ರಾಮನ ಹೆಸರಲ್ಲಿ ಹತ್ಯೆ, ಕಾಶ್ಮೀರಿ ಪಂಡಿತರ ಮೇಲೆ ಹಿಂಸೆ ಒಂದೇ: ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ನಟಿಸಿರುವ ಈವರೆಗಿನ ಎಲ್ಲ ಸಿನಿಮಾಗಳಲ್ಲಿಯೂ ಗಟ್ಟಿಯಾದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರದಲ್ಲಿ ಗಟ್ಟಿತನವಿಲ್ಲದಿದ್ದರೆ, ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲದೇ ಇದ್ದರೆ ಸಾಯಿ ಪಲ್ಲವಿ ನಟಿಸುವುದೇ ಇಲ್ಲ.
ಪಾತ್ರದಲ್ಲಿ ಗಟ್ಟಿತನ ಅರಸುವ ಸಾಯಿ ಪಲ್ಲವಿ ವೈಯಕ್ತಿಕವಾಗಿಯೂ ಗಟ್ಟಿ ಯುವತಿಯೇ. ಯಾವುದೇ ವಿಷಯದಲ್ಲಾದರೂ ಬಹಳ ಸ್ಪಷ್ಟ ನಿಲವು ತಳೆವ ಅವರು, ತಮ್ಮ ನಿಲವಿಗೆ ಅಚಲರಾಗಿರುತ್ತಾರೆ.
ಇದೀಗ ಸಾಯಿ ಪಲ್ಲವಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ನಕ್ಸಲ್ ನಾಯಕನನ್ನು ಪ್ರೀತಿಸುವ ಯುವತಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಇದೀಗ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಾಯಿ ಪಲ್ಲವಿ ಭಾಗವಹಿಸುತ್ತಿದ್ದು, ಪ್ರಚಾರ ಸಂಬಂಧ ಪಾಲ್ಗೊಂಡಿದ್ದ ಸಂದರ್ಶನವೊಂದರಲ್ಲಿ ಕಾಶ್ಮೀರಿ ಫೈಲ್ಸ್ ಮತ್ತು ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ನಿರ್ಭೀತಿಯಿಂದ ಸಾಯಿ ಪಲ್ಲವಿ ಮಾತನಾಡಿದ್ದಾರೆ.
'ಹೇಗನಿಸ್ಸಿತು ನಿಮಗೆ ಗನ್ ಹಿಡಿದುಕೊಂಡು ಅರಣ್ಯದಲ್ಲಿ ಓಡಾಡಿ ಚಿತ್ರೀಕರಣ ಮಾಡಿದ್ದೀರ. ನಿಮಗೆ ನಕ್ಸಲ್ಗಳ ಬಗ್ಗೆ ಸಿಂಪತಿ ಮುಡಿತಾ?' ಎಂದು ಸಂದರ್ಶಕ, ಸಾಯಿ ಪಲ್ಲವಿಯವರನ್ನು ಪ್ರಶ್ನೆ ಕೇಳಿದ್ದಾರೆ.

ನಕ್ಸಲ್ ವಾದದ ಬಗ್ಗೆ ಸಾಯಿ ಪಲ್ಲವಿ ಮಾತು
ಇದಕ್ಕೆ ಉತ್ತರಿಸಿದ ಸಾಯಿ ಪಲ್ಲವಿ, ''ಅದೊಂದು ಐಡಿಯಾಲಜಿ. ಶಾಂತಿ ಎಂದರೇನು ಎಂಬ ಬಗ್ಗೆ ನಿಮಗೆ ಒಂದು ಅಭಿಪ್ರಾಯ ಇರಬಹುದು. ಹಿಂಸೆ ಎಂದರೆ ಸಂಹವನದ ಅತಿ ತಪ್ಪು ದಾರಿ ಎಂದು ನಾನು ಭಾವಿಸಿದ್ದೇನೆ. ಹಿಂಸಾತ್ಮಕವಾಗಿ ನಾನು ಏನನ್ನಾದರು ಸಾಧಿಸುತ್ತೇನೆ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಆ ಸಮಯದಲ್ಲಿ ಅವರು (ನಕ್ಸಲ್) ತಮ್ಮ ಕಷ್ಟಗಳನ್ನು ಯಾರಿಗೆ ಹೇಗೆ ಅರಿಕೆ ಮಾಡಬೇಕೆಂಬುದು ಅರಿಯದೆ, ಅಥವಾ ನ್ಯಾಯ ಸರಿಯಾದ ದಾರಿಯಲ್ಲಿ ಧಕ್ಕದಾಗ ಒಂದು ಗುಂಪು ಮಾಡಿಕೊಂಡರು. ನಾವು ಜನರಿಗೆ ಒಳ್ಳೆಯದು ಮಾಡುತ್ತೇವೆ ಎಂದುಕೊಂಡರು. ಅವರು ಮಾಡಿದ್ದು ಸರಿಯಾ ತಪ್ಪಾ ನಾವೀಗ ನಿರ್ಣಯ ಮಾಡುವುದು ಸೂಕ್ತವಲ್ಲವೇನೋ'' ಎಂದಿದ್ದಾರೆ ಸಾಯಿ ಪಲ್ಲವಿ.

ಭಾರತ-ಪಾಕಿಸ್ತಾನ ಸೈನಿಕರ ಉದಾಹರಣೆ
ಭಾರತ, ಪಾಕಿಸ್ತಾನದ ಉದಾಹರಣೆ ಬಳಸಿ ಮಾತನಾಡಿದ ಸಾಯಿ ಪಲ್ಲವಿ, ''ಪಾಕಿಸ್ತಾನದ ಸೈನಿಕರು, ನಮ್ಮ ದೇಶದ ಸೈನಿಕರನ್ನು ಶತ್ರುಗಳೆಂದು, ಭಯೋತ್ಪಾದಕರೆಂದು ಭಾವಿಸುತ್ತಾರೆ. ಏಕೆಂದರೆ ನಾವು ಈ ಕಡೆ ಇದ್ದೇವೆ, ನಮ್ಮ ಸೈನಿಕರು ಪಾಕಿಸ್ತಾನದ ಸೈನಿಕರನ್ನು ಭಯೋತ್ಪಾದಕರು, ವೈರಿಗಳು ಎಂದುಕೊಳ್ಳುತ್ತಾರೆ. ಹೀಗೆ ದೃಷ್ಟಿಕೋನಗಳು ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ಬದಲಾಗಿಬಿಡುತ್ತವೆ. ಅದು ನನಗೆ ಅರ್ಥ ಆಗುವುದಿಲ್ಲ. ಹಾಗಾಗಿ ನಾವು ಅವರದ್ದು ತಪ್ಪು, ಇವರದ್ದು ಸರಿ ಎಂದು ಹೇಳಲಾಗುವುದಿಲ್ಲ. ಆ ಸಮಯದಲ್ಲಿ ಅವರು (ನಕ್ಸಲರು) ನಂಬಿದ್ದರು, ನಾವು ಹೀಗೆ ಮಾಡಿದರೆ (ಶಸ್ತ್ರಸಜ್ಜಿತ ಹೋರಾಟ) ನಮಗೆ ನ್ಯಾಯ ಸಿಗುತ್ತೆ ಎಂದು ನಂಬಿದರು, ಹೀಗೆ ಮಾಡಿದರೆ ನಮ್ಮ ಮಕ್ಕಳು ಚೆನ್ನಾಗಿ ಬದುಕಬಲ್ಲರು ಎಂದುಕೊಂಡರು. ಹೀಗಿರುವಾಗ ನಾನು ಈಗಿನ ಪರಿಸ್ಥಿತಿಯಲ್ಲಿ ಕೂತು ಅವರ ಕಾರ್ಯವನ್ನು ಜಡ್ಜ್ ಮಾಡುವುದು ಸೂಕ್ತವಲ್ಲ'' ಎಂದಿದ್ದಾರೆ ಸಾಯಿ ಪಲ್ಲವಿ.

''ದೌರ್ಜನ್ಯಕ್ಕೆ ಒಳಗಾದವರ ಪರ ನಿಲ್ಲುವುದು ನಾನು ಪಾಲಿಸುವ ಆದರ್ಶ''
ನೀವು ಎಡಪಂಥೀಯ ಹೋರಾಟಗಳಲ್ಲಿ ಭಾಗವಹಿಸಿದ್ದೀರ? ಹತ್ತಿರದಿಂದ ಗಮನಿಸಿದ್ದೀರ? ಎಂಬ ಸಂದರ್ಶಕನ ಪ್ರಶ್ನೆಗೆ ಉತ್ತರಿಸಿರುವ ಸಾಯಿ ಪಲ್ಲವಿ, ''ನಾನು ಬೆಳೆದ ಕುಟುಂಬ ಬಹಳ ನ್ಯೂಟ್ರಲ್ ಆದ ಕುಟುಂಬ. ಎಡ ಅಥವಾ ಬಲಪಂಥೀಯ ಆಲೋಚನೆಯುಳ್ಳ ಕುಟುಂಬದ ನನ್ನದಲ್ಲ. ಹಾಗಾಗಿ ನನ್ನ ಮೇಲೆ ಯಾವುದರ ಪ್ರಭಾವ ಇಲ್ಲ. ನನ್ನ ಕುಟುಂಬ ಹೇಳಿಕೊಟ್ಟಿರುವುದು ನೀನು ಒಳ್ಳೆಯ ವ್ಯಕ್ತಿಯಾಗಿರಬೇಕು. ಯಾರೋ ಒಬ್ಬರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದರೆ ನೀನು ಆ ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಪರವಾಗಿ ನಿಲ್ಲು ಎಂದು ಹೇಳಿಕೊಟ್ಟಿದ್ದಾರೆ. ನಾನು ಹಾಗೆಯೇ ಬೆಳೆದಿದ್ದೀನಿ'' ಎಂದರು ಸಾಯಿ ಪಲ್ಲವಿ.

ಎರಡು ಉದಾಹರಣೆ ನೀಡಿದ ಸಾಯಿ ಪಲ್ಲವಿ
''ನ್ಯೂಟ್ರಲ್ ಫ್ಯಾಮಿಲಿಯಲ್ಲಿ ಬೆಳೆದ ಕಾರಣ ಎಡ-ಬಲದಲ್ಲಿ ಯಾರು ಸರಿ ಎಂದು ನನಗೆ ಹೇಳುವುದು ಕಷ್ಟ. ಕೆಲವು ದಿನಗಳ ಮುಂದೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಂತು ಅದರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಹೇಗೆ ಹಿಂಸೆ ಮಾಡಲಾಯಿತು ಎಂದು ಅವರು ತೋರಿಸಿದ್ದಾರೆ. ಹಾಗೆ ಕಳೆದ ವರ್ಷವೇ ಇರಬೇಕು ಕೋವಿಡ್ ಸಮಯದಲ್ಲಿ ವ್ಯಕ್ತಿಯೊಬ್ಬ ಗಾಡಿಯಲ್ಲಿ ಹಸು ತೆಗೆದುಕೊಂಡು ಹೋಗುತ್ತಿದ್ದ. ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಆಗಿದ್ದ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಲಾಯಿತು. ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು. ಇದನ್ನು ನೋಡಿದಾಗ ಆಗ ಕಾಶ್ಮೀರದಲ್ಲಿ ನಡೆದಿದ್ದಕ್ಕೂ ಈಗ ನಡೆದಿದ್ದಕ್ಕೂ ವ್ಯತ್ಯಾಸ ಕಾಣಿಸುತ್ತಿಲ್ಲ'' ಎಂದಿದ್ದಾರೆ ಸಾಯಿ ಪಲ್ಲವಿ.

''ನಾವು ಒಳ್ಳೆಯವರಾಗಿರದಿದ್ದರೆ ಎಡ-ಬಲ ಎರಡೂ ಕಡೆ ನ್ಯಾಯ ಇರುವುದಿಲ್ಲ''
''ನಾವು ಒಳ್ಳೆಯವರಾಗಿರಬೇಕು. ನಾವು ಮಾನವೀಯ ವ್ಯಕ್ತಿಗಳಾಗಿದ್ದರೆ ನಾವು ಯಾರನ್ನೂ ಹರ್ಟ್ ಮಾಡುವುದಿಲ್ಲ. ಮತ್ತೊಬ್ಬ ವ್ಯಕ್ತಿಯ ಮೇಲೆ ನಾವು ಒತ್ತಡ ಹೇರುವುದೇ ಇಲ್ಲ. ಎಡ ಸರಿಯೋ ಬಲ ಸರಿಯೋ ಎಂದು ನೀವು ಕೇಳಿದರೆ. ನೀವು ಒಳ್ಳೆಯ ವ್ಯಕ್ತಿ ಆಗದೇ ಇದ್ದರೆ ಯಾವ ಕಡೆಯೂ ನ್ಯಾಯ ಇರುವುದಿಲ್ಲ. ಯಾವ ಕಡೆಯೂ ಸರಿ ಎಂಬುದು ಇರುವುದಿಲ್ಲ'' ಎಂದಿದ್ದಾರೆ ಸಾಯಿ ಪಲ್ಲವಿ. ನಟಿ ಸಾಯಿ ಪಲ್ಲವಿ ಆಡಿರುವ ಮಾತುಗಳು ವೈರಲ್ ಆಗಿದ್ದು, ಸಾಯಿ ಪಲ್ಲವಿ ಮಾತಿನ ವಿಡಿಯೋ ಕ್ಲಿಪ್ಪಿಂಗ್ಗಳು ವೈರಲ್ ಆಗುತ್ತಿವೆ.


Click it and Unblock the Notifications











