ಮಹೇಶ್ ಬಾಬುವನ್ನೇ ನಾಯಕನನ್ನಾಗಿ ಆಯ್ಕೆ ಮಾಡಿದ್ದೇಕೆ ರಾಜಮೌಳಿ?
'RRR' ಸಿನಿಮಾ ಮೂಲಕ ವಿಶ್ವಮಟ್ಟದಲ್ಲಿ ಯಶಸ್ಸು, ಗುರುತು ಪಡೆದ ರಾಜಮೌಳಿ ಈಗಾಗಲೇ ಹೊಸದೊಂದು ಸಿನಿಮಾ ಘೋಷಿಸಿ ಆಗಿದೆ.
ಮೊದಲ ಬಾರಿಗೆ ರಾಜಮೌಳಿ, ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದು, 'RRR' ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವ ಕಾರಣ ಭಾರತ ಮಾತ್ರವೇ ಅಲ್ಲದೆ, ಅಮೆರಿಕ, ದುಬೈ, ನ್ಯೂಜಿಲೆಂಡ್, ಜಪಾನ್, ಆಸ್ಟ್ರೇಲಿಯಾ, ಚೀನಾ ಇನ್ನಿತರ ರಾಷ್ಟ್ರಗಳಲ್ಲಿಯೂ ಈ ಸಿನಿಮಾದ ಬಗ್ಗೆ ದೊಡ್ಡಮಟ್ಟದ ಕುತೂಹಲ ಏರ್ಪಟ್ಟಿದೆ.
'RRR' ಸೇರಿದಂತೆ ರಾಜಮೌಳಿಯ ಬಹುತೇಕ ಸಿನಿಮಾಗಳಿಗೆ ಕತೆ ಬರೆದಿರುವ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಈ ಹೊಸ ಸಿನಿಮಾಕ್ಕೂ ಕತೆ ಬರೆದಿದ್ದು, ರಾಜಮೌಳಿ ಹಾಗೂ ವಿಜಯೇಂದ್ರ ಪ್ರಸಾದ್ ಅವರು ತಮ್ಮ ಹೊಸ ಸಿನಿಮಾಕ್ಕೆ ಮಹೇಶ್ ಬಾಬುವನ್ನೇ ಏಕೆ ಆಯ್ಕೆ ಮಾಡಿದ್ದೆಂದು ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.

ಮಹೇಶ್ ಬಾಬು ಅನ್ನು ಆರಿಸಿದ್ದು ಏಕೆ?
ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜಯೇಂದ್ರ ಪ್ರಸಾದ್, ''ನಮ್ಮ ಹೊಸ ಸಿನಿಮಾವು ಸಂಪೂರ್ಣವಾಗಿ ಸಾಹಸಮಯ ಕತೆ ಆಗಿದೆ. ಮಹೇಶ್ ಬಾಬು ವ್ಯಕ್ತಿಗತವಾಗಿ ತೀಕ್ಷಣತೆ, ತೀವ್ರತೆಯುಳ್ಳ ನಟ. ಅವರ ನಟನೆ ಮಾತ್ರವೇ ಅಲ್ಲ ಅವರ ಫೈಟ್ಗಳಲ್ಲಿ ಸಹ ಆ ತೀವ್ರತೆ ಕಾಣುತ್ತದೆ. ಸಾಹಸಮಯ ಕತೆಯುಳ್ಳ ಸಿನಿಮಾಕ್ಕೆ ಅಂಥಹಾ ತೀವ್ರತೆಯುಳ್ಳ ನಟರೇ ಬೇಕಾಗಿದ್ದಿದ್ದರಿಂದ ಮಹೇಶ್ ಬಾಬು ಅವರನ್ನು ಆಯ್ಕೆ ಮಾಡಿಕೊಂಡೆವು'' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

ಮಹೇಶ್ಬಾಬುಗೆ ಕತೆ ಬರೆಯುವುದು ಸುಲಭ: ವಿಜಯೇಂದ್ರಪ್ರಸಾದ್
''ಮಹೇಶ್ ಬಾಬು ಅವರಂಥಹಾ ನಟರಿರುವಾಗ ಅವರಿಗಾಗಿ ಕತೆ, ದೃಶ್ಯಗಳನ್ನು ಬರೆಯುವವರಿಗೆ ಬಹಳ ಸುಲಭವಾಗುತ್ತದೆ. ಅವರಿಗಾಗಿ ಬೇರೆ-ಬೇರೆ ರೀತಿಯ ಸನ್ನಿವೇಶಗಳನ್ನು, ಕಾನ್ಫ್ಲಿಕ್ಟ್ಗಳನ್ನು ಕತೆಯಲ್ಲಿ ಸೃಷ್ಟಿಸಬಹುದು. ಬಹುವಿಧದ ಸನ್ನಿವೇಶಗಳಿಗೆ ಅವರು ಒಗ್ಗಿಕೊಳ್ಳುತ್ತಾರೆ. ಕತೆಗಾರರ ಮಾತ್ರವೇ ಅಲ್ಲ, ಸೆಟ್ನಲ್ಲಿರುವ ಎಲ್ಲರ ಕೆಲಸವನ್ನೂ ಅಂಥಹಾ ನಟರು ಸುಲಭ ಮಾಡುತ್ತಾರೆ'' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

ಸಾಹಸಮಯ ಯಾತ್ರೆಯೊಂದರ ಕುರಿತಾದ ಸಿನಿಮಾ
''ಈ ಸಿನಿಮಾದ ಕತೆಯು ಸಾಹಸಮಯ ಯಾತ್ರೆಯೊಂದರ ಕುರಿತಾದದ್ದಾಗಿದ್ದು, ಈ ಸಾಹಸಮಯ ಯಾತ್ರೆಯು ನಾಯಕನನ್ನು ವಿವಿಧ ದೇಶಗಳಿಗೆ ಕರೆದೊಯ್ಯಲಿದೆ. ಹಾಗಾಗಿ ಸಿನಿಮಾದ ಚಿತ್ರೀಕರಣ ಸಹ ವಿವಿಧ ದೇಶಗಳಲ್ಲಿ ನಡೆಯಲಿದೆ. ಸಿನಿಮಾದ ಚಿತ್ರೀಕರಣವನ್ನು ಮುಂದಿನ ವರ್ಷ ಜೂನ್ ಅಥವಾ ಮೇ ತಿಂಗಳಿನಲ್ಲಿ ಪ್ರಾರಂಭ ಮಾಡುವ ಉದ್ದೇಶ ಇದೆ'' ಎಂದಿದ್ದಾರೆ. ಇದೆ ಸಮಯದಲ್ಲಿ ತಮ್ಮಿಂದ ಎಲ್ಲ ನಿರ್ಮಾಪಕರೂ ಅದ್ಭುತವಾದ ಕತೆಗಳನ್ನೇ ನಿರೀಕ್ಷಿಸುತ್ತಿದ್ದಾರೆ. ನಾನು ಬರೆದಿರುವ ಸಣ್ಣ ಕತೆಗಳನ್ನು ಯಾರೂ ಮುಟ್ಟುತ್ತಲೇ ಇಲ್ಲ ಎಂದು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷ ಚಿತ್ರೀಕರಣ
ರಾಜಮೌಳಿ ಬಹು ಸಮಯದಿಂದಲೂ ಒಂದು ಸಾಹಸಮಯ ಕತೆಯುಳ್ಳ ಸಿನಿಮಾ ಮಾಡಲು ಯೋಜಿಸಿದ್ದರಂತೆ. ಅದರಲ್ಲಿಯೂ ಹಾಲಿವುಡ್ನ ಇಂಡಿಯಾನಾ ಜೋನ್ಸ್ ಮಾದರಿಯ ಸಿನಿಮಾ ಮಾಡುವುದು ಅವರ ಆಸೆಯಾಗಿತ್ತಂತೆ. ಅದೇ ಕಾರಣಕ್ಕೆ ಈ ಕತೆಯನ್ನು ರಾಜಮೌಳಿ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಮಹೇಶ್ ಬಾಬು ನಾಯಕ. ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದೆ. ಇದೀಗ 'RRR' ಆಸ್ಕರ್ಗೆ ಪ್ರವೇಶಿಸುವ ಹಂತದಲ್ಲಿದ್ದು, ಅದರ ಕಾರ್ಯಗಳಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ.


Click it and Unblock the Notifications











