ಆರನೇ ಬಾರಿ ಸಂಕ್ರಾಂತಿಯಂದು ಯುದ್ಧಕ್ಕೆ ನಿಂತ ಚಿರಂಜೀವಿ-ಬಾಲಕೃಷ್ಣ: ಈ ಬಾರಿ ಗೆಲುವು ಯಾರಿಗೆ?
ತೆಲುಗು ಚಿತ್ರರಂಗ ಒಂದು ರೀತಿ ಕುಟುಂಬ ಉದ್ಯಮವಿದ್ದಂತೆ. ಅಲ್ಲಿ ಕುಟುಂಬಗಳದ್ದೇ ಕಾರುಬಾರು. ಎನ್ಟಿಆರ್ ಕುಟುಂಬ, ಮೆಗಾಸ್ಟಾರ್ ಕುಟುಂಬ, ಅಕ್ಕಿನೇನಿ ಕುಟುಂಬ, ದಗ್ಗುಬಾಟಿ ಕುಟುಂಬ, ಮೋಹನ್ ಬಾಬು ಕುಟುಂಬ ಹೀಗೆ ಹಲವು ಕುಟುಂಬಗಳು ತೆಲುಗು ಚಿತ್ರರಂಗವನ್ನು ದಶಕಗಳಿಂದಲೂ ಆಳುತ್ತಿವೆ.
ಅದರಲ್ಲಿಯೂ ಎನ್ಟಿಆರ್ ಕುಟುಂಬ ಹಾಗೂ ಮೆಗಾ ಫ್ಯಾಮಿಲಿ ನಡುವೆ ದಶಕಗಳಿಂದಲೂ ಸ್ಪರ್ಧೆ-ಪ್ರತಿಸ್ಪರ್ಧೆ ಜೋರಾಗಿಯೇ ನಡೆಯುತ್ತಾ ಬಂದಿದೆ. ಇತ್ತೀಚೆಗೆ ಈ ಕುಟುಂಬಗಳ ಮಧ್ಯೆ ವೈಷಮ್ಯ ಕಡಿಮೆಯಾಗಿದೆ ಆದರೆ ಮೊದಲೆಲ್ಲ ಎನ್ಟಿಆರ್-ಮೆಗಾ ಕುಟುಂಬ ಬದ್ಧ ವೈರಿಗಳಂತೆ ವರ್ತಿಸಿರುವುದುಂಟು.
ಅದರಲ್ಲಿಯೂ ಚಿರಂಜೀವಿ ಹಾಗೂ ಬಾಲಕೃಷ್ಣ ನಡುವಿನ ಬಾಕ್ಸ್ ಆಫೀಸ್ ಫೈಟ್ಗಳು ತೆಲುಗು ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗುವ ಮಟ್ಟಿಗೆ ಜೋರಾಗಿ ನಡೆದಿವೆ. ಅದರಲ್ಲಿಯೂ ಸಂಕ್ರಾಂತಿ ಬಾಕ್ಸ್ ಆಫೀಸ್ ಫೈಟ್ಗಳಿಗೆ ಅದರದ್ದೇ ಆದ ಮಹತ್ವವಿದೆ. ಈ ವರೆಗೆ ಎರಡು ಬಾರಿ ನಾಲಕೃಷ್ಣ ಹಾಗೂ ಚಿರಂಜೀವಿ ಸಂಕ್ರಾಂತಿಯಂದು ಎದುರು ಬದುರಾಗಿದ್ದಾರೆ. ಈಗ ಮೂರನೇ ಬಾರಿ ಎದುರು ಬದುರಾಗಲಿದ್ದಾರೆ. ಈ ಬಾರಿ ಜಯ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸಂಕ್ರಾಂತಿಯಂದು ಚಿರಂಜೀವಿ v/s ಬಾಲಕೃಷ್ಣ
ಸಂಕ್ರಾಂತಿ ಹಬ್ಬ ತೆಲುಗು ಚಿತ್ರರಂಗದ ಪಾಲಿಗೆ ಅತ್ಯಂತ ಮಹತ್ವದ್ದು ಹಲವು ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗುತ್ತವೆ. ಸಂಕ್ರಾಂತಿಗೆ ಬಿಡುಗಡೆ ಆದ ಸಿನಿಮಾಗಳು ಇತಿಹಾಸ ಸೃಷ್ಟಿಸಿದ ಹಲವಾರು ಉದಾಹರಣೆಗಳು ಇವೆ. ಅದೇ ಕಾರಣಕ್ಕೆ ಬಹುತೇಕ ಎಲ್ಲ ತಾರೆಯರು ತಮ್ಮ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಬೇಕೆಂದು ಬಯಸುತ್ತಾರೆ. ಅಂತೆಯೇ ಈ ಬಾರಿಯೂ ಹಲವು ತೆಲುಗು ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗುತ್ತಿದ್ದು, ಅದರಲ್ಲಿಯೂ ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ ವಾಲ್ತೇರು ವೀರಯ್ಯ ಹಾಗೂ ನಂದಮೂರಿ ಬಾಲಕೃಷ್ಣ ಅಭಿನಯದ 'ವೀರನರಸಿಂಹ ರೆಡ್ಡಿ' ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ.

1999 ರಲ್ಲಿ ಎದುರಾಗಿದ್ದ ದಿಗ್ಗಜರು
ಇದಕ್ಕೆ ಮುನ್ನ ಐದು ಬಾರಿ ಚಿರಂಜೀವಿ ಹಾಗೂ ಬಾಲಕೃಷ್ಣ ಸಂಕ್ರಾಂತಿ ಹಬ್ಬದಂದೇ ಪರಸ್ಪರ ಎದುರಾಗಿದ್ದಾರೆ. 1999 ರಲ್ಲಿ ಸಂಕ್ರಾಂತಿ ಹಬ್ಬದಂದು ಬಾಲಕೃಷ್ಣ ನಟನೆಯ 'ಸಮರಸಿಂಹಾ ರೆಡ್ಡಿ' ಹಾಗೂ ಚಿರಂಜೀವಿ ನಟನೆಯ 'ಸ್ನೇಹಂಕೋಸಂ' ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಗೆದ್ದಿದ್ದು 'ಸಮರಸಿಂಹಾ ರೆಡ್ಡಿ'. ರೀಮೇಕ್ ಸಿನಿಮಾ ಆಗಿದ್ದ 'ಸ್ನೇಹಂಕೋಸಂ' ಅಷ್ಟಾಗಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಅದರ ಮರುವರ್ಷ ಮತ್ತೆ ಸಂಕ್ರಾಂತಿಗೆ ಬಾಲಕೃಷ್ಣರ 'ವಂಶೋದ್ಧಾರುಕುಡು' ಹಾಗೂ ಚಿರಂಜೀವಿಯ 'ಅನ್ನಯ್ಯ' ಸಿನಿಮಾ ಬಿಡುಗಡೆ ಆದವು. ಈ ಬಾರಿ ಗೆಲುವು ಚಿರಂಜೀವಿಯದ್ದಾಯಿತು. 'ಅನ್ನಯ್ಯ' ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿತು.

2001 ರಲ್ಲಿ ಚಿರಂಜೀವಿಗೆ ಸೋಲು
ಬಳಿಕ 2001 ರಲ್ಲಿ ಚಿರಂಜೀವಿ ನಟನೆಯ 'ಮೃಗರಾಜು' ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಯಿತು. ಅದೇ ಸಮಯಕ್ಕೆ ಬಾಲಕೃಷ್ಣ ನಟನೆಯ 'ನರಸಿಂಹ ನಾಯ್ಡು' ಸಹ ತೆರೆಗೆ ಬಂತು. ಮೃಗರಾಜು ಸಿನಿಮಾ ಭಿನ್ನವಾಗಿತ್ತಾದರೂ ಫ್ಯಾಕ್ಷನ್ ಕತೆಯುಳ್ಳ 'ನರಸಿಂಹ ನಾಯ್ಡು' ದೊಡ್ಡ ಹಿಟ್ ಆಯ್ತು. 'ನರಸಿಂಹ ನಾಯ್ಡು' ಎದುರು 'ಮೃಗರಾಜು' ಸೋತಿತು. ಆ ಬಳಿಕ 2004 ರಲ್ಲಿ ಚಿರಂಜೀವಿಯ ಬಹುರನಿರೀಕ್ಷಿತ ಸಿನಿಮಾ 'ಅಂಜಿ' ತೆರೆಗೆ ಬಂತು ಅದೇ ದಿನ ಬಾಲಕೃಷ್ಣರ 'ಲಕ್ಷ್ಮಿ ನರಸಿಂಹ' ಬಿಡುಗಡೆಯಾಯ್ತು. ಮತ್ತೆ ಗೆದ್ದಿದ್ದು ಬಾಲಕೃಷ್ಣರ ಪ್ಯಾಕ್ಷನ್ ಕತೆಯುಳ್ಳ ಆಕ್ಷನ್ ಸಿನಿಮಾ, ಆದರೆ ಗುಣಮಟ್ಟದಲ್ಲಿ, ನಿರೂಪಣೆಯಲ್ಲಿ ಭಿನ್ನವಾಗಿದ್ದ 'ಅಂಜಿ' ಸೋತಿತು.

2017 ರಲ್ಲಿ ಗೆಲುವು ಇಬ್ಬರಿಗೂ ಇಲ್ಲ!
2017 ರಲ್ಲಿ ಬಾಲಕೃಷ್ಣ ನಟನೆಯ 'ಗೌತಮಿ ಪುತ್ರಿ ಶಾತಕರ್ಣಿ' ಹೆಸರಿನ ಐತಿಹಾಸಿಕ ಸಿನಿಮಾದಲ್ಲಿ ನಟಿಸಿದರು. ಅದರು ಜನವರಿ 11 ರಂದು ತೆರೆಗೆ ಬಂದಿತು. ಸಿನಿಮಾದಲ್ಲಿ ಕನ್ನಡದ ಶಿವಣ್ಣ ಸಹ ನಟಿಸಿದ್ದರು. ಅದರ ಮರುದಿನ ಅಂದರೆ ಜನವರಿ 12 ರಂದು ಚಿರಂಜೀವಿಯ ಕಮ್ಬ್ಯಾಕ್ ಸಿನಿಮಾ 'ಖೈದಿ 150' ಬಿಡುಗಡೆ ಆಯ್ತು. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟಿನ ಸದ್ದು ಮಾಡಲಿಲ್ಲ. ಈಗ ಮತ್ತೆ ಚಿರಂಜೀವಿಯ 'ವಾಲ್ತೇರು ವೀರಯ್ಯ' ಹಾಗೂ ಬಾಲಕೃಷ್ಣರ 'ವೀರ ಸಿಂಹ ರೆಡ್ಡಿ' ಒಟ್ಟಿಗೆ ಬರುತ್ತಿವೆ. ಬಾಲಕೃಷ್ಣ ಮತ್ತೆ ಪ್ಯಾಕ್ಷನ್ ಕತೆಯೊಂದಿಗೆ ಬಂದಿದ್ದು ಈ ಬಾರಿ ಯಾರಿಗೆ ಗೆಲುವಾಗುತ್ತದೆ ನೋಡಬೇಕಿದೆ.


Click it and Unblock the Notifications











