ಈ ನಾಲ್ಕು ದೊಡ್ಡ ಸಿನಿಮಾಗಳಲ್ಲಿ ನಟಿಸಬೇಕಿತ್ತು ಸಮಂತಾ! ಆದರೆ...
ಸಮಂತಾ ದಕ್ಷಿಣ ಭಾರತದ ಸ್ಟಾರ್ ನಟಿ. ಸಮಂತಾ ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರ್ಷಗಳಾಗಿವೆ. ಆರಂಭದ ಹಲವು ವರ್ಷ ಮರ ಸುತ್ತುವ ನಾಯಕಿಯ ಪಾತ್ರಗಳಲ್ಲೇ ನಟಿಸುತ್ತಾ ಬಂದಿದ್ದ ಸಮಂತಾ, ಇತ್ತೀಚಿನ ಕೆಲ ವರ್ಷಗಳಲ್ಲಿ ಬಹುದೊಡ್ಡ ಬದಲಾವಣೆಯನ್ನು ತಮ್ಮ ಪಾತ್ರದ ಆಯ್ಕೆಯ ವಿಷಯದಲ್ಲಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಾಲು-ಸಾಲು ಯಶಸ್ಸು ಅವರ ಪಾಲಾಗುತ್ತಿದೆ.
ತೆಲುಗು, ತಮಿಳು ಚಿತ್ರರಂಗಕ್ಕೆ ಮಾತ್ರವೇ ಸೀಮಿತವಾಗಿದ್ದ ಸಮಂತಾರ ಅಭಿನಯ ಪ್ರತಿಭೆ ಮೆಚ್ಚಿ ಅವರಿಗೆ ಬಾಲಿವುಡ್ ಮಾತ್ರವಲ್ಲ ಹಾಲಿವುಡ್ನಿಂದಲೂ ಅವಕಾಶಗಳು ಅರಸಿ ಬರುತ್ತಿವೆ. ಆದರೆ ಇದೇ ಸಮಯಕ್ಕೆ ಸಮಂತಾ ಬಂದ ಅವಕಾಶಗಳನ್ನು ತಿರಸ್ಕರಿಸುತ್ತಿದ್ದಾರೆ. ಇದಕ್ಕೆ ಆರೋಗ್ಯ ಸೇರಿದಂತೆ ಹಲವು ಕಾರಣಗಳಿವೆ.
ನಟಿ ಸಮಂತಾ ತಮ್ಮ ವೃತ್ತಿ ಜೀವನದಲ್ಲಿ ಹಲವು ಸಿನಿಮಾಗಳ ಅವಕಾಶಗಳನ್ನು ತಿರಸ್ಕರಿಸಿದ್ದಾರೆ. ಅದೂ ಸಾಮಾನ್ಯ ಸಿನಿಮಾಗಳನ್ನಲ್ಲ, ದೊಡ್ಡ ಸ್ಟಾರ್ ನಟರ, ದೊಡ್ಡ ನಿರ್ಮಾಣ ಸಂಸ್ಥೆಗಳ ಸಿನಿಮಾಗಳನ್ನೇ ಸಮಂತಾ ತಿರಸ್ಕರಿಸಿದ್ದಾರೆ. ಅವುಗಳಲ್ಲಿ ಪ್ರಮುಖ ನಾಲ್ಕು ಸಿನಿಮಾಗಳು ಕೆಳಕಂಡಂತಿವೆ.

ಶಾರುಖ್ ಖಾನ್ ಸಿನಿಮಾ ನಿರಾಕರಿಸಿದ ಸಮಂತಾ
ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆದರೆ ಈ ಅವಕಾಶ ಮೊದಲು ಹೋಗಿದ್ದು ಸಮಂತಾಗೆ! ಆದರೆ ಆಗ ಸಿನಿಮಾ ನಿರಾಕರಿಸಿದ್ದ ಸಮಂತಾ, ತಾವು ತಾಯಿ ಆಗುವ ಯೋಚನೆಯಲ್ಲಿದ್ದಿದ್ದರಿಂದ ಆ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಸಿನಿಮಾದ ಚಿತ್ರೀಕರಣ ತಡವಾಯ್ತು. ಆ ವೇಳೆಗೆ ಸಮಂತಾ-ನಾಗ್ ಚೈತನ್ಯ ವಿಚ್ಛೇಧನ ಆಯಿತು. ಆದರೆ ಅಷ್ಟರಲ್ಲಾಗಲೇ ಅದಾಗಲೇ ನಯನತಾರಾ ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದರು 'ಜವಾನ್' ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ!

'ಪುಷ್ಪ' ಸಿನಿಮಾದ ನಾಯಕಿ ಆಗಬೇಕಿತ್ತು!
'ಪುಷ್ಪ' ಸಿನಿಮಾದಲ್ಲಿ ನಟಿ ಸಮಂತಾ 'ಊ ಅಂಟಾವ, ಊ ಹು ಅಂಟಾವ' ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಇದು ಅವರ ಮೊದಲ ಐಟಂ ಹಾಡು. ಆದರೆ ಈ ಸಿನಿಮಾದ ನಾಯಕಿಯೇ ಅವರಾಗಬೇಕಿತ್ತು. ರಶ್ಮಿಕಾ ಮಂದಣ್ಣ ನಟಿಸಿರುವ 'ಶ್ರೀವಲ್ಲಿ' ಪಾತ್ರಕ್ಕೆ ಸಮಂತಾರನ್ನು ಆಯ್ಕೆ ಮಾಡುವ ಇರಾದೆ ನಿರ್ದೇಶಕ ಸುಕುಮಾರ್ಗೆ ಇತ್ತು. ಆದರೆ ಆಗಲೂ ಸಹ ಕುಟುಂಬಕ್ಕೆ ಆದ್ಯತೆ ನೀಡಿ ಸಮಂತಾ ಆ ಸಿನಿಮಾದ ಅವಕಾಶವನ್ನು ಕೈ ಚೆಲ್ಲಿದರು. ಆದರೆ ವಿಚ್ಛೇಧನ ಆದ ಬಳಿಕ 'ಊ ಅಂಟಾವ' ಹಾಡಿಗೆ ನರ್ತಿಸಿದರು. ಆ ಹಾಡನ್ನು ಸಿನಿಮಾ ಚಿತ್ರೀಕರಣದ ಕೊನೆಯಲ್ಲಿ ಚಿತ್ರೀಕರಣ ಮಾಡಿಕೊಳ್ಳಲಾಯಿತು.

ಶಂಕರ್ ನಿರ್ದೇಶನದ 'ಐ'
ಭಾರತದ ದೊಡ್ಡ ಬಜೆಟ್ ಸಿನಿಮಾಗಳ ನಿರ್ದೇಶಕ ಎಂದೇ ಹೆಸರಾಗಿರುವ ತಮಿಳಿನ ಶಂಕರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಮಂತಾಗೆ ಒದಗಿ ಬಂದಿತ್ತು. ಆದರೆ ಅದನ್ನು ಸಮಂತಾ ನಿರಾಕರಿಸಿದರು. ಶಂಕರ್ ನಿರ್ದೇಶಿಸಿ, ಚಿಯಾನ್ ವಿಕ್ರಂ ನಟಿಸಿದ್ದ 'ಐ' ಸಿನಿಮಾದ ನಾಯಕಿ ಪಾತ್ರ ಮೊದಲಿಗೆ ಆಫರ್ ಆಗಿದ್ದು ಸಮಂತಾಗೆ. ಆದರೆ ಅನಿವಾರ್ಯ ಕಾರಣಗಳಿಂದ ಸಮಂತಾ ಆ ಸಿನಿಮಾದಲ್ಲಿ ನಟಿಸಲಿಲ್ಲ. ನಾಯಕಿ ಪಾತ್ರ ಆಮಿ ಜಾಕ್ಸನ್ ಪಾಲಾಯಿತು.

2014 ರಲ್ಲೇ ರಾಮ್ ಚರಣ್ ಜೊತೆ ನಟಿಸುವ ಅವಕಾಶ
ಸಮಂತಾ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿರುವ 'ರಂಗಸ್ಥಳಂ' ಸಿನಿಮಾ ಸೂಪರ್ ಹಿಟ್ ಆಗಿದೆ. ಆದರೆ ಈ ಜೋಡಿ ಅದಕ್ಕೂ ಮೊದಲೇ ಒಟ್ಟಿಗೆ ನಟಿಸಬೇಕಿತ್ತು. 2014 ರಲ್ಲಿ ರಾಮ್ ಚರಣ್ ನಟಿಸಿದ್ದ 'ಯೆವುಡು' ಸಿನಿಮಾದ ನಾಯಕಿಯ ಪಾತ್ರ ಸಮಂತಾಗೆ ಒಲಿದಿತ್ತು. ಆದರೆ ಡೇಟ್ಸ್ ಸಿಗದ ಕಾರಣ ಆ ಅವಕಾಶವನ್ನು ಸಮಂತಾ ಕೈ ಚೆಲ್ಲಿದರು. ಆದರೆ ಆ ಬಳಿಕ ರಾಮ್ ಚರಣ್ ಜೊತೆ 'ರಂಗಸ್ಥಳಂ' ಸಿನಿಮಾದಲ್ಲಿ ನಟಿಸಿ ಬ್ಲಾಕ್ ಬಸ್ಟರ್ ಹಿಟ್ ನೀಡಿದರು.


Click it and Unblock the Notifications











