ಚಿರಂಜೀವಿ ಹೊಸ ಚಿತ್ರದಲ್ಲಿ ಸರ್ಪ್ರೈಸ್ ನೀಡಿದ ರಾಮ್ ಚರಣ್!
ಸೈರಾ ನರಸಿಂಹ ರೆಡ್ಡಿ ಚಿತ್ರದ ಬಳಿಕ ಚಿರಂಜೀವಿ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಕೊರಟಾಲ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಚಿತ್ರೀಕರಣ ಆರಂಭವಾಗಿದೆ.
ರಾಮ್ ಚರಣ್ ತೇಜ್ ಈ ಚಿತ್ರ ನಿರ್ಮಿಸುತ್ತಿದ್ದು, ನಿರಂಜನ್ ರೆಡ್ಡಿ ಕೈಜೋಡಿಸಿದ್ದಾರೆ. ಸದ್ಯದವರೆಗೂ ಚಿತ್ರದ ಶೀರ್ಷಿಕೆ ಕುರಿತು ಯಾವ ಸುದ್ದಿಯೂ ಹೊರಬಿದ್ದಿಲ್ಲ. ತ್ರಿಷಾ ಕೃಷ್ಣನ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರೆಜಿನಾ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ.
ಈ ನಡುವೆ ಚಿರು 152ನೇ ಚಿತ್ರದ ಬಗ್ಗೆ ಸರ್ಪ್ರೈಸ್ ಸುದ್ದಿಯೊಂದು ಬಹಿರಂಗವಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿರಂಜೀವಿಯ ಯೌವನ ಪಾತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದು, ಸುಮಾರು 25 ನಿಮಿಷ ಈ ಪಾತ್ರ ಇರಲಿದೆಯಂತೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಚಿತ್ರದ ಮೇಲಿದ್ದ ಕುತೂಹಲ ಡಬಲ್ ಆಗಿದೆ.
ಮಿರ್ಚಿ, ಶ್ರೀಮಂತಡು, ಜನತಾ ಗ್ಯಾರೇಜ್, ಭರತ್ ಅನೇ ನೇನು ಅಂತಹ ಹಿಟ್ ಚಿತ್ರಗಳನ್ನು ನೀಡಿರುವ ಕೊರಟಲಾ ಶಿವ ಇದೇ ಮೊದಲ ಬಾರಿಗೆ ಚಿರಂಜೀವಿಗೆ ನಿರ್ದೇಶನ ಮಾಡುತ್ತಿದ್ದಾರೆ. ಏಪ್ರಿಲ್ ನಲ್ಲಿ ಚಿರಂಜೀವಿ ಶೂಟಿಂಗ್ ಆರಂಭಿಸಲಿದ್ದಾರಂತೆ.

ಅಂದ್ಹಾಗೆ, ಚಿರು 152ನೇ ಸಿನಿಮಾ ಆಕ್ಷನ್ ಎಂಟರ್ ಟೈನ್ ಮೆಂಟ್ ಕಥೆ ಹೊಂದಿದ್ದು, ಆಗಸ್ಟ್ 14 ರಂದು ಸಿನಿಮಾ ತೆರೆಗೆ ಬರಲಿದೆ. ಆದರೆ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ.
ಇನ್ನುಳಿದಂತೆ ರಾಮ್ ಚರಣ್ ಸದ್ಯ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಐತಿಹಾಸಿಕ ಚಿತ್ರ ಇದಾಗಿದ್ದು, ಜೂನಿಯರ್ ಎನ್ ಟಿ ಆರ್ ಕೂಡ ಈ ಚಿತ್ರದ ನಾಯಕರಾಗಿದ್ದಾರೆ.


Click it and Unblock the Notifications











