ಮುಂಬೈನಲ್ಲಿ 'RRR' ಟಿಕೆಟ್ ಸಿಗಲಿಲ್ಲ, ಬೆಂಗಳೂರಲ್ಲಿ ನೋಡುವೆ ಎಂದ ನಟಿ ಶ್ರಿಯಾ
ತಾವೇ ನಟಿಸಿರುವ ಸಿನಿಮಾ ನೋಡಲು ತಮಗೆ ಟಿಕೆಟ್ ಸಿಗದಿದ್ದಾಗ ಆಗುವುದು ಬೇಸರವಲ್ಲ ಬದಲಿಗೆ ಸಂತೋಶ. ಈ ಸಂತೋಶದ ಅನುಭವ ಇತ್ತೀಚೆಗಷ್ಟೆ ನಟಿ ಶ್ರಿಯಾ ಶರನ್ಗೆ ಆಗಿದೆ.
ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'RRR'ನಲ್ಲಿ ನಟಿ ಶ್ರಿಯಾ ಶರನ್ ನಟಿಸಿದ್ದಾರೆ. ಆದರೆ ತಮ್ಮ ಸಿನಿಮಾವನ್ನು ನೋಡಲು ಪ್ರಯತ್ನಿಸಿದಾಗ ಅವರಿಗೆ ಟಿಕೆಟ್ ದೊರೆತಿಲ್ಲ. ಇದರಿಂದ ನಟಿಗೆ ಬೇಸರವಾಗಿಲ್ಲ ಬದಲಿಗೆ ಇನ್ನಷ್ಟು ಖುಷಿಯಾಗಿದೆ. ತಾನು ನಟಿಸಿದ ಸಿನಿಮಾ ಇಷ್ಟೋಂದು ದೊಡ್ಡ ಹಿಟ್ ಆಗಿದೆ ಎಂದು ಹೆಮ್ಮೆ ಪಡುತ್ತಿದ್ದಾರೆ.
'RRR' ಸಿನಿಮಾದಲ್ಲಿ ಒಂದು ಮುಖ್ಯವಾದ ಅತಿಥಿ ಪಾತ್ರದಲ್ಲಿ ನಟಿ ಶ್ರಿಯಾ ನಟಿಸಿದ್ದಾರೆ. ಶ್ರಿಯಾ ತೆರೆ ಮೇಲೆ ಕಾಣಿಸಿಕೊಳ್ಳುವುದು ಕೆಲ ಹೊತ್ತೇ ಆದರು ಅವರದ್ದು ತಕ್ಕ ಮಟ್ಟಿಗೆ ಪ್ರಮುಖ ಪಾತ್ರವೇ. ಅಜಯ್ ದೇವಗನ್ ಪತ್ನಿಯಾಗಿ, ರಾಮ್ ಚರಣ್ ತಾಯಿಯ ಪಾತ್ರದಲ್ಲಿ ಶ್ರಿಯಾ ನಟಿಸಿದ್ದಾರೆ.
''ಸಿನಿಮಾ ಬಿಡುಗಡೆ ಆದಾಗ ನಾನು ಮುಂಬೈನಲ್ಲಿದ್ದೆ. ಅಲ್ಲಿ ಸಿನಿಮಾ ನೋಡಲು ಯತ್ನಿಸಿದೆ ಆದರೆ ನನಗೆ ಟಿಕೆಟ್ ದೊರಕಲಿಲ್ಲ. ಅದು ಬಹಳ ಖುಷಿಕೊಟ್ಟಿತು. ಈಗ ಬೆಂಗಳೂರಿಗೆ ಬಂದಿದ್ದೇನೆ. ಇಲ್ಲೂ ಚಿತ್ರಮಂದಿರಗಳು ಫುಲ್ ಆಗಿವೆ. ಆದರೆ ಈ ವಾರಾಂತ್ಯದಲ್ಲಿ ಇಲ್ಲಿಯೇ ಸಿನಿಮಾ ನೋಡುವ ವಿಶ್ವಾಸದಲ್ಲಿದ್ದೇನೆ'' ಎಂದಿದ್ದಾರೆ ಶ್ರಿಯಾ ಶರನ್.

ಕತೆ, ಪಾತ್ರವರ್ಗ ಕೇಳದೆ ಸಿನಿಮಾಕ್ಕೆ ಸಹಿ ಹಾಕಿದ್ದ ಶ್ರಿಯಾ
ಶ್ರಿಯಾ ಶರನ್ 'RRR' ಸಿನಿಮಾಕ್ಕೆ ಸಹಿ ಮಾಡಿದಾಗ ತಮ್ಮ ಪಾತ್ರದ ಬಗ್ಗೆ ಅವರಿಗೆ ಅಷ್ಟಾಗಿ ಗೊತ್ತಿರಲಿಲ್ಲವಂತೆ. ಇಬ್ಬರು ದೊಡ್ಡ ಸ್ಟಾರ್ಗಳು ಸಿನಿಮಾದಲ್ಲಿದ್ದಾರೆ ಎಂಬುದಷ್ಟೆ ಗೊತ್ತಿತ್ತಂತೆ. ಅಲ್ಲದೆ ತಮ್ಮ ಜೊತೆಯಾಗಿ ಯಾವ ನಟ ನಟಿಸಲಿದ್ದಾರೆ ಎಂಬುದು ಸಹ ಶ್ರೆಯಾಗೆ ಗೊತ್ತಿರಲಿಲ್ಲವಂತೆ. ಕೇವಲ ರಾಜಮೌಳಿ ಸಿನಿಮಾ ಎಂಬ ಕಾರಣಕ್ಕೆ ಕತೆ, ಪಾತ್ರವರ್ಗ ಇತರೆಗಳನ್ನು ಗಮನಿಸಿದೆ ಓಕೆ ಹೇಳಿಬಿಟ್ಟಿದ್ದಾರೆ ಶ್ರಿಯಾ ಶರನ್.

''ರಾಜಮೌಳಿ ಸಿನಿಮಾದ ಯಾವ ಪಾತ್ರವೂ ಕಳಪೆ ಅಲ್ಲ''
''ರಾಜಮೌಳಿ ಸಿನಿಮಾಗಳಲ್ಲಿ ಯಾವ ಪಾತ್ರವೂ ಕಳಪೆ ಆಗಿರುವುದಿಲ್ಲ. ಸಣ್ಣ ಪಾತ್ರವಾದರೂ ಕತೆಯ ಮೇಲೆ ಪ್ರಭಾವ ಬೀರುವ ಪಾತ್ರವೇ ಆಗಿರುತ್ತದೆ. ಹಾಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಸಿನಿಮಾ ಒಪ್ಪಿಕೊಂಡೆ. ರಮಾ ರಾಜಮೌಳಿಯವರ ವಸ್ತ್ರವಿನ್ಯಾಸ, ಮಹೇಂದರ್ ಅವರ ಮೇಕಪ್ ಎಲ್ಲವೂ ಒಟ್ಟಾಗಿ ಅದ್ಭುತವಾಗಿ ತೆರೆಯ ಮೇಲೆ ಪ್ರೆಸೆಂಟ್ ಅಗುವಂತೆ ಮಾಡಲಾಗಿದೆ. ಕೆಲವು ಸಮಯದಲ್ಲಿ ನಾವು ಕ್ಷಣಿಕವಷ್ಟೆ ಮಾಡಿರುತ್ತೇವೆ ಆದರೆ ಪರದೆಯ ಮೇಲೆ ಅದು ಅದ್ಭುತವಾಗಿ ಕಂಡು ಬರುತ್ತದೆ. ರಾಜಮೌಳಿ ಸಿನಿಮಾಗಳಲ್ಲಿ ಸಣ್ಣ ಪಾತ್ರ-ದೊಡ್ಡ ಪಾತ್ರ ಎಂಬುದೆಲ್ಲ ಇರುವುದಿಲ್ಲ. ಎಲ್ಲ ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದ್ದೇ ಇರುತ್ತದೆ'' ಎಂದಿದ್ದಾರೆ ಶ್ರಿಯಾ ಶರನ್.

'ಛತ್ರಪತಿ' ಸಿನಿಮಾದಲ್ಲಿ ರಾಜಮೌಳಿ ಜೊತೆ ಕೆಲಸ
''ಈ ಹಿಂದೆ ನಾನು 'ಛತ್ರಪತಿ' ಸಿನಿಮಾದಲ್ಲಿ ರಾಜಮೌಳಿ ಜೊತೆ ನಟಿಸಿದ್ದೆ. ಆಗಿನಿಂದಲೂ ಮತ್ತೊಮ್ಮೆ ರಾಜಮೌಳಿ ಜೊತೆ ನಟಿಸಲು ಕಾತರಳಾಗಿದ್ದೆ. ಆ ಅವಕಾಶ RRR ಇಂದಾಗಿ ನನಗೆ ದೊರಕಿತು. ನನ್ನ ಪೂರ್ಣ ಪ್ರತಿಭೆಯನ್ನು ಹೊರಗೆ ತರಲು ರಾಜಮೌಳಿಯವರಿಗಷ್ಟೆ ಸಾಧ್ಯ. ನನ್ನಿಂದ ಮಾತ್ರವಲ್ಲ ಎಲ್ಲ ನಟರಿಂದಲೂ ಅದ್ಭುತವಾದ ನಟನೆಯನ್ನು ಅವರು ಹೊರಗೆ ತರುತ್ತಾರೆ. ಮುಂದೆಯೂ ರಾಜಮೌಳಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಕೈಬಿಡುವುದಿಲ್ಲ'' ಎಂದಿದ್ದಾರೆ ಶ್ರಿಯಾ.

'ಕಬ್ಜ' ಸಿನಿಮಾಕ್ಕಾಗಿ ಬೆಂಗಳೂರಿಗೆ ಬಂದ ಶ್ರಿಯಾ
ಅಂದಹಾಗೆ ಶ್ರಿಯಾ ಬೆಂಗಳೂರಿಗೆ ಬಂದಿರುವುದು ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ದಲ್ಲಿ ನಟಿಸಲು. ಉಪೇಂದ್ರ ನಟನೆಯ 'ಕಬ್ಜ' ಸಿನಿಮಾದಲ್ಲಿ ಶ್ರಿಯಾ ಶರನ್ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಮುಖ್ಯ ಅತಿಥಿ ಪಾತ್ರದಲ್ಲಿ ಸುದೀಪ್ ಸಹ ಇದ್ದಾರೆ. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳನ್ನು ಉಪೇಂದ್ರ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.


Click it and Unblock the Notifications











