"ಫ್ರೆಂಡ್ಶಿಪ್ ಬೇರೆ.. ಪಾಲಿಟಿಕ್ಸ್ ಬೇರೆ": ಪವನ್ ಕಲ್ಯಾಣ್ಗೆ ಸ್ನೇಹಿತನ ಸವಾಲ್?
ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ರೆ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಎದುರು ಚುನಾವಣೆ ಸ್ಪರ್ಧೆಗೆ ಸಿದ್ಧ ಎಂದು ನಟ ಆಲಿ, ವೈಸಿಪಿ ಮುಖ್ಯಸ್ಥ ಆಲಿ ಹೇಳಿದ್ದಾರೆ. ತಿರುಪತಿ ಜಿಲ್ಲೆಯ ನಗರಿಯ ಕೊಂಡಗಟ್ಟು ಸಂಕ್ರಾಂತಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಚಿವೆ ರೋಜಾ ಜೊತೆ ನಟ ಆಲಿ ಭಾಗಿ ಆಗಿದ್ದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ನಟ ಪವನ್ ಕಲ್ಯಾಣ್ ಹಾಗೂ ಹಾಸ್ಯ ನಟಿ ಆಲಿ ಆತ್ಮೀಯ ಸ್ನೇಹಿತರು. ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದರೆ ರಾಜಕೀಯ ಅಂತ ಬಂದಾಗ ಇಬ್ಬರು ವಿರೋಧಿಗಳು ಎನ್ನುವಂತಾಗಿದೆ. ಆಂಧ್ರದಲ್ಲಿ ಆಡಳಿತ ಪಕ್ಷವಾದ ವೈಸಿಪಿ ಹಾಗೂ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಕಗಳ ನಡುವೆ ಭಾರೀ ಪೈಪೋಟಿ ಇದೆ. ಎರಡು ಪಕ್ಷಗಳ ನಾಯಕರ ನಡುವೆ ಶೀತಲ ಸಮರ ಮುಂದುವರೆದಿದೆ. ಜಗನ್ ಸರ್ಕಾರದ ವಿರುದ್ಧ ಪವನ್ ಪದೇ ಪದೇ ಕೆಂಡಕಾರುತ್ತಲೇ ಇರುತ್ತಾರೆ. ಇನ್ನು ವೈಸಿಪಿ ಮುಖಂಡರು ಕೂಡ ಪವನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ.
ಆಂಧ್ರದಲ್ಲಿ ಮುಂದಿನ ಚುನಾವಣೆ ವೈಸಿಪಿ ವರ್ಸಸ್ ಜನಸೇನಾ ಎನ್ನುವಂತಾಗಿದೆ. ಹಾಸ್ಯ ನಟ ಆಲಿ ವೈಸಿಪಿ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ವೈಸಿಪಿ ಸರ್ಕಾರದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ಸಲಹೆಗಾರರಾಗಿ ಅಲಿ ಅವರನ್ನು ನೇಮಿಸಲಾಗಿದೆ.

ಪವನ್ ವಿರುದ್ಧ ಸ್ಪರ್ಧೆಗೆ ಸಿದ್ಧ
ಆಂಧ್ರದ ಯಾವುದೇ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ನಟ ಆಲಿ ತಿಳಿಸಿದ್ದಾರೆ. "ಸಿಎಂ ಜಗನ್ ಆದೇಶಿಸಿದರೆ ಪವನ್ ಕಲ್ಯಾಣ್ ಎದುರು ಕೂಡ ಸ್ಪರ್ಧೆಗೆ ಸಿದ್ಧ" ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮ್ಮ ಮುಖ್ಯಮಂತ್ರಿ ಇಟ್ಟಿರುವ ಗುರಿಯನ್ನು ಖಂಡಿತ ಸಾಧಿಸುತ್ತೇವೆ. 175 ವಿಧಾನ ಸಭೆ ಸ್ಥಾನಗಳಲ್ಲಿ ವೈಸಿಪಿ ಪಕ್ಷ ಗೆಲ್ಲುವ ವಿಶ್ವಾಸ ಇದೆ"

ಎಲ್ಲಿ ಬೇಕಾದರೂ ಸ್ಪರ್ಧಿಸುತ್ತೀನಿ
"ಸ್ನೇಹ ಬೇರೆ, ರಾಜಕೀಯ ಬೇರೆ. ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಹಾಗಾಗಿ ಪಕ್ಷ ಆದೇಶಕ್ಕೆ ಅನುಗುಣವಾಗಿ ಯಾವುದೇ ಕ್ಷೇತ್ರದಿಂದ ನಾನು ಸ್ಪರ್ಧಿಸಲು ಸಿದ್ಧ" ಎಂದು ಆಲಿ ಹೇಳಿದ್ದಾರೆ. 2019ರ ಚುನಾವಣೆಗೂ ಮುನ್ನ ಆಲಿ ಟಿಟಿಪಿ ಪಕ್ಷ ಬಿಟ್ಟು ವೈಸಿಪಿ ಪಕ್ಷ ಸೇರಿದ್ದರು. ಕಳೆದ ಅಕ್ಟೋಬರ್ನಲ್ಲಿ ವೈಸಿಪಿ ಸರ್ಕಾರದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಇನ್ನು 2 ವರ್ಷ ಈ ಜವಾಬ್ದಾರಿ ನಿಭಾಯಿಸಲಿದ್ದಾರೆ.

ರೋಜಾ ಫೈರ್ ಬ್ರ್ಯಾಂಡ್
ಇತ್ತೀಚಿಗೆ ವೈಸಿಪಿ ಪಕ್ಷದ ಸಚಿವೆ, ನಟಿ ರೋಜಾ ವಿರುದ್ಧ ಜನಸೇನಾನಿ ಪವನ್ ಕಲ್ಯಾಣ್ ಕೆಂಡಕಾರಿದ್ದರು. ರೋಜಾ ಅವರ ಹೇಳಿಕೆಗೆ ಕೌಂಟರ್ ಕೊಟ್ಟಿದ್ದರು. ಡೈಮಂಡ್ ರಾಣಿ ರೋಜಾ ಎಂದಿದ್ದರು. ಅದಕ್ಕೆ ರೋಜಾ ಕೂಡ ತಿರುಗೇಟು ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಲಿ, "ರೋಜಾ ಫೈರ್ ಬ್ರ್ಯಾಂಡ್. ಆಕೆ ಗಟ್ಟಿಗಿತ್ತು. ಮೆಗಾ ಸ್ಟಾರ್ ಕುಟುಂಬದ ಜೊತೆ ಆಕೆಗೆ ಉತ್ತಮ ಒಡನಾಟ ಇದೆ. ಇನ್ನು ರಾಜಕೀಯರಂಗದಲ್ಲಿ ಟೀಕೆ, ವಿಮರ್ಶೆ ಸಹಜ. ರೋಜಾ ಅವರನ್ನು ಡೈಮಂಡ್ ರಾಣಿ ಜೊತೆ ಹೋಲಿಸುವುದು ಅಂದರೆ ಬಹಳ ಬೆಲೆಬಾಳುವುದರ ಜೊತೆ ಹೋಲಿಸಿದಂತೆ ಅಲ್ಲವೇ" ಎಂದಿದ್ದಾರೆ.
ಈ ಹಿಂದೆ ಆಲಿ ವೈಸಿಪಿ ಪಕ್ಷಕ್ಕೆ ಸೇರಿದ ಬಗ್ಗೆ ಪವನ್ ಕಲ್ಯಾಣ್ಗೆ ಪ್ರಶ್ನೆ ಎದುರಾಗಿತ್ತು. ಆಗ ಪವನ್, "ಅದು ಆಲಿ ಆಯ್ಕೆ. ಅವರಿಗೆ ಟಿಡಿಪಿ ಪಕ್ಷ ಇಷ್ಟವಿಲ್ಲದೇ, ವೈಸಿಪಿಗೆ ಹೋಗಿರಬಹುದು. ಇಲ್ಲಿ ಎಲ್ಲರಗೂ ಆಯ್ಕೆಯ ಅವಕಾಶ ಇದೆ" ಎಂದಿದ್ದರು. ಮತ್ತೊಂದು ಭಾಷಣದಲ್ಲಿ ಆಲಿ ನಾವು ಅಷ್ಟೆಲ್ಲಾ ಸಹಾಯ ಮಾಡಿದರು, ಅದನ್ನು ನೆನಪಿಸಿಕೊಳ್ಳಲಿಲ್ಲ. ಸ್ನೇಹ ಮರೆತರು ಎಂದು ಹೇಳಿದ್ದರು. ಇದಕ್ಕೆ ವಿಡಿಯೋ ಮಾಡಿ ತಿರುಗೇಟು ನೀಡಿದ್ದ ಆಲಿ "ನೀವು ನನಗೆ ಏನು ಸಹಾಯ ಮಾಡಿದ್ರಿ ಹೇಳಿ? ನನಗೆ ಹಣದ ಸಹಾಯ ಮಾಡಿದ್ದೀರಾ? ಅಥವಾ ಸಿನಿಮಾ ಇಲ್ಲದೇ ಮನೆಯಲ್ಲಿ ಕೂತಾಗ ಕರೆದು ಅವಕಾಶ ಕೊಟ್ಟಿದ್ದೀರಾ? ಸರ್ ನೀವು ಇಂಡಸ್ಟ್ರಿಗೆ ಬರುವುದಕ್ಕೂ ಮೊದಲೇ ನಾನು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದೆ. ನಾನು ಯಾರ ಬಳಿ ಕೂಡ ಹೋಗಿ ಸಹಾಯ ಕೇಳಲಿಲ್ಲ. ನೀವು ನಿಮ್ಮ ಅಣ್ಣನ ಹಾದಿಯಲ್ಲಿ ಬಂದವರು. ನಾನು ನನ್ನದೇ ಹಾದಿಯಲ್ಲಿ ಬಂದವನು" ಎಂದು ಆಲಿ ತಿರುಗೇಟು ನೀಡಿದ್ದರು.


Click it and Unblock the Notifications











