ದಬಾಂಗ್' ಹಿಂದಿ ಚಿತ್ರದಲ್ಲೂ ಛಾಯಾಗ್ರಾಹಕರಾಗಿ ಕೆಲಸಮಾಡಿ ಅನುಭವವಿರುವ ಈ ಸೆಂಥಿಲ್ ಕುಮಾರ್, ತಮ್ಮ ಕನ್ನಡ ಚಿತ್ರ 'ದಿಲ್ ಕಾ ರಾಜಾ'ದಲ್ಲಿ ಜೊತೆಯಾಗಿರುವುದು ಚಿತ್ರತಂಡಕ್ಕೆ ಸಖತ್ ಖುಷಿ ನೀಡಿದೆ. ಈ ವಿಷಯವನ್ನು ಮಾಧ್ಯಮಕ್ಕೆ ಸ್ಪಷ್ಟಪಡಿಸಿ ಜೊತೆಗೆ ಖುಷಿ ಹಂಚಿಕೊಂಡಿರುವ ನಿರ್ದೇಶಕ ಸೋಮನಾಥ್ ಪಾಟೀಲ್, ಇದು ತಮ್ಮ ಅದೃಷ್ಟವೆಂಬಂತೆ ಮಾತನಾಡಿದ್ದಾರೆ.
ಈ ಮೊದಲು ಚಿತ್ರದ ಕ್ಯಾಮರಾಮನ್ ಆಗಿ ಆಯ್ಕೆಯಾಗಿದ್ದ ಅಜಯ್ ವಿನ್ಸೆಂಟ್, 'ಡೇಟ್ಸ್ ಪ್ರಾಬ್ಲಂ'ನಿಂದ ಈ ಚಿತ್ರದಿಂದ ಹೊರನಡೆದಿದ್ದಾರೆ. ಅವರೀಗ ಬೇರೆ ಚಿತ್ರದಲ್ಲಿ ತುಂಬಾ ಬಿಜಿ ಎನ್ನಲಾಗಿದೆ. ಕ್ಯಾಮರಾಮನ್ ಬದಲಾವಣೆಗೆ 'ಡೇಟ್ಸ್' ಸಮಸ್ಯೆಯಲ್ಲದೇ ಬೇರೇನೂ ಕಾರಣವಲ್ಲ ಎಂಬುದನ್ನು ಚಿತ್ರತಂಡ ಪಕ್ಕಾ ಮಾಡಿದ್ದರೂ, ಹೊಸ ಛಾಯಾಗ್ರಾಹಕರ ಬಗ್ಗೆ ಇನ್ನೂ ಹೆಚ್ಚಿನ ಖುಷಿ ವ್ಯಕ್ತವಾಗಿದ್ದು ಕಂಡುಬಂತು.
ಅದೇನೆ ಇರಲಿ, ಮೊದಲ ಹಂತದ ಚಿತ್ರೀಕರಣ ಸೆಪ್ಟೆಂಬರ್ 03, 2012 ಕ್ಕೆ ಪ್ರಾರಂಭವಾಗಲಿದ್ದು 12 ದಿನಗಳ ಕಾಲ ಸತತ ಚಿತ್ರೀಕರಣ ನಡೆಯಲಿದೆ. ನಂತರ ಅದೇ ತಿಂಗಳು 27 ರಿಂದ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಹೆಚ್ಚು ಚಿತ್ರೀಕರಣ ನಡೆಯಲಿರುವ ತಾಣ 'ಅರಣ್ಯ' ಎಂಬುದು ವಿಶೇಷ. ಒಟ್ಟಿನಲ್ಲಿ ಪ್ರಜ್ವಲ್ ಹಾಗೂ ರಮ್ಯಾ ಅರಣ್ಯದಲ್ಲಿ ರೊಮಾನ್ಸ್ ಮಾಡಲಿರುವುದು ಹಾಗೂ ಅದನ್ನು ಸೆಂಥಿಲ್ ಸೆರೆಹಿಡಿಯುವುದು ಪಕ್ಕಾ ಆಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











