ಕೊರೊನಾ ಆತಂಕ: ಮಹೇಶ್ ಬಾಬು-ಕೀರ್ತಿ ಸುರೇಶ್ ಚಿತ್ರೀಕರಣ ಮುಂದೂಡಿಕೆ?
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸುತ್ತಿರುವ ಸರ್ಕಾರು ವಾರಿ ಪಾಟ ಸಿನಿಮಾ ಚಿತ್ರೀಕರಣ ವಿಚಾರಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಮೊದಲ ಹಂತದ ಶೂಟಿಂಗ್ ಮುಗಿಸಿದ್ದ ಚಿತ್ರತಂಡ ಎರಡನೇ ಹಂತಕ್ಕೆ ಸಜ್ಜಾಗಿತ್ತು. ಆದ್ರೀಗ, ಕೊರೊನಾ ಕಾರಣದಿಂದ ಚಿತ್ರೀಕರಣ ಮುಂದೂಡಿದೆ ಎಂದು ವರದಿಯಾಗಿದೆ.
ಹೌದು, ಗೋವಾದಲ್ಲಿ ನಡೆಯಬೇಕಿದ್ದ ಸರ್ಕಾರು ವಾರಿ ಪಾಟ ಚಿತ್ರೀಕರಣ ಸದ್ಯಕ್ಕೆ ರದ್ದುಗೊಂಡಿದೆ ಎಂದು ಹೇಳಲಾಗಿದೆ. ಗೋವಾದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಮಹೇಶ್ ಬಾಬು ಚಿತ್ರತಂಡ ಗೋವಾ ಭೇಟಿಗೆ ಬ್ರೇಕ್ ಹಾಕಿದೆ.
ಕೊರೊನಾ ಪರಿಸ್ಥಿತಿ ಸುಧಾರಿಸಿದ ನಂತರ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಅಂದ್ಹಾಗೆ, ಸರ್ಕಾರು ವಾರಿ ಪಾಟ ಚಿತ್ರತಂಡ ದುಬೈನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿತ್ತು. ಕೊರೊನಾ ಲಾಕ್ಡೌನ್ ಆದ್ಮೇಲೆ ದುಬೈಗೆ ಹಾರಿದ್ದ ಚಿತ್ರತಂಡ ಮೊದಲ ಹಂತದ ಶೂಟಿಂಗ್ ಮಾಡಿತ್ತು. ನಟ ಮಹೇಶ್ ಬಾಬು, ನಟಿ ಕೀರ್ತಿ ಸುರೇಶ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.
ದುಬೈನಲ್ಲಿ ನಡೆದ ಚಿತ್ರೀಕರಣದ ಕೆಲವು ಫೋಟೋಗಳನ್ನು ಮಹೇಶ್ ಬಾಬು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಮಹೇಶ್ ಬಾಬು ಪತ್ನಿ ಮತ್ತು ಮಕ್ಕಳು ಸಹ ದುಬೈಗೆ ಹೋಗಿದ್ದರು.
ಮುಂದಿನ ವರ್ಷದ ಸಂಕ್ರಾಂತಿಗೆ ಸರ್ಕಾರು ವಾರಿ ಪಾಟ ಸಿನಿಮಾ ತೆರೆಗೆ ಬರಲಿದೆ. ಈ ಹಿನ್ನೆಲೆ ಸೆಪ್ಟೆಂಬರ್ ಅಂತ್ಯದೊಳಗೆ ಸಂಪೂರ್ಣ ಚಿತ್ರೀಕರಣ ಮುಗಿಸಲು ನಿರ್ದೇಶಕ ಪರುಶರಾಮ್ ಯೋಜಿಸಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಮತ್ತು 14 ರೀಲ್ ಪ್ಲಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹಾಕಿದೆ. ಇನ್ನುಳಿದಂತೆ ವೆನ್ನಿಲಾ ಕಿಶೋರ್, ಜಯರಾಂ, ಸುಬ್ಬುರಾಜು ತಾರಬಳಗದಲ್ಲಿದ್ದಾರೆ. ಎಸ್ ತಮನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಅದಾದ ಬಳಿಕ ನಟ ಮಹೇಶ್ ಬಾಬು ರಾಜಮೌಳಿ ಜೊತೆ ಸಿನಿಮಾ ಮಾಡಲಿದ್ದಾರೆ.


Click it and Unblock the Notifications











