ರಾಜಕೀಯಕ್ಕೆ 'ಕೈ ಮುಗಿದ' ಮತ್ತೊಬ್ಬ ಸ್ಟಾರ್ ನಟ, ಸಮಾಜ ಸೇವೆಯತ್ತ ಮುಖ
ತೆಲುಗು ರಾಜ್ಯಗಳಲ್ಲಿ ಸಿನಿಮಾ ರಂಗ ಹಾಗೂ ರಾಜಕೀಯದ ಮಧ್ಯೆ ಅಂತರ ಬಹಳ ಕಿರಿದು. ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ನಂದಮೂರಿ ತಾರಕರಾಮಾ ರಾವ್ ಸಿಎಂ ಆಗಿ ಅವಿಭಜಿತ ಆಂಧ್ರ ಪ್ರದೇಶ ರಾಜ್ಯವನ್ನು ಆಳಿದ್ದರು.
ನಂದಮೂರಿ ಹಾದಿಯಲ್ಲಿ ಹಲವು ಸಿನಿಮಾ ತಾರೆಯರು ರಾಜಕೀಯ ಪ್ರವೇಶಿಸಿದರು. ಹಲವರು ಯಶಸ್ವಿಯಾದರು. ತೆಲುಗು ರಾಜ್ಯಗಳಲ್ಲಿ ಸಣ್ಣ-ಪುಟ್ಟ ನಟ-ನಟಿಯರು ಸಹ ರಾಜಕೀಯ ಸೇರುವುದು ಪಕ್ಷದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಳ್ಳುವುದು ತೀರಾ ಸಾಮಾನ್ಯ.
ದೊಡ್ಡ ದೊಡ್ಡ ಸ್ಟಾರ್ ನಟರಂತೂ ರಾಜಕೀಯಕ್ಕೆ ಬರುವುದು ಕಡ್ಡಾಯ ಎಂಬಂತೆ ಸ್ವಂತ ಪಕ್ಷಗಳನ್ನು ಸ್ಥಾಪಿಸಿ ಚುನಾವಣೆಗೆ ಇಳಿಯುತ್ತಾರೆ. ಆದರೆ ಎನ್ಟಿಆರ್ ಮಾದರಿಯ ಗೆಲುವು ಯಾರಿಗೂ ಧಕ್ಕಿಲ್ಲ. ನಟ ಚಿರಂಜೀವಿ ಇದೇ ರೀತಿಯ ಸಾಹಸ ಮಾಡಿದರಾದರೂ ಕೊನೆಗೆ ಏನೂ ಆಗಲಾರದೆ ರಾಜಕೀಯಕ್ಕೆ ಇತಿಶ್ರೀ ಹಾಡಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಮತ್ತೊಬ್ಬ ಹಿರಿಯ ನಟ ತಮ್ಮ ರಾಜಕೀಯ ಜೀವನಕ್ಕೆ ಮಂಗಳ ಹಾಡಿದ್ದಾರೆ. ಅವರೇ ಮೋಹನ್ ಬಾಬು.
ಸತತ ಮೂರು ದಶಕಗಳಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದು ಹಲವು ರಾಜಕೀಯ ಪಕ್ಷಗಳಿಗಾಗಿ ಪ್ರಚಾರ ಮಾಡಿ, ಕೆಲವು ಪಕ್ಷಗಳ ಸದಸ್ಯರೂ ಆಗಿದ್ದ ಮೋಹನ್ ಬಾಬು ಇದೀಗ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಹೀಗೆ ಹಠಾತ್ತನೆ ಗುಡ್ ಬೈ ಹೇಳಲು ಇತ್ತೀಚೆಗೆ ಅವರಿಗೆ ಆದ ಅಪಮಾನವೇ ಕಾರಣ ಎನ್ನಲಾಗುತ್ತಿದೆ.

ಚಿರಂಜೀವಿಗಿಂತಲೂ ಸೀನಿಯರ್ ಮೋಹನ್ ಬಾಬು
ತೆಲುಗು ಚಿತ್ರರಂಗದಲ್ಲಿ ನಟ ಮೋಹನ್ ಬಾಬು, ಮೆಗಾಸ್ಟಾರ್ ಚಿರಂಜೀವಿ ಗಿಂತಲೂ ನಾಲ್ಕು ವರ್ಷ ಹಿರಿಯರು. ಚಿತ್ರರಂಗಕ್ಕೆ ಕಾಲಿಡುವ ಮುನ್ನ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಮೋಹನ್ ಬಾಬು 80-90ರ ದಶಕದಲ್ಲಿ ಜನಪ್ರಿಯ ನಾಯಕ ನಟರಾಗಿದ್ದರು. ಐದು ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಮೋಹನ್ ಬಾಬು, ತಮ್ಮದೇ ಆದ ಅಭಿಮಾನಿಗಳನ್ನು ಸಹ ಸಂಪಾದನೆ ಮಾಡಿದ್ದಾರೆ. ತೆಲುಗು ಚಿತ್ರರಂಗದ 'ಹಿರಿಯ' ಎನಿಸಿಕೊಂಡಿದ್ದಾರೆ.

1982ರಲ್ಲಿಯೇ ರಾಜಕೀಯ ಪ್ರವೇಶ ಮಾಡಿದ್ದರು
ರಾಜಕೀಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಮೋಹನ್ಬಾಬು 1982 ರಲ್ಲಿಯೇ ಎನ್ಟಿಆರ್ ಸ್ಥಾಪಿಸಿದ ಟಿಡಿಪಿ ಪಕ್ಷ ಸೇರಿದರು. ಬಳಿಕ ರಾಜ್ಯಸಭಾ ಸದಸ್ಯರಾಗಿ ಆರು ವರ್ಷ ಕಾರ್ಯ ನಿರ್ವಹಿಸಿದರು. 1999ರಲ್ಲಿ ಟಿಡಿಪಿ ತೊರೆದ ಮೋಹನ್ ಬಾಬು ನಿರ್ಮಾಪಕ, ನಟರಾಗಿ ಸಿನಿಮಾಗಳ ಮೇಲೆ ಹೆಚ್ಚು ಗಮನವಹಿಸಿದರು. ಎನ್ಟಿಆರ್ ಅಗಲಿಕೆ ಬಳಿಕ ರಾಜಕೀಯದಿಂದ ಬಹುತೇಕ ದೂರವೇ ಉಳಿದರು ಮೋಹನ್ ಬಾಬು. ಬಳಿಕ 2019ರಲ್ಲಿ ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದರು. 2020ರಲ್ಲಿ ಮೋದಿಯನ್ನು ಭೇಟಿ ಮಾಡಿದ್ದ ಮೋಹನ್ ಬಾಬು ಬಿಜೆಪಿ ಸೇರುತ್ತಾರೆಂಬ ಗಾಳಿ ಸುದ್ದಿಯೂ ಹರಿದಾಡಿತ್ತು. ಆದರೆ ಈಗ ಒಟ್ಟಾರೆ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.

ಸಚಿವ ಪೆರ್ನಿ ನಾನಿ ಜೊತೆ ಮಾತುಕತೆ
ನಿನ್ನೆ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಸಚಿವರಾಗಿರುವ ಪೆರ್ನಿ ನಾನಿಯನ್ನು ಮನೆಗೆ ಬರಮಾಡಿಕೊಂಡು ಮಾತುಕತೆ ನಡೆಸಿದ ಮೋಹನ್ ಬಾಬು, ''ನಾನು ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ. ಇದೊಂದು ಸೌಹಾರ್ಧಯುತ ಭೇಟಿ ಅಷ್ಟೆ. ಚಿರಂಜೀವಿ ಹಾಗೂ ಇತರರು ಜಗನ್ ಜೊತೆ ಮಾಡಿದ ಮಾತುಕತೆ ಬಗ್ಗೆ ನಾವು ಚರ್ಚೆ ಮಾಡಿಲ್ಲ. ನಾನು ರಾಜಕೀಯದಿಂದ ದೂರ ಉಳಿದು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುತ್ತಿದ್ದೇನೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದ್ದೇನೆ'' ಎಂದು ಮೋಹನ್ ಬಾಬು ಹೇಳಿದ್ದಾರೆ.

ನಿರ್ಣಯಕ್ಕೆ ಕಾರಣವೇನು?
ಮೋಹನ್ ಬಾಬು ಅವರ ಈ ಹಠಾತ್ ನಿರ್ಣಯಕ್ಕೆ ಬೇರೆಯದೇ ಕಾರಣ ಇದೆ ಎನ್ನಲಾಗುತ್ತಿದೆ. ನಟ ಚಿರಂಜೀವಿ ಅವರು ಸಿಎಂ ಜಗನ್ ಜೊತೆ ಭೇಟಿಯಾಗಿ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಂಡಿದ್ದಾರೆ. ಮಹೇಶ್ ಬಾಬು, ಪ್ರಭಾಸ್, ರಾಜಮೌಳಿ ಸೇರಿದಂತೆ ಇತರರ ತಂಡವನ್ನು ಕರೆದುಕೊಂಡು ಹೋಗಿ ಜಗನ್ ಜೊತೆ ಮಾತುಕತೆ ನಡೆಸಿದರು. ಆದರೆ ಮೋಹನ್ ಬಾಬು ಅನ್ನು ಸಭೆಗೆ ಕರೆದಿರಲಿಲ್ಲ. ಜಗನ್ ಸಹ ತಮ್ಮದೇ ಪಕ್ಷದವರಾಗಿದ್ದರೂ ಮೋಹನ್ ಬಾಬು ಅವರಿಗೆ ಆಹ್ವಾನ ನೀಡಿರಲಿಲ್ಲ. ಮೋಹನ್ ಬಾಬು ಪುತ್ರ ವಿಷ್ಣು ಮಾ ಅಧ್ಯಕ್ಷರಾಗಿದ್ದರೂ ಅವರಿಗೆ ಆಹ್ವಾನ ಇರಲಿಲ್ಲ. ತಮ್ಮದೇ ಪಕ್ಷದಿಂದ ಆದ ಈ ಅಪಮಾನಕ್ಕೆ ಪ್ರತಿಕ್ರಿಯೆಯಾಗಿ ಮೋಹನ್ ಬಾಬು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











