ತೆಲುಗು ಸಿನಿಮಾಗಳ ಚಿತ್ರೀಕರಣ ಇಂದಿನಿಂದ ಬಂದ್
ತೆಲುಗು ಸಿನಿಮಾಗಳ ಚಿತ್ರೀಕರಣ ಇಂದಿನಿಂದ ಬಂದ್ ಆಗಿದೆ. ಹಲವರ ವಿರೋಧದ ನಡುವೆಯೂ ನಿರ್ಮಾಪಕರ ಗಿಲ್ಡ್ ಹೀಗೊಂದು ನಿರ್ಣಯ ತೆಗೆದುಕೊಂಡಿದೆ.
ತೆಲಗು ಸಿನಿಮಾಗಳ ಪ್ರಗತಿ, ಈಗಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಸಮಾನ ಮನಸ್ಕ ನಿರ್ಮಾಪಕರು ಸೇರಿ ನಿರ್ಮಾಪಕರ ಗಿಲ್ಡ್ ಒಂದನ್ನು ಸ್ಥಾಪಿಸಿಕೊಂಡಿದ್ದು, ಈ ನಿರ್ಮಾಪಕರ ಗಿಲ್ಡ್ ತೆಲುಗು ಸಿನಿಮಾಗಳ ಚಿತ್ರೀಕರಣವನ್ನು ಆಗಸ್ಟ್ ಒಂದರಿಂದ ಬಂದ್ ಮಾಡುವಂತೆ ಪ್ರಕಟಣೆ ಹೊರಡಿಸಿದೆ. ಅಂತೆಯೇ ಇಂದಿನಿಂದ ಎಲ್ಲ ಹೊಸ ತೆಲುಗು ಸಿನಿಮಾಗಳ ಚಿತ್ರೀಕರಣ ಬಂದ್ ಆಗಿದೆ.
ನಿರ್ಮಾಪಕರ ಗಿಲ್ಡ್ನ ಈ ನಿರ್ಣಯಕ್ಕೆ ಹಲವರ ವಿರೋಧವೂ ಇದೆ. ಆದರೆ ತೆಲುಗು ಫಿಲಂ ಚೇಂಬರ್ ಸಹ ನಿರ್ಮಾಪಕರ ಗಿಲ್ಡ್ನ ನಿರ್ಣಯಕ್ಕೆ ಬೆಂಬಲ ನೀಡಿರುವ ಕಾರಣ ಈಗ ಚಾಲ್ತಿಯಲ್ಲಿರುವ ಸಿನಿಮಾಗಳ ಚಿತ್ರೀಕರಣ ಬಂದ್ ಆಗುವ ಜೊತೆಗೆ ಯಾವುದೇ ಹೊಸ ಸಿನಿಮಾಗಳ ಚಿತ್ರೀಕರಣ ಸಹ ಇಂದಿನಿಂದ (ಆಗಸ್ಟ್ 01) ನಡೆಯುವುದಿಲ್ಲ.

ಈ ಬಗ್ಗೆ ನಿನ್ನೆ ಪ್ರೆಸ್ ಮೀಟ್ ನಡೆಸಿದ ನಿರ್ಮಾಪಕ ದಿಲ್ ರಾಜು ಹಾಗೂ ಇತರ ಹಿರಿಯ ನಿರ್ಮಾಪಕರು, ''ತೆಲುಗು ಚಿತ್ರರಂಗ ಈಗ ಅನುಭವಿಸುತ್ತಿರುವ ಸಂಕಷ್ಟ, ಬದಲಾಗುತ್ತಿರುವ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಿ ಪರಿಷ್ಕಾರ ಹುಡುಕಿ ಮುಂದಕ್ಕೆ ಸಾಗಲು ಕಾಲಾವಕಾಶ ಬೇಕಿದ್ದು ಅದೇ ಕಾರಣಕ್ಕೆ ಈ ಚಿತ್ರೀಕರಣ ಸ್ಥಗಿತ ನಿರ್ಣಯವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ'' ಎಂದಿದ್ದಾರೆ.
''ಕೋವಿಡ್ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರದೇ ಇರುವುದು, ಸಿನಿಮಾಗಳ ಬಜೆಟ್ನಲ್ಲಿ ಹೆಚ್ಚಳ, ಒಟಿಟಿ ಪ್ರಾಬಲ್ಯ, ಚಿತ್ರೀಕರಣ ಸಮಯದಲ್ಲಿ ವೇಸ್ಟೇಜ್ ಇನ್ನು ಹಲವು ವಿಷಯಗಳ ಚರ್ಚೆ ಆಗಬೇಕಿದೆ. ಇವು ಚಿತ್ರರಂಗದ ಸಮಸ್ಯೆ, ನಿರ್ಮಾಪಕರ ಸಮಸ್ಯೆ ಹಾಗಾಗಿ ನಾವು ಇವನ್ನೆಲ್ಲ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ'' ಎಂದಿದ್ದಾರೆ ದಿಲ್ ರಾಜು.
ನಿರ್ಮಾಪಕರ ಈ ಚಿತ್ರೀಕರಣ ಬಂದ್ ನಿರ್ಣಯದ ಹಿಂದೆ ಸ್ಟಾರ್ ನಟರ ಸಂಭಾವನೆ ಇಳಿಕೆ ಮುಖ್ಯವಾದ ಒತ್ತಾಯವಾಗಿದೆ ಎನ್ನಲಾಗುತ್ತಿದೆ. ನಟರ ಸಂಭಾವನೆ ಹೆಚ್ಚಳದಿಂದಲೇ ಸಿನಿಮಾಗಳ ಬಜೆಟ್ ಹೆಚ್ಚಾಗುತ್ತಿದ್ದು, ಸಿನಿಮಾಗಳಿಂದ ಬರುತ್ತಿರುವ ಲಾಭದಲ್ಲಿ ತೀವ್ರ ಇಳಿಕೆಯಾಗಿದೆ ಎಂಬುದು ಹಲವು ನಿರ್ಮಾಪಕರ ವಾದ. ಈಗಾಗಲೇ ದಿಲ್ ರಾಜು ನೇತೃತ್ವದಲ್ಲಿ ಸ್ಟಾರ್ ನಟರೊಟ್ಟಿಗೆ ಈ ಬಗ್ಗೆ ಚರ್ಚಿಸಲಾಗಿದ್ದು, ಕೆಲವು ನಟರು ತಮ್ಮ ಸಂಭಾವನೆ ತಗ್ಗಿಸಿಕೊಳ್ಳಲು ಈಗಾಗಲೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.


Click it and Unblock the Notifications











