Chalapathi Rao : ಹೃದಯಾಘಾತದಿಂದ ತೆಲುಗಿನ ಖ್ಯಾತ ಪೋಷಕ ನಟ ಚಲಪತಿ ರಾವ್ ನಿಧನ
ಟಾಲಿವುಡ್ನಲ್ಲಿ ಸರಣಿ ಸಾವು ಮುಂದುವರೆದಿದೆ. 2 ದಿನಗಳ ಹಿಂದೆಯಷ್ಟೆ ಹಿರಿಯ ನಟ ಕೈಕಾಲ ಸತ್ಯನಾರಾಯಣ ನಿಧನರಾಗಿದ್ದರು. ಇಂದು(ಡಿಸೆಂಬರ್ 25) ಮತ್ತೊಬ್ಬ ಹಿರಿಯ ಪೋಷಕ ನಟ ಚಲಪತಿ ರಾವ್(78) ಕೊನೆಯುಸಿರೆಳೆದಿದ್ದಾರೆ. ನಟ ತಮ್ಮಾರೆಡ್ಡಿ ಚಲಪತಿ ರಾವ್ ಹೈದರಾಬಾದ್ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಿರಿಯ ನಟ ಚಲಪತಿ ರಾವ್ ಹಠಾತ್ ನಿಧನ ತೆಲುಗು ಚಿತ್ರರಂಗಕ್ಕೆ ದಿಗ್ಭ್ರಮೆ ಮೂಡಿಸಿದೆ. 1944ರಲ್ಲಿ ಕೃಷ್ಣ ಜಿಲ್ಲೆ ಪಾಮರ್ರು ಮಂಡಲದ ಬಲ್ಲಿಪುರದಲ್ಲಿ ಚಲಪತಿ ರಾವ್ ಜನಿಸಿದ್ದರು. ಎನ್ಟಿಆರ್ ಪ್ರೋತ್ಸಾಹದಿಂದ ಚಿತ್ರರಂಗ ಪ್ರವೇಶಿಸಿದ್ದರು. ನಟರಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. 600ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಬಹುತೇಕ ತೆಲುಗಿನ ಎಲ್ಲಾ ಸ್ಟಾರ್ ನಟರ ಜೊತೆಗೂ ತೆರೆಹಂಚಿಕೊಂಡಿದ್ದರು. 1966ರಲ್ಲಿ ಬಂದ 'ಗೂಢಚಾರಿ 116' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು.

'ಕಲಿಯುಗ ಕೃಷ್ಣುಡು', 'ಕಡಪ ರೆಡ್ಡಮ್ಮ', 'ಜಗನ್ನಾಟಕಂ', 'ಪೆಳ್ಲಂಟೆ ನೂರೆಳ್ಳ ಪಂಟ' ಸಿನಿಮಾಗಳನ್ನು ಚಲಪತಿ ರಾವ್ ನಿರ್ಮಿಸಿದ್ದರು. ತೆಲುಗಿನ ಮೂರು ತಲೆಮಾರಿನ ನಟರ ಸಿನಿಮಾಗಳಲ್ಲಿ ಅವರು ನಟಿಸಿದ್ದರು. 'ಯಮಗೋಲ', 'ಯುಗಪುರುಷುಡು', 'ಡ್ರೈವರ್ ರಾಮುಡು', 'ದೊಂಡ ರಾಮುಡು', 'ಸಿಂಹಾದ್ರಿ', 'ಅರುಂಧತಿ', 'ಲೆಜೆಂಡ್' ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದರು. ಇಂದು ಮಧ್ಯಾಹ್ನದವರೆಗೆ ಮನೆಯಲ್ಲಿ ಅಭಿಮಾನಿಗಳ ದರ್ಶನಕ್ಕೆ ಪಾರ್ಥೀವ ಶರೀರ ಇಡಲಾಗುತ್ತದೆ. ಮಧ್ಯಾಹ್ನದ ನಂತರ ಫಿಲ್ಮ್ ನಗರ್ನಲ್ಲಿರುವ ಮಾಹಾಪ್ರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ತೆಲುಗಿನ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಚಲಪತಿ ರಾವ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಹಿರಿಯ ನಟ ಮೂವರು ಮಕ್ಕಳನ್ನು ಅಗಲಿದ್ದಾರೆ. ಮಗಳು ಅಮೆರಿಕಾದಲ್ಲಿದ್ದು ಆಕೆ ಹೈದರಾಬಾದ್ಗೆ ಬಂದು ತಂದೆಯ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಮೇಲೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಪುತ್ರ ರವಿಬಾಬು ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ.


Click it and Unblock the Notifications











