ಸೀರೆ ವಿಷಯಕ್ಕೆ 'ರಂಗಸ್ಥಳಂ' ಪಾತ್ರವನ್ನು ರಿಜೆಕ್ಟ್ ಮಾಡಿದ್ರು ಈ ನಟಿ
'ರಂಗಸ್ಥಳಂ' ಕಳೆದ ವರ್ಷ ಸೂಪರ್ ಹಿಟ್ ಆದ ತೆಲುಗು ಸಿನಿಮಾ. ಈ ಸಿನಿಮಾ ನಟ ರಾಮ್ ಚರಣ್ ಗೆ ದೊಡ್ಡ ಗೆಲುವು ತಂದುಕೊಟ್ಟಿದೆ. ನಟಿ ಸಮಂತಾಗೆ ಮತ್ತೊಂದು ಇಮೇಜ್ ನೀಡಿದೆ.
ಇಂತಹ ಸಿನಿಮಾದಲ್ಲಿ ರಂಗಮ್ಮ ಎಂಬ ಒಂದು ಪಾತ್ರ ಇತ್ತು. ನಾಯಕ ಮತ್ತು ನಾಯಕಯ ಜೊತೆಗೆ ಇದ್ದ ಈ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಪಾತ್ರದಲ್ಲಿ ಅನುಸೂಯ ಭಾರಧ್ವಾಜ್ ನಟಿಸಿದ್ದರು. ತೆಲುಗಿನಲ್ಲಿ ಜನಪ್ರಿಯ ನಿರೂಪಕಿ ಆಗಿರುವ ಈಕೆ ಸಿನಿಮಾದಲ್ಲಿ ಅಭಿನಯಿಸಿದರು.
ವಿಶೇಷ ಅಂದರೆ, ಈ ಪಾತ್ರ ಮೊದಲು ಬೇರೊಬ್ಬ ನಟಿಗೆ ಹೋಗಿತ್ತು. ಖ್ಯಾತ ನಟಿ ರಾಶಿ ಈ ಸಿನಿಮಾದಲ್ಲಿ ರಂಗಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ, ಬಟ್ಟೆ ವಿಷಯಕ್ಕೆ ಈ ಪಾತ್ರವನ್ನು ಅವರು ನಿರಾಕರಿಸಿದ್ದರು. ಸಿನಿಮಾದಲ್ಲಿ ಸೀರೆ ಉಟ್ಟುಕೊಳ್ಳುವ ಶೈಲಿ ತಮಗೆ ಸರಿ ಆಗುವುದಿಲ್ಲ ಎನ್ನುವ ಕಾರಣ ನೀಡಿ ಚಿತ್ರದಲ್ಲಿ ರಾಶಿ ನಟಿಸಲಿಲ್ಲ.

ರಾಶಿ ತಿರಸ್ಕಾರ ಮಾಡಿದ್ದ ಪಾತ್ರದಲ್ಲಿ ನಂತರ ಅನುಸೂಯ ಭಾರಧ್ವಾಜ್ ನಟಿಸಿದರು. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ 'ರಂಗಸ್ಥಳಂ'ನಲ್ಲಿ ಗುರುತಿಸಿಕೊಳ್ಳುವ ಪಾತ್ರ ಸಿಕ್ಕಿತು. ಅದರ ನಂತರ ಐದಾರು ಸಿನಿಮಾಗಳಲ್ಲಿ ಅವರು ನಟಿಸಿದರು.
ಇದೇ ಪಾತ್ರ ಅನುಸೂಯ ಭಾರಧ್ವಾಜ್ ಗೆ ಸೈಮಾ ಪ್ರಶಸ್ತಿಯನ್ನು ತಂದುಕೊಟ್ಟಿತು. ಕಳೆದ ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಅವರು ಪಡೆದರು.

ಅಂದಹಾಗೆ, ನಟಿ ರಾಶಿ ತೆಲುಗು, ತಮಿಳು, ಮಲೆಯಾಳಂ ಹಾಗೂ ಕನ್ನಡದಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ 'ಸ್ನೇಹ,' 'ನೀನೆ ಪ್ರೀತಿಸುವೆ', 'ರಾಜ ನರಸಿಂಹ' ರಾಶಿ ನಟನೆಯ ಪ್ರಮುಖ ಕನ್ನಡ ಸಿನಿಮಾಗಳು.


Click it and Unblock the Notifications










