'ಮಾ' ಚುನಾವಣೆ: ಬೇರೆ ಇಂಡಸ್ಟ್ರಿಯ ಪ್ರಕಾಶ್ ರಾಜ್ ನಮಗೆ ಬೇಡ ಎಂದ ನಟಿ
ತೆಲುಗು ಸಿನಿಮಾ ಕಲಾವಿದರ ಸಂಘದ ಚುನಾವಣೆಯ ಬಿಸಿ ರಂಗೇರಿದೆ. ಸೆಪ್ಟೆಂಬರ್ ತಿಂಗಳಲ್ಲಿ 'ಮೂವಿ ಆರ್ಟಿಸ್ಟ್ ಅಸೋಸಿಯೇಶನ್' ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಸಲ ಭಾರಿ ಪೈಪೋಟಿ ಏರ್ಪಟ್ಟಿದೆ. ನಟ ಪ್ರಕಾಶ್ ರಾಜ್, ಮಂಚು ವಿಷ್ಣು, ಜೀವಿತಾ ರಾಜಶೇಖರ್, ಶಿವಾಜಿ ರಾಜ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಆದ್ರೀಗ, ಪ್ರಕಾಶ್ ರಾಜ್ ಸ್ಪರ್ಧೆಗೆ ತೆಲುಗಿನ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 'ಪ್ರಕಾಶ್ ರಾಜ್ ಕಲಾವಿದನಾಗಿ ನಾವು ಒಪ್ಪುತ್ತೇವೆ, ಆದರೆ ಅಧಿಕಾರ ಬಿಟ್ಟುಕೊಡಲ್ಲ' ಎಂದಿದ್ದಾರೆ. ತೆಲುಗಿನ ಪ್ರಮುಖ ಕಲಾವಿದೆ ಕರಾಟೆ ಕಲ್ಯಾಣಿ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ''ಬೇರೆ ಇಂಡಸ್ಟ್ರಿಯ ಪ್ರಕಾಶ್ ರಾಜ್ ನಮಗೆ ಬೇಡ'' ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಓದಿ...

ಪ್ರಕಾಶ್ ರಾಜ್ ಏಕೆ ಬೇಕು?
'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಶನ್) ಚುನಾವಣೆಗೆ ಸಂಬಂಧಿಸಿದಂತೆ ಟಿವಿ ವಾಹಿನಿಯೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕರಾಟೆ ಕಲ್ಯಾಣಿ, ''ನಾನು ಪ್ರಕಾಶ್ ರಾಜ್ಗೆ ಮತ ಹಾಕಲ್ಲ, ನಮ್ಮ ಇಂಡಸ್ಟ್ರಿಯವರು ಪೈಪೋಟಿ ಮಾಡಲಿ, ಬೇರೆ ಇಂಡಸ್ಟ್ರಿಯ ಬಂದಿರುವ ಪ್ರಕಾಶ್ ರಾಜ್ ಏಕೆ ಬೇಕು, ನಾನು ಅವರಿಗೆ ಬೆಂಬಲಿಸಿಲ್ಲ'' ಎಂದು ವಿರೋಧಿಸಿದ್ದಾರೆ.

ನಟನೆ ಗೌರವಿಸುತ್ತೇವೆ, ಅಧಿಕಾರ ಕೊಡಲ್ಲ
''ಪ್ರಕಾಶ್ ರಾಜ್ ಅದ್ಭುತ ನಟ, ಸಾಕಷ್ಟು ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ. ಅವರ ಕಲೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಅವರ ನಟನೆಯನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡ್ತೇವೆ, ಪ್ರಶಸ್ತಿ ಕೊಟ್ಟು ಗೌರವಿಸುತ್ತೇವೆ. ಆದರೆ, ಅಧಿಕಾರ ಕೊಡಲು ಸಾಧ್ಯವಿಲ್ಲ. ತೆಲುಗಿನ ಬಹಳಷ್ಟು ನಟರು ಇದ್ದಾರೆ'' ಎಂದು ಕರಾಟೆ ಕಲ್ಯಾಣಿ ಖಂಡಿಸಿದ್ದಾರೆ.

ನಮಗೆ ಆ ಕರ್ಮ ಬಂದಿಲ್ಲ
''ತೆಲುಗು ಕಲಾವಿದ ಸಂಘಕ್ಕೆ ಬೇರೆ ಇಂಡಸ್ಟ್ರಿಯಿಂದ ಕರೆದುಕೊಂಡು ಬಂದು ಅಧ್ಯಕ್ಷ ಮಾಡುವ ಕರ್ಮ ನಮಗೆ ಬಂದಿಲ್ಲ. ಇಲ್ಲಿ ತುಂಬಾ ಜನ ಕಲಾವಿದರು ಇದ್ದಾರೆ. ನಮ್ಮವರೇ ಆ ಸ್ಥಾನಕ್ಕೆ ಕೂರಬೇಕು'' ಎಂದು ಹಿರಿಯ ತೆಲುಗು ನಟ ತ್ರಿಪುರನೇನಿ ಚಿಟ್ಟಿ ಬಾಬು ಸಹ ಟಿವಿ ಚರ್ಚೆಯಲ್ಲಿ ಆಗ್ರಹಿಸಿದರು.
Recommended Video

ನಮ್ಮವರು vs ಬೇರೆಯವರು
ಮೂಲತಃ ಕನ್ನಡದವರಾದ ಪ್ರಕಾಶ್ ರಾಜ್ ಬಹುಭಾಷೆಯಲ್ಲಿ ನಟಿಸಿ ಖ್ಯಾತಿ ಗಳಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಮಾ' ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಪ್ರಕಾಶ್ ರಾಜ್ ಬೆಂಬಲಕ್ಕೆ ತೆಲುಗಿನ ಹಲವು ನಟರ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಿರೋಧಿ ವರ್ಗ ''ಪ್ರಕಾಶ್ ರಾಜ್ ನಮ್ಮ ನೆಲದವರಲ್ಲ, ನಮಗೆ ಅವರು ಬೇಡ'' ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.


Click it and Unblock the Notifications











