ರಾಜಮೌಳಿ ಹುಟ್ಟುಹಬ್ಬ: ಕಮರ್ಷಿಯಲ್ ಚಿತ್ರಗಳ ಒಡೆಯನಿಗೆ ಶುಭಾಶಯಗಳ ಮಹಾಪೂರ
ಭಾರತೀಯ ಚಿತ್ರರಂಗದಲ್ಲೇ ಮೇರು ಹೆಸರು ಎಸ್ಎಸ್ ರಾಜಮೌಳಿ. ತೆಲುಗು ಚಿತ್ರರಂಗವನ್ನು ಬಹುದೊಡ್ಡ ಮಟ್ಟಿಗೆ ಸದ್ದು ಮಾಡಲು ಕಾರಣೀಕರ್ತರಾಗಿರುವ ಎಸ್ಎಸ್ ರಾಜಮೌಳಿ ಇಂದು(ಅಕ್ಟೋಬರ್ 10) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಅವರ ಪುತ್ರನಾಗಿರುವ ರಾಜಮೌಳಿ ನಿರ್ದೇಶನದಲ್ಲಿ ಎಂತಹ ಬಾಲಿವುಡ್ ನಿರ್ಮಾಪಕರನ್ನೂ ಮೀರಿಸುವ ಮಟ್ಟದಲ್ಲಿದ್ದಾರೆ.
ಜೂನಿಯರ್ ಎನ್ಟಿಆರ್ಗೆ ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನ ಆರಂಭಿಸಿದ ಎಸ್ಎಸ್ ರಾಜಮೌಳಿ, ಒಂದಾದ ಮೇಲೊಂದು ಹಿಟ್ ಸಿನಿಮಾಗಳನ್ನೇ ನೀಡಿದ್ದಾರೆ. ಯಾರೂ ಊಹಿಸಲಾಗದ ಮಟ್ಟಿಗೆ ರಾಜಮೌಳಿ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಅಬ್ಬರಿಸುತ್ತಿದ್ದು, ಸಿನಿಮಾ ಗೆಲುವಿಗಾಗಿ ಬಾಲಿವುಡ್ ನಿರ್ಮಾಪಕರು ಸಹ ರಾಜಮೌಳಿ ಅವರ ಸಲಹೆ-ಸಹಾಯ ಕೇಳುತ್ತಾರೆ.
ರಾಮ್ ಚರಣ್ ನಟನೆಯ ಮಗಧೀರ ಚಿತ್ರ ಟಾಲಿವುಡ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರೆ, ಕಿಚ್ಚ ಸುದೀಪ್ ಅಭಿನಯದ 'ಈಗ' ಚಿತ್ರ ರಾಜಮೌಳಿ ನಿರ್ದೇಶನದ ವಿಶಿಷ್ಟತೆಯನ್ನು ತೋರಿಸಿತ್ತು. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಸೂಪರ್ ಹಿಟ್ ಆಗಿದ್ದು, ಭಾರತೀಯ ಚಿತ್ರರಂಗದಲ್ಲೇ ಒಂದು ಮೈಲುಗಲ್ಲು ಸೃಷ್ಟಿಸಿತ್ತು. ಇನ್ನು ಇತ್ತಿಚಿಗೆ ತೆರೆ ಕಂಡ 'ಆರ್ಆರ್ಆರ್' ಚಿತ್ರ ಕೂಡ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು, ಸಾವಿರಾರು ಕೋಟಿ ಕಲೆಕ್ಷನ್ ಮಾಡಿತ್ತು.

ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳನ್ನೇ ಮಾಡಿ ಗೆಲುವು ಸಾಧಿಸುತ್ತಿರುವ ಸಿನಿಮಾ ಮಾಂತ್ರಿಕ ರಾಜಮೌಳಿಗೆ ಚಿತ್ರರಂಗದ ಗಣ್ಯರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಸೋಶಿಯಲ್ ಮೀಡಿಯಾದಲ್ಲಿ ರಾಜಮೌಳಿ ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಪ್ರೀತಿಯ ರಾಜಮೌಳಿ ಸರ್ ಅವರಿಗೆ ಜನ್ಮ ದಿನದ ಶುಭಾಶಯ. ಹೀಗೆ ಯಾವಾಗಲೂ ಅದ್ಭುತವಾಗಿರಿ, ನಿಮ್ಮ ಸಿನಿಮಾ ದೃಷ್ಟಿಕೋನವನ್ನು ಇಷ್ಟಪಡುತ್ತೇನೆ. ನಾವೆಲ್ಲರೂ ನಿಮ್ಮ ನಿಮ್ಮ ಸಿನಿಮಾಗಳನ್ನು ಇಷ್ಟಪಡುತ್ತೇವೆ. ಭಾರತ ಇನ್ನೂ ಹೆಮ್ಮೆ ಪಡುವಂತೆ ಮಾಡಿ, ಬಹಳ ಮುಖ್ಯವಾಗಿ ಇದು ನಿಮ್ಮ ದಿನ ಎಂದು ಬರೆದು ಕೊಂಡಿದ್ದಾರೆ.
ರಾಜಮೌಳಿ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ ನಾಯಕ ಹಾಗೂ ರಾಜಮೌಳಿ ಹೆಸರನ್ನು ಇನ್ನಷ್ಟು ಜನಪ್ರಿಯತೆಗೊಳಿಸಿದ ಆರ್ಆರ್ಆರ್ ಚಿತ್ರದ ನಾಯಕ ನಟ ಜೂನಿಯರ್ ಎನ್ಟಿಆರ್ ರಾಜಮೌಳಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಜಕ್ಕಣ್ಣ. ಎಂದಿನಂತೆ ನಿಮಗೆ ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ರಾಜಮೌಳಿ ತಮ್ಮ ಮುಂದಿನ ಸಿನಿಮಾಗಾಗಿ ಅವರು ತಯಾರಿ ನಡೆಸುತ್ತಿದ್ದು, ಈ ಬಾರಿ ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ತಮ್ಮ ನಿರ್ದೇಶಕರಿಗೆ ಮಹೇಶ್ ಬಾಬು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಜನ್ಮದಿನದ ಶುಭಾಶಯಗಳು ರಾಜಮೌಳಿ ಸರ್, ನಿಮ್ಮ ಸಿನಿಮಾ ನಿರ್ದೇಶನದ ಶೈಲಿ ಯಾವಾಗಲೂ ನಮ್ಮನ್ನು ಪ್ರೇರೇಪಿಸುತ್ತದೆ. ಯಾವಾಗಲೂ ಖುಷಿಯಾಗಿರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರಾಜಮೌಳಿ ಸಿನಿಮಾ ಪಯಣಕ್ಕೆ ಬಹುದೊಡ್ಡ ಹಿಟ್ ಕೊಟ್ಟಿರುವ ಮಗಧೀರ ಹಾಗೂ ಆರ್ಆರ್ಆರ್ ಎರಡೂ ಚಿತ್ರಗಳಲ್ಲಿ ನಾಯಕರಾಗಿರುವ ರಾಮ್ ಚರಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಾಜಮೌಳಿ ಅವರೊಂದಿಗಿನ ಕ್ಯೂಟ್ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ನಾನು ನಿಮ್ಮನ್ನು ಎಷ್ಟು ಗೌರವಿಸುತ್ತೇನೆ ಎಂದು ಹೇಳಲು ನನ್ನಲ್ಲಿ ಪದಗಳಿಲ್ಲ. ಹುಟ್ಟುಹಬ್ಬದ ಶುಭಾಶಯಗಳು ರಾಜಮೌಳಿ ಗುರು, ಎಂದಿನಂತೆ ಯಾವಾಗಲೂ ಮಿಂಚುತ್ತಿರಿ ಎಂದು ಬರೆದುಕೊಂಡಿದ್ದಾರೆ.
ಇನ್ನು ಭಾರತೀಯ ಚಿತ್ರರಂಗದ ಗಣ್ಯರು ಹಾಗೂ ರಾಜಮೌಳಿ ಅವರ ಅಪಾರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅವರ ವಿಶೇಷವಾದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.


Click it and Unblock the Notifications











