ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ: ಧರಮ್ ತೇಜ್ ಬಗ್ಗೆ ನಟಿ ಲಕ್ಷ್ಮಿ ಮಂಚು ಮನವಿ
ಟಾಲಿವುಡ್ ನಟ, ಮೆಗಾಸ್ಟಾರ್ ಕುಟುಂಬದ ಕುಡಿ ಸಾಯಿ ಧರಮ್ ತೇಜ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದು, ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧರಮ್ ತೇಜ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ನಿನ್ನೆ (ಸೆಪ್ಟಂಬರ್ 10) ತಡರಾತ್ರಿ ಹೈದರಾಬಾದ್ ನ ದುರ್ಗಮ್ ಚೆರುವು ಕೇಬಲ್ ಬ್ರಿಡ್ಜ್ ಬಳಿ ಸ್ಪೋರ್ಟ್ಸ್ ಬೈಕ್ ನಲ್ಲಿ ಬರ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಮೂಲಗಳ ಪ್ರಕಾರ ರಸ್ತೆಯಲ್ಲಿ ಮರಳು ಇದ್ದ ಕಾರಣ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬೈಕ್ ನಿಂದ ಕೆಳಗೆ ಬಿದ್ದ ಧರಮ್ ತೇಜ್ ಗೆ ಬಲವಾದ ಏಟು ಬಿದ್ದಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಸಿಲಾಯಿತು. ಬಳಿಕ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಧರಮ್ ತೇಜ್ ಅಪಘಾತಕ್ಕೆ ನಿಜವಾದ ಕಾರಣವೆಂದು ತರಹೇವಾರಿ ಸುದ್ದಿಗಳು ವೈರಲ್ ಆಗುತ್ತಿವೆ. ಧರಮ್ ತೇಜ್ ಸಿಕ್ಕಾಪಟ್ಟೆ ವೇಗವಾಗಿ ಬೈಕ್ ಚಲಾಯಿಸುತ್ತಿದ್ದರು. ಅಪಘಾತಕ್ಕೆ ಪ್ರಮುಖ ಕಾರಣ ಓವರ್ ಸ್ಪೀಡ್ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಟಾಲಿವುಡ್ ನಟಿ ಲಕ್ಷ್ಮಿ ಮಂಚು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಸಾಯಿ ಧರಮ್ ತೇಜ್ ಅಭಿಮಾನಿಗಳು ಮತ್ತು ಸ್ನೇಹಿತರು ಬೇಸರ ಹೊರಹಾಕುತ್ತಿದ್ದಾರೆ. ಧರಮ್ ತೇಜ್ ಓವರ್ ಸ್ಪೀಡ್ ನಲ್ಲಿ ಇರಲಿಲ್ಲ. ಮತ್ತು ಹೆಲ್ಮೆಟ್ ಧರಿಸಿದ್ದರು ಎಂದು ಹೇಳುತ್ತಿದ್ದಾರೆ. ಇದೀಗ ನಟಿ ಲಕ್ಷ್ಮಿ ಮಂಚು ಸಹ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ. ತನ್ನ ಟ್ವೀಟ್ ನಲ್ಲಿ ಧರಮ್ ತೇಜ್ ವೇಗವಾಗಿ ಬೈಕ್ ಚಲಾಯಿಸುತ್ತಿರಲಿಲ್ಲ ಮತ್ತು ಜವಾಬ್ದಾರಿಯುತ ಪ್ರಜೆ ಎಂದು ಹೇಳಿದ್ದಾರೆ.
"ತೇಜ್ ನನಗೆ ತಿಳಿದಿರುವ ಹಾಗೆ ಅತ್ಯಂತ ಜವಾಬ್ದಾರಿಯುತ ಪ್ರಜೆಗಳಲ್ಲಿ ಒಬ್ಬರು. ಅವರು ಯಾವುದೇ ಕ್ಷಣದಲ್ಲಿ ವೇಗವಾಗಿ ಬೈಕ್ ಚಲಾಯಿಸುವುದಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತು. ರಸ್ತಯಲ್ಲಿ ಮರಳು ಇದ್ದ ಕಾರಣ ಅಪಘಾತಕ್ಕೆ ಕಾರಣವಾಗಿದೆ. ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ನಿಲ್ಲಿಸುವಂತೆ ವಿನಂತಿ ಮಾಡಿಕೊಳ್ಳುತ್ತೇನೆ. ಸದ್ಯ ಧರಮ್ ತೇಜ್ ಚೇತರಿಸಿಕೊಳ್ಳುತ್ತಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಇರಲಿ, ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ" ಎಂದು ಹೇಳಿದ್ದಾರೆ.
ಧರಮ್ ತೇಜ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಪ್ರಾರ್ಥಿಸುತ್ತಿದ್ದಾರೆ. ಟ್ವೀಟ್ ಮಾಡಿ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಟಾಲಿವುಡ್ ನಟ ಜೂ.ಎನ್ ಟಿ ಆರ್ ಟ್ವೀಟ್ ಮಾಡಿ, ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.
ಇಂದು ಬೆಳಗ್ಗೆ ಅಪೋಲೋ ಆಸ್ಪತ್ರೆ ಹೆಲ್ತ್ ಬುಲೇಟಿನ್ ಬಿಡುಗಡೆ ಮಾಡಿದ್ದು, "ಸಾಯಿ ಧರಮ್ ತೇಜ್ ಅವರ ಸ್ಥಿತಿ ಸ್ಥಿರವಾಗಿದೆ. ಎಲ್ಲಾ ಪ್ರಮುಖ ಆರ್ಗನ್ ಗಳು ಕೆಲಸ ಮಾಡುತ್ತಿವೆ. ಜೀವಕ್ಕೆ ಯಾವುದೇ ಅಪಾಯವಿಲ್ಲ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನ ಬಿಡುಗಡೆ ಮಾಡುತ್ತೇೆವೆ" ಎಂದು ಹೇಳಿದೆ.
ಈಗಾಗಲೇ ಮೆಗಾ ಕುಟುಂಬದ ಎಲ್ಲರೂ ಆಸ್ಪತ್ರೆಗೆ ಭೇಟಿ ನೀಡಿ ಧರಮ್ ತೇಜ್ ಆರೋಗ್ಯ ವಿಚಾರಿಸಿದ್ದಾರೆ. ಪವನ್ ಕಲ್ಯಾಣ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಎಲ್ಲರೂ ಆಸ್ಪತ್ರೆಗೆ ದೌಡಾಯಿಸಿದ್ದರು. ಇಂದು ಮಧ್ಯಾಹ್ನ ಮತ್ತೆ ಚಿರಂಜೀವಿ ಮತ್ತು ಪತ್ನಿ ಸುರೇಖ ಇಬ್ಬರು ಆಸ್ಪತ್ರೆಗೆ ದಾವಿಸಿದ್ದಾರೆ.
ನಿನ್ನೆ (ಸೆಪ್ಟಂಬರ್ 10) ಈ ಬಗ್ಗೆ ಟ್ವೀಟ್ ಮಾಡಿದ್ದ ನಟ ಚಿರಂಜೀವಿ, ""ಕೆಲವು ಗಂಟೆಗಳ ಹಿಂದೆ ಸಾಯಿ ಧರಮ್ ತೇಜ್ ಅಪಘಾತಕ್ಕೀಡಾಗಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿವೆ. ಅಭಿಮಾನಿಗಳು ಮತ್ತು ಸ್ನೇಹಿತರು ಯಾವುದೇ ಆತಂಕ ಪಡಬೇಕಾಗಿಲ್ಲ. ಸಾಯಿ ಧರಮ್ ತೇಜ್ ಗೆ ನುರಿತ ವೈದ್ಯರು ತಂಡ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಕೆಲವೇ ದಿನಗಳಲ್ಲಿ ವಾಪಸ್ ಆಗಲಿದ್ದಾರೆ" ಎಂದು ಹೇಳಿದ್ದರು.
ಸಾಯಿ ಧರಮ್ ತೇಜ್ ಅವರಿಗೆ ಬೈಕ್ ಕ್ರೇಜ್. ನಟ ಪವನ್ ಕಲ್ಯಾಣ್ ಅವರಿಗೆ ಅವೆಂಜರ್ ಬೈಕನ್ನು ಗಿಫ್ಟ್ ಆಗಿ ನೀಡಿದ್ದರು. ಧರಮ್ ತೇಜ್ ಅವರ ತಾಯಿ ಹಾರ್ಲೆ ಡೇವಿಡ್ಸನ್ ಬೈಕ್ ಗಿಫ್ಟ್ ನೀಡಿದ್ದರು. ಒಟ್ಟು ಅವರ ಗ್ಯಾರೇಜ್ನಲ್ಲಿ 4 ಸ್ಪೋರ್ಟ್ಸ್ ಬೈಕ್ ಇದ್ದವು ಎಂಬ ಮಾಹಿತಿ ಲಭ್ಯವಾಗಿದೆ.


Click it and Unblock the Notifications











