ಅಪಘಾತದ ಬಳಿಕ ಮೊದಲ ಪೋಸ್ಟ್ ಶೇರ್ ಮಾಡಿದ ನಟ ಸಾಯಿ ಧರಮ್ ತೇಜ್: ಆರೋಗ್ಯ ಸ್ಥಿತಿ ಹೇಗಿದೆ?
ತೆಲುಗು ನಟ, ಚಿರಂಜೀವಿ ಕುಟುಂಬದ ಕುಡಿ ಸಾಯಿ ಧರಮ್ ತೇಜ್ ಆರೋಗ್ಯದಲ್ಲಿ ಚೇತರಿಗೆ ಕಂಡುಬಂದಿದೆ. ಸುಮಾರು 20 ದಿನಗಳಿಂದ ಕೋಮದಲ್ಲಿದ್ದ ಧರಮ್ ತೇಜ್ ಅವರಿಗೆ ಪ್ರಜ್ಞೆ ಬಂದಿದೆ, ಇದು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಸಂತಸ ತಂದಿದೆ. ಸೆಪ್ಟಂಬರ್ 10ರಂದು ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಾಯಿ ಧರಮ್ ತೇಜ್ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮದಲ್ಲಿದ್ದ ಧರಮ್ ತೇಜ್ ಒಂದು ತಿಂಗಳ ಬಳಿಕ ಪ್ರಜ್ಞೆ ಬಂದಿದೆ, ಅಪಘಾತದದ ಬಳಿಕ ಮೊದಲ ಪೋಸ್ಟ್ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಧರಮ್ ತೇಜ್ ಆಸ್ಪತ್ರೆಯಲ್ಲಿದ್ದಾಗಲೇ ರಿಪಬ್ಲಿಕ್ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ಅಭಿಮಾನಿಗಳು ತೋರಿದ ಪ್ರೀತಿಗೆ ಧರಮ್ ತೇಜ್ ಧನ್ಯವಾದ ತಿಳಿಸಿದ್ದಾರೆ. ಅಪಘಾತದ ಬಳಿಕ ಮೊದಲ ಪೋಸ್ಟ್ ಮಾಡಿರುವ ಧರಮ್ ತೇಜ್ ಪ್ರೀತಿ ಮತ್ತು ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
ಥಮ್ಸ್ ಅಪ್ ಫೋಟೋ ಶೇರ್ ಮಾಡಿ ಸದ್ಯದಲ್ಲೇ ಎಲ್ಲರನ್ನೂ ನೋಡುವುದಾಗಿ ಹೇಳಿದ್ದಾರೆ. "ನನ್ನ ಮತ್ತು ನನ್ನ ಸಿನಿಮಾ ರಿಪಬ್ಲಿಕ್ ಮೇಲೆ ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಹೇಳುವ ಧನ್ಯವಾದ ಎನ್ನುವ ಪದ ತುಂಬಾ ಚಿಕ್ಕದು. ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ" ಎಂದು ಧರಮ್ ತೇಜ್ ಹೇಳಿದ್ದಾರೆ. ಇತ್ತೀಚಿಗಷ್ಟೆ ನಟ ಪವನ್ ಕಲ್ಯಾಣ್ ಕಾರ್ಯಕ್ರಮವೊಂದರಲ್ಲಿ ಧರಮ್ ತೇಜ್ ಇನ್ನು ಕೋಮದಲ್ಲಿದ್ದಾರೆ ಎಂದು ಹೇಳಿದ್ದರು. ಇದು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿತ್ತು. ಇದೀಗ ಪ್ರಜ್ಞೆ ಬಂದಿರುವುದು ಎಲ್ಲರಿಗೂ ಸಂತಸ ತಂದಿದೆ.

ಇನ್ನು ಧರಮ್ ತೇಜ್ ಪೋಸ್ಟ್ ಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಕಾಮೆಂಟ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಮಂತಾಗೆ ವಿಚ್ಛೇದನ ನೀಡಿ ಸುದ್ದಿಯಲ್ಲಿರುವ ನಟ ನಾಗ ಚೈತನ್ಯ ಕಾಮೆಂಟ್ ಮಾಡಿ "ಧರಮ್ ತೇಜ್ ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು" ಎಂದು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಧರಮ್ ತೇಜ್ ಕಳೆದ ತಿಂಗಳು ಗಣೇಶ ಹಬ್ಬದ ದಿನ ಹೈದರಾಬಾದ್ನಲ್ಲಿ ಧರಮ್ ತೇಜ್ ಬೈಕ್ ಅಪಘಾತಕ್ಕೀಡಾಗಿತ್ತು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಮದಾಪುರ ಪೊಲೀಸರು ಧರಮ್ ತೇಜ್ ವಿರುದ್ಧ ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಕೋಮದಲ್ಲಿ ಇದ್ದಾಗಲೇ ಧರಮ್ ತೇಜ್ ನಟನೆಯ ರಿಪಬ್ಲಿಕ್ ಸಿನಿಮಾ ಬಿಡುಗಡೆಯಾಗಿದೆ. ಅಕ್ಟೋಬರ್ 1ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ದೇವ ಕಟ್ಟ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ಸಾಯಿ ಧರಮ್ ತೇಜ್ ಅವರಿಗೆ ನಾಯಕಿಯಾಗಿ ಐಶ್ವರ್ಯಾ ರಾಜೇಶ್ ಕಾಣಿಸಿಕೊಂಡಿದ್ದರು. ಇನ್ನು ಉಳಿದಂತೆ ಜಗಪತಿ ಬಾಬು, ರಮ್ಯಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.


Click it and Unblock the Notifications











