ಮತ್ತೊಮ್ಮೆ ಚಿರಂಜೀವಿ ಸಿನಿಮಾದಿಂದ ಹೊರನಡೆದ ರವಿತೇಜ
ದಕ್ಷಿಣದ ಸ್ಟಾರ್ ನಟ ಚಿರಂಜೀವಿ. ವಯಸ್ಸು 67 ಆಗುತ್ತಾ ಬಂದಿದ್ದರೂ ಸ್ಟಾರ್ಗಿರಿಯಲ್ಲಿ ತುಸುವೂ ಕಡಿಮೆ ಆಗಿಲ್ಲ. ಅಭಿಮಾನಿಗಳು ಈಗಲೂ ಚಿರಂಜೀವಿ ಸಿನಿಮಾ ಬಿಡುಗಡೆಗೆ ಕಾತರರಾಗಿ ಕಾಯುತ್ತಾರೆ. ಸಿನಿಮಾ ಬಿಡುಗಡೆ ಆಗುವದಿನದಂದು ಹಬ್ಬ ಆಚರಿಸುತ್ತಾರೆ.
ಅಭಿಮಾನಿಗಳು ಮಾತ್ರವಲ್ಲ ಹಲವು ಸಿನಿಮಾ ನಟ-ನಟಿಯರು ಸಹ ಚಿರಂಜೀವಿ ಜೊತೆ ತೆರೆ ಹಂಚಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಆದರೆ ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರಾದ ರವಿತೇಜ ಮಾತ್ರ ಯಾಕೋ ಚಿರಂಜೀವಿ ಜೊತೆ ನಟಿಸಲು ಇಷ್ಟವಿದ್ದಂತಿಲ್ಲ. ಎರಡು ಬಾರಿ ಅವಕಾಶ ಸಿಕ್ಕರೆ ಎರಡು ಬಾರಿಯೂ ಚಿರಂಜೀವಿ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದಿದ್ದಾರೆ ರವಿತೇಜ!

ಚಿರಂಜೀವಿ ಸಿನಿಮಾದಿಂದ ಹೊರ ನಡೆದ ರವಿತೇಜ
ಚಿರಂಜೀವಿ ನಟಿಸುತ್ತಿರುವ 154 ನೇ ಸಿನಿಮಾದಲ್ಲಿ ರವಿತೇಜಗೆ ಪ್ರಮುಖ ಪಾತ್ರ ನೀಡಲಾಗಿತ್ತು. ಮೊದಲಿಗೆ ರವಿತೇಜ ಸಹ ಈ ಬಾರಿ ಚಿರಂಜೀವಿ ಜೊತೆ ನಟಿಸುವುದಾಗಿ ಒಪ್ಪಿಕೊಂಡಿದ್ದರು. ಚಿತ್ರೀಕರಣ ಈಗಾಗಲೇ ಹೈದರಾಬಾದ್ನಲ್ಲಿ ಆರಂಭವೂ ಆಗಿದೆ. ಆದರೆ ಈಗ ಹಠಾತ್ತನೆ ರವಿತೇಜ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಡೇಟ್ಸ್ನಲ್ಲಿ ಆದ ಸಮಸ್ಯೆ ಎನ್ನಲಾಗುತ್ತಿದೆ. ಈ ಬಗ್ಗೆ ರವಿತೇಜ, ಚಿರಂಜೀವಿಯ ಕ್ಷಮೆ ಕೇಳಿದ್ದಾರೆ ಎನ್ನಲಾಗುತ್ತಿದೆ.

2004ರಲ್ಲಿ ಅವಕಾಶ ನೀಡಲಾಗಿತ್ತು
2004ರಲ್ಲಿಯೂ ರವಿತೇಜಗೆ ಚಿರಂಜೀವಿ ನಟನೆಯ 'ಶಂಕರ್ ದಾದಾ ಎಂಬಿಬಿಎಸ್' ಸಿನಿಮಾದಲ್ಲಿ ಎಟಿಎಂ ಪಾತ್ರಕ್ಕೆ ಅವರನ್ನು ಕೇಳಲಾಗಿತ್ತು. ಆಗ ಸ್ಟಾರ್ ನಾಯಕ ನಟರಾಗಿದ್ದ ರವಿತೇಜ ಪೋಷಕ ಪಾತ್ರದಲ್ಲಿ ನಟಿಸುವುದಿಲ್ಲ ಎಂದರು. ಕೊನೆಗೆ ಆ ಪಾತ್ರಕ್ಕೆ ನಟ ಶ್ರೀಕಾಂತ್ ಅವರನ್ನು ಹಾಕಿಕೊಳ್ಳಲಾಯಿತು. ಸಿನಿಮಾ ದೊಡ್ಡ ಹಿಟ್ ಆಯಿತು. ಅಸಲಿಗೆ ರವಿತೇಜ ಈ ಮೊದಲು ಚಿರಂಜೀವಿ ಜೊತೆ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. 2000 ರಲ್ಲಿ ಬಿಡುಗಡೆ ಆದ ಸೂಪರ್ ಹಿಟ್ ಸಿನಿಮಾ 'ಅನ್ನಯ್ಯ' ಸಿನಿಮಾದಲ್ಲಿ ರವಿತೇಜ, ಚಿರಂಜೀವಿಯ ಸಹೋದರನ ಪಾತ್ರದಲ್ಲಿ ನಟಿಸಿದ್ದರು.

ರವಿತೇಜ-ಚಿರಂಜೀವಿ ಮಧ್ಯೆ ಬಾಂಧವ್ಯ ಚೆನ್ನಾಗಿದೆ
ರವಿತೇಜ ಹಾಗೂ ಚಿರಂಜೀವಿ ನಡುವೆ ಒಳ್ಳೆಯ ಬಾಂಧವ್ಯವಿದೆ. ಶಂಕರ್ ದಾದಾ ಎಂಬಿಬಿಎಸ್ ಸಿನಿಮಾದಲ್ಲಿ ರವಿತೇಜ ನಟಿಸಲಿಲ್ಲವಾದರೂ ಸಿನಿಮಾದ ಹಾಡೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ರವಿತೇಜ ಸತತವಾಗಿ ಕೆಲವು ಸಿನಿಮಾಗಳಲ್ಲಿ ತೊಡಿಗಿಕೊಂಡಿರುವ ಕಾರಣ ಈಗ ಚಿರಂಜೀವಿ ಜೊತೆ ನಟಿಸುತ್ತಿಲ್ಲ ಎನ್ನಲಾಗಿದೆ. ಅಸಲಿಗೆ ಚಿರಂಜೀವಿಯ 154ನೇ ಸಿನಿಮಾವನ್ನು ರವಿತೇಜಗೂ ಆಪ್ತವಾಗಿರುವ ಕೆಸ್ ರವೀಂದ್ರ ನಿರ್ದೇಶಿಸುತ್ತಿದ್ದಾರೆ. ಈಗ ರವಿತೇಜಗೆ ಪರ್ಯಾಯವಾಗಿ ಬೇರೆ ನಟರನ್ನು ನಿರ್ದೇಶಕರು ಹುಡುಕುತ್ತಿದ್ದಾರೆ.

ಚಿರಂಜೀವಿ ಕೈಯಲ್ಲಿ ಹಲವು ಸಿನಿಮಾಗಳು
ಚಿರಂಜೀವಿ ಕೈಯಲ್ಲಿ ಪ್ರಸ್ತುತ ನಾಲ್ಕು ಸಿನಿಮಾಗಳಿವೆ. ಅದರಲ್ಲಿ ಮಲಯಾಳಂ ಸಿನಿಮಾ 'ಲುಸಿಫರ್' ರೀಮೇಕ್ 'ಗಾಡ್ ಫಾದರ್' ತೆರೆಗೆ ಬರಲು ತಯಾರಾಗಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ಸಲ್ಮಾನ್ ಖಾನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಳಿಕ 'ವಾಲ್ಟರ್ ವೀರಯ್ಯ' ಹೆಸರಿನ ಸಿನಿಮಾ ತೆರೆಗೆ ಬರಲಿದೆ. ಬಳಿಕ ಚಿರಂಜೀವಿಯ 154ನೇ ಸಿನಿಮಾ ತೆರೆಗೆ ಬರಲಿದೆ. ಅದರ ಬಳಿಕ ಚಿರಂಜೀವಿ ಜೊತೆ ಕೀರ್ತಿ ಸುರೇಶ್ ನಟಿಸುತ್ತಿರುವ ತಮಿಳಿನ ಸಿನಿಮಾದ ರೀಮೇಕ್ 'ಭೋಲಾ ಶಂಕರ್' ತೆರೆಗೆ ಬರಲಿದೆ.


Click it and Unblock the Notifications











