ಸಾಯಿ ಪಲ್ಲವಿಯನ್ನು ಮನಸಾರೆ ಹೊಗಳಿದ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ತಾರೆ. ಅವರ ಜನಪ್ರಿಯತೆ ಹೆಚ್ಚಿರುವುದು ತೆಲುಗು ರಾಜ್ಯಗಳಲ್ಲಿ. ಕನ್ನಡ ಸಿನಿಮಾಗಳಿಂದ ನಟನೆ ಆರಂಭಿಸಿದ ರಶ್ಮಿಕಾ ಜನಪ್ರಿಯತೆ ಹೆಚ್ಚು ಗಳಿಸಿದ್ದು ತೆಲುಗು ಸಿನಿಮಾಗಳ ಮೂಲಕ.
ಇದೀಗ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿರುವ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿಯೂ ನಟನೆ ಮುಂದುರೆಸಿದ್ದಾರೆ. ಅವರ ನಟನೆಯ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾ ಬಿಡುಗಡೆಗೆ ತಯಾರಾಗಿದೆ.
ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ ಅದ್ಧೂರಿಯಾಗಿ ನಡೆದಿದ್ದು, ಮಹಿಳಾ ಪ್ರಧಾನ ಸಿನಿಮಾ ಆದ್ದರಿಂದ ಸಿನಿಮಾ ರಂಗದ ಮಹಿಳೆಯರೇ ಅತಿಥಿಗಳಾಗಿ ಆಗಮಿಸಿದ್ದರು. ನಟಿ ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಅವರುಗಳು ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ಸಾಯಿ ಪಲ್ಲವಿಯನ್ನು ಮನಸಾರೆ ಹೊಗಳಿದರು.

ಕಾರ್ಯಕ್ರಮದ ಗೌರವ ಹೆಚ್ಚಿಸಿದ್ದೀರಿ: ರಶ್ಮಿಕಾ
''ಸಾಯಿ ಪಲ್ಲವಿ ಬಗ್ಗೆ ಮಾತನಾಡಲು ಬಹಳ ಖುಷಿಯಾಗುತ್ತದೆ. ಆಕೆ ಸಾಧಿಸಿರುವುದು ಸಾಮಾನ್ಯದ್ದಲ್ಲ. ಆಕೆ ಸೃಷ್ಟಿಸಿರುವ ಈ ಕ್ರೇಜ್ ಅದ್ಭುತ. ನೀವೇ ನೋಡುತ್ತಿದ್ದೀರ ಆಕೆ ಎಷ್ಟು ಪ್ರೀತಿಯನ್ನು ಜನರಿಂದ ಪಡೆಯುತ್ತಿದ್ದಾರೆ. ನೀವು ನಮ್ಮ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿರುವುದು ನಮಗೆ ಬಹಳ ಖುಷಿ ಕೊಟ್ಟಿದೆ. ನಮ್ಮ ಕಾರ್ಯಕ್ರಮದ ಗೌರವ ಹೆಚ್ಚಿದೆ'' ಎಂದು ಸಾಯಿ ಪಲ್ಲವಿಗೆ ಧನ್ಯವಾದ ಹೇಳಿದ ರಶ್ಮಿಕಾ, ''ಸಾಯಿ ಪಲ್ಲವಿ ಎಷ್ಟು ಕ್ಯೂಟ್ ಅಲ್ಲವೇ?'' ಎಂದು ಸಭಿಕರನ್ನು ಪ್ರಶ್ನಿಸಿದರು.

ಕೀರ್ತಿ ಸುರೇಶ್ ಅನ್ನೂ ಹೊಗಳಿದ ರಶ್ಮಿಕಾ
''ನಿಮ್ಮ ಬಗ್ಗೆ ಏನು ಹೇಳಬೇಕು ಎಂಬುದು ಸಹ ನನಗೆ ಗೊತ್ತಾಗುತ್ತಿಲ್ಲ. ನಿಮ್ಮ ಹಾಜರಿಯಿಂದ ಇಡೀಯ ಕಾರ್ಯಕ್ರಮಕ್ಕೆ ಹೊಸ ಪ್ರಕಾಶ ತಂದಿದ್ದೀರಿ'' ಎಂದರು. ಅದಕ್ಕೆ ಉತ್ತರಿಸಿದ ಸಾಯಿ ಪಲ್ಲವಿ, ''ನನ್ನಿಂದ ಅಲ್ಲ, ಅಭಿಮಾನಿಗಳಿಂದ ಕಾರ್ಯಕ್ರಮಕ್ಕೆ ಕಳೆ ಬಂದಿದೆ'' ಎಂದು ವಿನಯತೆ ಮೆರೆದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಕೀರ್ತಿ ಸುರೇಶ್ ಅನ್ನು ಸಹ ಹೊಗಳಿದ ರಶ್ಮಿಕಾ, ''ಕೀರ್ತಿ ತಮ್ಮ ನಗುವಿನಿಂದ ಕಾರ್ಯಕ್ರಮದ ಅಂದ ಹೆಚ್ಚಿಸಿದ್ದಾರೆ'' ಎಂದರು.

'ಲೇಡಿ ಪವನ್ ಕಲ್ಯಾಣ್' ಎಂದ ಸುಕುಮಾರ್
'ಪುಷ್ಪ' ಸಿನಿಮಾ ನಿರ್ದೇಶಕ ಸುಕುಮಾರ್ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದು ಅವರೂ ಸಹ ಸಾಯಿ ಪಲ್ಲವಿಯನ್ನು ಬಹುವಾಗಿ ಹೊಗಳಿದರು. ಸಾಯಿ ಪಲ್ಲವಿ ಹೆಸರು ಹೇಳುತ್ತಿದ್ದಂತೆ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಲು ಆರಂಭಿಸಿದರು. ಸಾಯಿ ಪಲ್ಲವಿಯ ನಟನೆಯನ್ನು ಹೊಗಳಿದ ಸುಕುಮಾರ್, ಆಕೆ ಕೇವಲ ಒಳ್ಳೆಯ ನಟಿಯಲ್ಲ ಬದಲಿಗೆ ಒಳ್ಳೆಯ ವ್ಯಕ್ತಿ ಸಹ. ಸಾಯಿ ಪಲ್ಲವಿ, ಲೇಡಿ ಪವನ್ ಕಲ್ಯಾಣ್ ರೀತಿ. ನಿಮ್ಮ ವ್ಯಕ್ತಿತ್ವ ನನಗೆ ಬಹಳ ಇಷ್ಟವಾಯಿತು. ಈ ವಿಷಯ ನಿಮಗೆ ವೈಯಕ್ತಿಕವಾಗಿ ಹೇಳ ಬೇಕು ಎಂದುಕೊಂಡಿದ್ದೆ ಆದರೆ ಸಾಧ್ಯವಾಗಿರಲಿಲ್ಲ, ಇಂದು ಹೇಳುತ್ತಿದ್ದೇನೆ'' ಎಂದರು ಸುಕುಮಾರ್.

ದೊಡ್ಡ ಅಭಿಮಾನಿ ವರ್ಗವಿದೆ ಸಾಯಿ ಪಲ್ಲವಿಗೆ
ಸಾಯಿ ಪಲ್ಲವಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ದೊಡ್ಡ ಅಭಿಮಾನಿ ವರ್ಗವಿದೆ. ಆಕೆ ನಟನೆಯಿಂದ ಮಾತ್ರವಲ್ಲ ತಮ್ಮ ವ್ಯಕ್ತಿತ್ವದಿಂದಲೂ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಸಿನಿಮಾಗಳಲ್ಲಿ ಸಹ ಕೇವಲ ಮರ ಸುತ್ತುವ ಪಾತ್ರಗಳನ್ನು ಮಾಡದೆ, ಪ್ರಾಧಾನ್ಯತೆ ಇರುವ ಪಾತ್ರಗಳನ್ನು ಸಾಯಿ ಪಲ್ಲವಿ ಆಯ್ದುಕೊಳ್ಳುತ್ತಾರೆ. ಇತ್ತೀಚಿಗೆ ಬಿಡುಗಡೆ ಆದ ಅವರ ಸಿನಿಮಾ 'ಶ್ಯಾಮ ಸಿಂಘ ರಾಯ್'ನಲ್ಲಿ ದೇವದಾಸಿ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಅವರ ನಟನೆಯ ಬಗ್ಗೆ ಬಹಳ ಶ್ಲಾಘನೆ ವ್ಯಕ್ತವಾಗಿದೆ.


Click it and Unblock the Notifications











