ಆಗಸ್ಟ್ 1 ರಿಂದ ತೆಲುಗು ಸಿನಿಮಾಗಳ ಚಿತ್ರೀಕರಣ ಬಂದ್!
ತೆಲುಗು ಚಿತ್ರಮಂದಿರ ಕಠಿಣ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಸಾಲು-ಸಾಲು ಸಿನಿಮಾಗಳು ಸೋಲುತ್ತಿವೆ, ಸಿನಿಮಾಗಳು ಹಿಟ್ ಆದರೂ ಹೆಚ್ಚಿನ ಮೊತ್ತ ನಿರ್ಮಾಪಕನ ಕೈ ಸೇರುತ್ತಿಲ್ಲ ಇದು ನಿರ್ಮಾಪಕರ ಚಿಂತೆಗೆ ಕಾರಣವಾಗಿದೆ.
ಸರ್ಕಾರದ ಹೊಸ ನಿಯಮಗಳು, ತೆರಿಗೆ, ಚಿತ್ರಮಂದಿರಗಳು ಕಡಿಮೆಯಾಗುತ್ತಿರುವುದು, ಟಿಕೆಟ್ ದರದಲ್ಲಿ ಭಾರಿ ಇಳಿಕೆ, ಒಟಿಟಿಗಳ ಪ್ರಾಬಲ್ಯ, ಸ್ಟಾರ್ ನಟ-ನಟಿಯರ ಸಂಭಾವನೆಯಲ್ಲಿ ಭಾರಿ ಏರಿಕೆ ಇನ್ನೂ ಹಲವು ಅಂಶಗಳಿಂದಾಗಿ ತೆಲುಗು ನಿರ್ಮಾಪಕರು ಸಂಷಕ್ಟಕ್ಕೆ ಸಿಲುಕಿದ್ದಾರೆ.
ಇದೀಗ ನಿರ್ಮಾಪಕರು ಮುಖ್ಯವಾದ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಇದೇ ಆಗಸ್ಟ್ 1 ರಿಂದ ಎಲ್ಲ ತೆಲುಗು ಸಿನಿಮಾಗಳ ನಿರ್ಮಾಣವನ್ನು ಬಂದ್ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಈ ಬಗ್ಗೆ ನಿರ್ಮಾಪಕರ ಕೌನ್ಸಿಲ್ನ ಕಲ್ಯಾಣ್ ಮಾಧ್ಯಮಗಳೊಟ್ಟಿಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.

ಆಗಸ್ಟ್ 1 ರಿಂದ ತೆಲುಗು ಸಿನಿಮಾ ಚಿತ್ರೀಕರಣ ಬಂದ್
ಸರ್ಕಾರದ ವಿರುದ್ಧ ಪ್ರತಿಭಟನಾರ್ಥವಾಗಿ ಆಗಸ್ಟ್ 1 ರಿಂದ ತೆಲುಗು ಸಿನಿಮಾಗಳ ಚಿತ್ರೀಕರಣ ಬಂದ್ ಮಾಡಲು ನಿರ್ಮಾಪಕರ ಕೌನ್ಸಿಲ್ ನಿರ್ಧಾರ ಮಾಡಿದೆ. ಆದರೆ ಈಗಾಗಲೇ ಸಿನಿಮಾಗಳ ಚಿತ್ರೀಕರಣ ಜಾರಿಯಲ್ಲಿರುವ ಸಿನಿಮಾಗಳಿಗೆ ಈ ಬಂದ್ನಿಂದ ವಿನಾಯಿತಿ ನೀಡಬೇಕೆ ಅಥವಾ ಕೇವಲ ಹೊಸ ಸಿನಿಮಾಗಳ ಚಿತ್ರೀಕರಣ ಪ್ರಾರಂಭ ಮಾಡದಂತೆ ತಡೆಯಬೇಕೆ ಎಂಬ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದಿದ್ದಾರೆ ಕಲ್ಯಾಣ್.

ನಿರ್ಮಾಪಕರದ್ದು ಭಿನ್ನ ಅಭಿಪ್ರಾಯವಿದೆ
ಬಂದ್ ಕುರಿತಂತೆ ಕೆಲವು ನಿರ್ಮಾಪಕರದ್ದು ಭಿನ್ನ ಅಭಿಪ್ರಾಯವಿದೆ. ಹಾಗಾಗಿ ನಿರ್ಮಾಪಕರ ಕೌನ್ಸಿಲ್ ಜುಲೈ 23 ರಂದು ಸಭೆ ನಡೆಸಲು ಮುಂದಾಗಿದ್ದು, ನಿರ್ಮಾಪಕ ದಿಲ್ ರಾಜು, ಜೆಮಿನಿ ಕಿರಣ್, ಪ್ರಸನ್ನ ಕುಮಾರ್, ನೆಟ್ಟಿ ಕುಮಾರ್, ವೆಲೂರಿ ಸುಂದರ ರೆಡ್ಡಿ, ಇನ್ನೂ ಹಲವು ನಿರ್ಮಾಪಕರು ಸಭೆ ಸೇರಿ ಈ ವಿಷಯ ಅಂತಿಮಗೊಳಿಸಲಿದ್ದಾರೆ. ಬಂದ್ ಮಾತ್ರವೇ ಅಲ್ಲದೆ ಸಿನಿಮಾ ರಂಗದ ಉಳಿವಿಗಾಗಿ ಇನ್ನಷ್ಟು ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಒಟಿಟಿ ವಿಷಯವಾಗಿ ತೀರ್ಮಾನ
ಕಳೆದ ಬಾರಿ ನಡೆದ ಸಂಭೆಯಲ್ಲಿ ಒಟಿಟಿ ವಿಷಯವಾಗಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ತೆಲುಗಿನ ಯಾವುದೇ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆದ 50 ದಿನಗಳ ವರೆಗೆ ಒಟಿಟಿಗಳಲ್ಲಿ ಬಿಡುಗಡೆ ಆಗುವಂತಿಲ್ಲ ಎನ್ನಲಾಗಿದೆ. ತೆಲುಗಿನ ಎಲ್ಲ ನಿರ್ಮಾಪಕರು ಸಹ ಇದೇ ಮಾದರಿಯಾಗಿ ಒಟಿಟಿಗಳೊಟ್ಟಿಗೆ ಒಪ್ಪಂದ ಮಾಡಿಕೊಳ್ಳುವಂತೆ ಹೇಳಲಾಗಿದೆ. ಚಿತ್ರಮಂದಿರಗಳಿಂದ ಬರುತ್ತಿರುವ ಲಾಭ ಕ್ಷೀಣವಾಗಿರುವ ಕಾರಣ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಂಭಾವನೆ ವಿಷಯವಾಗಿ ಚರ್ಚೆ
ಸ್ಟಾರ್ ನಟರ ಸಂಭಾವನೆ ವಿಷಯವಾಗಿಯೂ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಿನಿಮಾಗಳ ಬಜೆಟ್ ಇಳಿಸಲು ಸ್ಟಾರ್ ನಟರ ಸಂಭಾವನೆ ಇಳಿಸುವಂತೆ ಒತ್ತಡ ಹೇರಲು ನಿಶ್ಚಯಿಸಲಾಗಿದೆ. ಪವನ್ ಕಲ್ಯಾಣ್, ಮಹೇಶ್ ಬಾಬು ಸೇರಿದಂತೆ ಹಲವರ ಸಂಭಾವನೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸುವ ಕಾರಣದಿಂದ ಚಿತ್ರಮಂದಿರಗಳಿಂದ ನಿರ್ಮಾಪಕರಿಗೆ ಬರುತ್ತಿದ್ದ ಆದಾಯದಲ್ಲಿ ಕನಿಷ್ಟ 20% ಕಡಿಮೆ ಆಗಿದೆ ಎನ್ನಲಾಗುತ್ತಿದೆ. 'RRR', 'ಕೆಜಿಎಫ್ 2 ' ಸಿನಿಮಾಗಳ ಹೊರತಾಗಿ ತೆಲುಗಿನ ಇನ್ಯಾವ ಸಿನಿಮಾವೂ ಹಿಟ್ ಆಗಿಲ್ಲ, ಆದರೂ ನಿರ್ಮಾಪಕರಿಗೆ ಹಣ ಬಂದಿಲ್ಲ ಎನ್ನಲಾಗುತ್ತಿದೆ.


Click it and Unblock the Notifications











