ಕೊರೊನಾ ರೋಗಿಗಳು ಬೆಂಕಿಗಾಹುತಿ: ಟ್ವೀಟ್ ಮಾಡಿ ವಿವಾದ ಎಬ್ಬಿಸಿದ ನಟ
ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಕೆಲವು ದಿನಗಳ ಹಿಂದಷ್ಟೆ ಕೊರೊನಾ ಆಸ್ಪತ್ರೆಯನ್ನಾಗಿ ಬದಲಾಯಿಸಿದ್ದ ಹೋಟೆಲ್ ಒಂದಕ್ಕೆ ಬೆಂಕಿ ಬಿದ್ದು, ಹತ್ತು ಮಂದಿ ಕೊರೊನಾ ರೋಗಿಗಳು ಇದ್ದ ಜಾಗದಲ್ಲಿಯೇ ಸುಟ್ಟು ಭಸ್ಮವಾದರು.
Recommended Video
ಈ ಸುದ್ದಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಆದರೆ ಘಟನೆ ನಡೆದ ನಂತರ ಇದೀಗ ಘಟನೆ ಸುತ್ತ ವಿವಾದಗಳು, 'ಹೇಳಿಕೆ ರಾಜಕೀಯ'ಗಳು ನಡೆಯುತ್ತಿದ್ದು, ಇದೀಗ ಸಿನಿಮಾ ನಟರೂ ಇದಕ್ಕೆ ಸೇರಿಕೊಂಡಿದ್ದಾರೆ.
ಸಾಮಾನ್ಯವಾಗಿ ರಾಜಕೀಯದಿಂದ ಇತರೆ ವಿವಾದಗಳಿಂದ ದೂರ ಇರುವ ತೆಲುಗಿನ ನಾಯಕ ನಟ ರಾಮ್ ಪೋತಿನೇನಿ ಇದೀಗ ಹೋಟೆಲ್ ಗೆ ಬೆಂಕಿ ಬಿದ್ದ ಘಟನೆ ಬಗ್ಗೆ ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಆಗಸ್ಟ್ 9 ರಂದು ಆಗಿದ್ದ ಭಾರಿ ಅವಘಡ
ಆಗಸ್ಟ್ 9 ರಂದು ವಿಜಯವಾಡದ ಹೋಟೆಲ್ ಸ್ವರ್ಣ ಪ್ಯಾಲೆಸ್ ಗೆ ಬೆಂಕಿ ಬಿದ್ದು ಹತ್ತು ಮಂದಿ ಕೋವಿಡ್ ರೋಗಿಗಳು ಮರಣಹೊಂದಿದ್ದರು. ಘಟನೆ ನಂತರ ಇದೀಗ ಪರಸ್ಪರ ಕೆಸರೆರಚಾಟ ಪ್ರಾರಂಭವಾಗಿದ್ದು, ಆಸ್ಪತ್ರೆ, ಸರ್ಕಾರ ಹಾಗೂ ಹೋಟೆಲ್ ಮೂವರೂ ಪರಸ್ಪರ ಮೇಲೆ ದೂರು ಹೇಳುತ್ತಿದ್ದಾರೆ.

ವಿಷಯಾಂತರ ಮಾಡುವ ಯತ್ನ ಮಾಡಲಾಗುತ್ತಿದೆ: ರಾಮ್
ನಟ ರಾಮ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಂಕಿ ಅವಘಡದ ವಿಷಯವನ್ನು ವಿಷಯಾಂತರ ಮಾಡಲೆಂದು ಇದೀಗ ಫೀಸ್ ನ ವಿಷಯವನ್ನು ತರಲಾಗುತ್ತಿದೆ. ಫೀಸ್ ಅನ್ನು ಹೋಟೆಲ್ ಅವರೇ ತೆಗೆದುಕೊಳ್ಳುತ್ತಿದ್ದರು ಏಕೆಂದರೆ ಅವರೇ ನಿರ್ವಹಣೆ ಮಾಡುತ್ತಿದ್ದರು, ಇದಕ್ಕೆ ವೈದ್ಯರು ಜವಾಬ್ದಾರರಲ್ಲ ಎಂದು ಹೇಳಿದ್ದಾರೆ.

ಬೆಂಕಿ ಅವಘಡ ಆಕಸ್ಮಿಕವಲ್ಲ: ರಾಮ್ ಅನುಮಾನ
ಮುಂದುವರೆದು, ಬೆಂಕಿ ಅವಘಡ ಆಕಸ್ಮಿಕವಲ್ಲ ಎಂಬ ಅನುಮಾನವನ್ನು ನಟ ರಾಮ್ ವ್ಯಕ್ತಪಡಿಸಿದ್ದು, ಈ ಅವಘಡದ ಹಿಂದೆ ಆಂಧ್ರದ ಸಿಎಂ ಗೆ ಕಪ್ಪು ಮಸಿ ಬಳಿಯುವ ಯತ್ನ ಅಡಗಿದೆ ಎಂಬ ಅನುಮಾನವನ್ನು ಅವರು ಟ್ವೀಟ್ ಮೂಲಕ ಹೊರಹಾಕಿದ್ದಾರೆ.

ಬಿಲ್ಗಳ ಬಗ್ಗೆ ಚರ್ಚೆ ಆರಂಭ
ರಾಮ್ ಪೋತಿನೇನಿ ಅವರು ಕೆಲವು ಬಿಲ್ಗಳನ್ನು ಸಹ ಟ್ವೀಟ್ ಮಾಡಿದ್ದು, ಈ ಬಿಲ್ಗಳ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ. ಆದರೆ ವಿವಾದಕ್ಕೆ ಅಂತ್ಯ ಹಾಡಿರುವ ರಾಮ್, 'ನಾನು ಇನ್ನೇನೂ ಮಾತನಾಡುವುದಿಲ್ಲ, ಕಾನೂನು ಎಲ್ಲವನ್ನೂ ನೋಡಿಕೊಳ್ಳುತ್ತದೆ' ಎಂದಿದ್ದಾರೆ.

ಒಟಿಟಿಯಲ್ಲಿ ಸಿನಿಮಾ ಬಿಡುಗಡೆಗೆ ಯತ್ನ
ರಾಮ್ ಅವರ ಕೊನೆಯ ಸಿನಿಮಾ ಐಸ್ಮಾರ್ಟ್ ಶಂಕರ್ ಸಖತ್ ಹಿಟ್ ಆಗಿತ್ತು. ಇದೀಗ ಅವರ ನಟನೆಯ ರೆಡ್ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿದೆ. ರೆಡ್ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಮಾತುಕತೆ ನಡೆದಿದೆ.


Click it and Unblock the Notifications











