"ಲೆಜೆಂಡ್ ಬಾಲಯ್ಯ.. ನಾನು ತೆಲುಗು ಸಿನಿಮಾ ನೋಡ್ತೀನಿ": ಆಂಧ್ರದಲ್ಲಿ ಅಚ್ಚ ಕನ್ನಡದಲ್ಲೇ ರಿಷಬ್ ಶೆಟ್ಟಿ ಮಾತು
ಈಗಾಗಲೇ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಕಾಂತಾರ' ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಇದೇ ವಾರ ಪರಭಾಷಾ ಪ್ರೇಕ್ಷಕರು ಅವರದ್ದೇ ಭಾಷೆಯಲ್ಲಿ 'ಕಾಂತರ' ದಂತಕಥೆಯನ್ನು ಕಣ್ತುಂಬಿಕೊಳ್ಳಬಹುದು. ಈಗಾಗಲೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಹೈದರಾಬಾದ್ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ದಾರೆ.
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ 'ಕಾಂತರ' ಚಿತ್ರದ ತೆಲುಗು ವಿತರಣೆ ಹಕ್ಕು ಖರೀದಿಸಿದ್ದಾರೆ. ಗೀತಾ ಆರ್ಟ್ಸ್ ಡಿಸ್ಟ್ರಿಬ್ಯೂಷನ್ ಬ್ಯಾನರ್ನಲ್ಲಿ ಸಿನಿಮಾ ರಿಲೀಸ್ ಮಾಡ್ತಿದ್ದಾರೆ. ಒಂದೇ ವಾರದಲ್ಲಿ ಸಿನಿಮಾ ಡಬ್ ಆಗಿ ರಿಲೀಸ್ಗೆ ರೆಡಿಯಾಗಿದೆ. ಹೈದರಾಬಾದ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಧ್ಯಮದವರಿಗೆ ಚಿತ್ರತಂಡ ಮಾಹಿತಿ ನೀಡಿದೆ. ನಿರ್ದೇಶಕ- ನಟ ರಿಷಬ್ ಶೆಟ್ಟಿ ಹಾಗೂ ನಾಯಕಿ ಸಪ್ತಮಿ ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕನ್ನಡದಲ್ಲೇ ಸಿನಿಮಾ ಎಲ್ಲಾ ಕಡೆ ರಿಲೀಸ್ ಆಗಿ ಸದ್ದು ಮಾಡ್ತಿದೆ. ಬೇಡಿಕೆ ಜಾಸ್ತಿ ಆಗಿದ್ದರಿಂದ ಈಗ ಡಬ್ ಮಾಡಿ ತೆಲುಗಿನಲ್ಲೂ 'ಕಾಂತರ' ಸಿನಿಮಾ ರಿಲೀಸ್ ಮಾಡ್ತಿದ್ದೀವಿ. ನೋಡಿ ಹರಸಿ ಎಂದರು.
ಈಗಾಗಲೇ ಇಂಗ್ಲೀಷ್ ಸಬ್ಟೈಟಲ್ ಜೊತೆಗೆ ಕನ್ನಡದಲ್ಲೇ 'ಕಾಂತರ' ಸಿನಿಮಾ ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲೂ ಸದ್ದು ಮಾಡುತ್ತಿದೆ. ಆದರೆ ಬೇರೆ ಭಾಷೆಗಳಿಗೆ ಡಬ್ ಮಾಡಿದರೆ ಮತ್ತಷ್ಟು ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪುವ ದೃಷ್ಟಿಯಿಂದ ಈ ಪ್ರಯತ್ನ ನಡೀತಿದೆ. ಇದೇ ಶುಕ್ರವಾರದಿಂದ 5 ಭಾಷೆಗಳಲ್ಲಿ 'ಕಾಂತರ' ಹವಾ ಶುರುವಾಗಲಿದೆ.

ಕನ್ನಡದಲ್ಲೇ ರಿಷಬ್ ಶೆಟ್ಟಿ ಮಾತು
ಅಂದರಿಕಿ ನಮಸ್ಕಾರಂ ಎಂದು ಮಾತು ಆರಂಭಿಸಿದ ರಿಷಬ್ ಶೆಟ್ಟಿ ನಾನು ಕನ್ನಡದಲ್ಲೇ ಮಾತನಾಡುತ್ತೀನಿ. ಕನ್ನಡಕ್ಕೂ ತೆಲುಗಿಗೂ ಬಹಳ ವ್ಯತ್ಯಾಸ ಇಲ್ಲ ಎಂದು ಮಾತು ಮುಂದುವರೆಸಿದರು. "ನಮಗೂ ತೆಲುಗಿಗೂ ಬಹಳ ವ್ಯತ್ಯಾಸ ಏನಿಲ್ಲ. ನಮ್ಮ ಭಾಷೆ, ನಮ್ಮ ರೀತಿ ನೀತಿ, ಜನಜೀವನ ಎಲ್ಲವೂ ಹತ್ತಿರ ಹತ್ತಿರ ಇದೆ. ತೆಲುಗು ಚಿತ್ರರಂಗ ಭಾರತೀಯ ಚಿತ್ರರಂಗದಲ್ಲೇ ಸಿನಿಮಾ ನೋಡುವ ಕಲ್ಚರ್ನ ತೆಲುಗರು ಭಾರತಕ್ಕೆ ತೋರಿಸಿದರು. ದಕ್ಷಿಣಭಾರತದ ಸಿನಿಮಾ ಎಂದಾಗ ತೆಲುಗು ಚಿತ್ರರಂಗ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತದೆ" ಎಂದರು.

ಲೆಜೆಂಡ್ ಅಂದರೆ ಬಾಲಯ್ಯ- ರಿಷಬ್ ಶೆಟ್ಟಿ
"ಕನ್ನಡದಲ್ಲಿ ಕಾಂತಾರ ಒಂದು ದಂತಕಥೆ ಎಂದು ಇತ್ತು. ತೆಲುಗಿನಲ್ಲಿ ಕಾಂತಾರ ಲೆಜೆಂಡ್ ಆಗಿದೆ. ಲೆಜೆಂಡ್ ಎಂದರೆ ಬಾಲಯ್ಯ ಬಾಬು ಸಿನಿಮಾ. ನಾನು ತುಂಬಾ ತೆಲುಗು ಸಿನಿಮಾಗಳನ್ನು ನೋಡಿದ್ದೇನೆ. ಕಾಂತಾರ ಲೆಜೆಂಡ್ ಅಂದರೆ ಒಂದು ಮಿಸ್ಟ್ರೀರಿಯಸ್ ಫಾರೆಸ್ಟ್. ವ್ಯವಸಾಯ ಭೂಮಿಯ ಕುರಿತಾಗಿ ಇರುವ ಕಥೆ. ಅಗ್ರಿಕಲ್ಚರ್ ಲ್ಯಾಂಡ್ ಅಂದಾಕ್ಷಣ ಅದು ಭಾರತದಾದ್ಯಂತ ಪ್ರತಿಹಳ್ಳಿಯಲ್ಲೂ ನಮ್ಮ ನಂಬಿಕೆ, ಆಚರಣೆ, ಕಲ್ಚರ್ ಎಲ್ಲರೂ ಆ ಭೂಮಿಯ ಜೊತೆಗೆ ಮುಂದುವರೆಯುತ್ತಾ ಬರುತ್ತದೆ. ಇದನ್ನು ಲೆಜೆಂಡರಿ ಸ್ಟೋರಿಸ್ ತರ ಕೇಳಿರುತ್ತೇವೆ. ಭೂತಕೋಲ, ಪಂಜುರಿ ದೇವರ ಆರಾಧನೆ ಇದೆ. ಭಾರತದ ಮೂಲೆ ಮೂಲೆಯಲ್ಲಿ ಇಂತಹ ಆರಾಧನೆ ನಡೆಯುತ್ತದೆ. ಇದು ಯೂನಿವರ್ಸಲ್ ಸಬ್ಜೆಕ್ಟ್. ಆಂಧ್ರದಲ್ಲೂ ಈ ಕಲ್ಚರ್ ಇದೆ. ನಿಮಗೂ ಸಿನಿಮಾ ಇಷ್ಟವಾಗುತ್ತದೆ."

ಬೇರೆ ಭಾಷೆಗೆ ಯಾಕೆ ಡಬ್ ಮಾಡಿದ್ದು?
"ಕನ್ನಡದಲ್ಲೇ ಸಿನಿಮಾ ಆಂಧ್ರದಲ್ಲಿ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಭಾಷೆಯನ್ನು ಮೀರಿ ಒಂದು ಸಿನಿಮಾವನ್ನು ನೀವು ಸ್ವೀಕರಿಸುತ್ತೀರ ಎನ್ನುವ ನಂಬಿಕೆ ಇದೆ. ಅಲ್ಲು ಅರವಿಂದ್ ಅವರು ಚಿತ್ರವನ್ನು ಇಲ್ಲಿ ಅರ್ಪಿಸುತ್ತಿರುವುದು ಬಹಳ ಖುಷಿಯ ವಿಚಾರ. ತೆಲುಗು ಚಿತ್ರರಂಗಕ್ಕೆ, ಭಾರತ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅವರು ನಮಗೆ ಜೊತೆ ಕೈಜೋಡಿಸಿರುವುದಕ್ಕೆ ಧನ್ಯವಾದ. ಅವರ 'ಅಹಾ' ಡಿಜಿಟಲ್ ಫ್ಲಾಟ್ಫಾರ್ಮ್ನಲ್ಲಿ ನನ್ನ 'ಬೆಲ್ಬಾಟಂ' ಹಾಗೂ 'ಹೀರೊ' ಸಿನಿಮಾಗಳು ಬಂದಿತ್ತು. ಹಾಗಾಗಿ ನಾನು ಇಲ್ಲಿ ಕೆಲವರು ಗೊತ್ತು ಎನ್ನಿಸುತ್ತದೆ. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಮಾಡೋಣ ಎಂದುಕೊಂಡಿದ್ವಿ. ನಂತರ ಎಲ್ಲರೂ ಕೇಳಿದ್ದಕ್ಕೆ ಡಬ್ ಮಾಡಿ ರಿಲೀಸ್ ಮಾಡ್ತಿದ್ದಿವಿ. ಕಾಂತಾರ ಎಲ್ಲವನ್ನು ಆಯ್ಕೆ ಮಾಡಿಕೊಂಡಿದೆ. ಮಕ್ಕಳಿಗೆ ಹೆಚ್ಚು ಈ ಸಿನಿಮಾ ತೋರಿಸಿ" ಎಂದು ಕೇಳಿಕೊಂಡಿದ್ದಾರೆ.

ಕ್ಲೈಮ್ಯಾಕ್ಸ್ ಉಸಿರು ಬಿಗಿ ಹಿಡ್ದು ನೋಡ್ದೆ- ಅರವಿಂದ್
ನಿರ್ಮಾಪಕ, ವಿತರಕ ಅಲ್ಲು ಅರವಿಂದ್ ಮಾತನಾಡಿ "ನಿಮಗೆ ವಿಭಿನ್ನ ಬಗೆಯ ಸಿನಿಮಾ ಬೇಕು ಎಂದರೆ ಕಾಂತಾರ ನೋಡಿ. 'ಪುಷ್ಪ' ರೀತಿಯಲ್ಲೇ ಫಾರೆಸ್ಟ್ ಬ್ಯಾಕ್ಡ್ರಾಪ್ ಮಾಡಿರುವ ಸಿನಿಮಾ ಇದು. ಕೊನೆ 30 ನಿಮಿಷ ನಾನು ಉಸಿರು ಬಿಗಿಹಿಡಿದು ಸಿನಿಮಾ ನೋಡ್ದೆ. ಅದ್ಭುತ ಸಿನಿಮಾ. ಆಕ್ಷನ್, ಟೆನ್ಷನ್, ದೈವತ್ವ ಎಲ್ಲವನ್ನು ಸೇರಿಸಿ ಮಾಡಿರುವ ಸಿನಿಮಾವನ್ನು ಣಾನು ಬಹಳ ಎಂಜಾಯ್ ಮಾಡ್ದೆ. ನೀವು ಕೂಡ ತಪ್ಪದೇ ನೋಡ್ತೀರಾ ಎಂದು ಭಾವಿಸಿದ್ದೇನೆ" ಎಂದರು.


Click it and Unblock the Notifications











