ಹುಟ್ಟೂರಿನ ಸಹಾಯಕ್ಕೆ ನಿಂತ 'ಪುಷ್ಪ' ಸಿನಿಮಾದ ನಿರ್ದೇಶಕ: ಸುಕುಮಾರ್ ಕೆಲಸಕ್ಕೆ ಭಾರಿ ಮೆಚ್ಚಿಗೆ
ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಾಥ್ ನೀಡಿರುವ ಸುಕುಮಾರ್ ತನ್ನ ಹಳ್ಳಿಯ ಶಾಲೆಯೊಂದರ ಕಟ್ಟಡ ನಿರ್ಮಾಣಕ್ಕೆ ಹಣದ ಸಹಾಯ ಮಾಡಿದ್ದಾರೆ. ಸುಕುಮಾರ್ ಈ ಕೆಲಸಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಂದಹಾಗೆ ಹಳ್ಳಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಈಗಾಗಲೇ ಅನೇಕರು ಪಣ ತೊಟ್ಟಿದ್ದಾರೆ. ಕರ್ನಾಟಕದಲ್ಲೂ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಅಳಿವಿನ ಅಂಚಿನಲ್ಲಿರುವ ಕನ್ನಡ ಶಾಲೆಯಗಳನ್ನು ಉಳಿಸಿಕೊಳ್ಳಲು ಅನೇಕ ಕಲಾವಿದರು ಮುಂದಾಗಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್, ದರ್ಶನ್ ಅಭಿಮಾನಿ ಬಳಗ ಸೇರಿದಂತೆ ಅನೇಕರು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಿಸುತ್ತಿದ್ದಾರೆ. ಇನ್ನು ನಿರ್ದೇಶಕ ರಿಷಬ್ ಶೆಟ್ಟಿ ಸಹ ತನ್ನೂರಿನ ಶಾಲೆಗೆ ನೆರವಾಗಿದ್ದರು.
ಹಣದ ಸಹಾಯದ ಜೊತೆಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಅಭಿಯಾನ ಮಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿನಿ ಮಂದಿ ಮುಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ತಾನು ಹುಟ್ಟಿ ಬೆಳೆದ ಊರನ್ನು ತುಂಬಾ ಪ್ರೀತಿಸುವ ನಿರ್ದೇಶಕ ಸುಕುಮಾರ್ ತನ್ನೂರಿಗಾಗಿ ಏನು ಬೇಕಾದರು ಮಾಡಲು ಸಿದ್ಧರಿದ್ದಾರೆ. ಮುಂದೆ ಓದಿ..

ತನ್ನೂರಿನ ಶಾಲೆಗೆ 18 ಲಕ್ಷ ರೂ. ನೀಡಿದ ಸುಕುಮಾರ್
ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ನಿರ್ದೇಶಕ ಸುಕುಮಾರ್ ತಾನು ಓದಿದ ಶಾಲೆಗಾಗಿ ಬರೋಬ್ಬರಿ 18 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಸುಕುಮಾರನ್ ಎರಡು ದಶಕಗಳ ಹಿಂದೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಮಟ್ಟಪರ್ರು ಎನ್ನುವ ಸರ್ಕಾರಿ ಹಳ್ಳಿ ಶಾಲೆಯಲ್ಲಿ ಓದಿದ್ದರು. ಇದೀಗ ಅದೇ ಶಾಲೆಗೆ ಎರಡು ಕ್ಲಾಸ್ ರೂಮ್ ಗಳನ್ನು ನಿರ್ಮಿಸಿಕೊಡುವ ಮೂಲಕ ಮಹತ್ವದ ಕೆಲಸ ಮಾಡಿದ್ದಾರೆ.

ಕ್ಲಾಸ್ ರೂಮ್ ಉದ್ಘಾಟನೆ ಮಾಡಿದ ನಿರ್ದೇಶಕರು
ತಾನು ಹುಟ್ಟಿಬೆಳೆದ ಊರಿನ ಸಹಾಯಕ್ಕೆ ಮುಂದಾಗಿರುವ ನಿರ್ದೇಶಕರು ತಾನು ಓದಿದ ಶಾಲೆಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಮಟ್ಟಪರ್ರು ಸುಕುಮಾರ್ ಅವರು ಹುಟ್ಟಿಬೆಳೆದ ಊರು. ತಾನು ಓದಿದ ಶಾಲೆಯ ಸಹಾಯಕ್ಕೆ ಧಾವಿಸಿರುವುದು ಆ ಊರಿನ ಜನರಿಗೆ ಸಂತಸ ಮೂಡಿಸಿದೆ. ಈ ಬಗ್ಗೆ ಜನಸೇನಾ ಶಾಸಕ ವರಪ್ರಸಾದ್ ಮಾತನಾಡಿ, "ನಿರ್ದೇಶಕ ಸುಕುಮಾರನ್ ಮತ್ತು ನಾನು ಮಟ್ಟಪರ್ರು ಸರ್ಕಾರಿ ಶಾಲೆಯ ಎರಡು ತರಗತಿಗಳನ್ನು ಉದ್ಘಾಟನೆ ಮಾಡಿದೆವು" ಎಂದು ಹೇಳಿದ್ದಾರೆ.

ಸುಕುಮಾರ್ ನನ್ನು ಹಾಡಿ ಹೊಗಳಿದ ಶಾಸಕ
ನಿರ್ದೇಶಕ ಸುಕುಮಾರ್ ಬಗ್ಗೆ ಮಾತನಾಡಿದ ಶಾಸಕ, "ತಾನು ಓದಿದ ಶಾಲೆಗೆ ಸುಕುಮಾರ್ ಹಣದ ಸಹಾಯ ಮಾಡಿದ್ದಾರೆ. ಒಂದು ಡಿಜಿಟಲ್ ತರಗತಿಯಾಗಿದೆ. ಯಾವ ವ್ಯಕ್ತಿ ತನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೋ ಆತ ತನ್ನ ಹಳ್ಳಿಯನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾನೆ" ಎಂದು ಹೇಳಿದ್ದಾರೆ.

ತಂದೆ-ತಾಯಿಗೆ ತುಂಬಾ ಗೌರವ ಕೊಡುವ ವ್ಯಕ್ತಿ
ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸುಕುಮಾರನ್ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಹೇಳಿದ್ದಾರೆ. "ಅವರು ತನ್ನ ತಾಯಿ ಮತ್ತು ತಂದೆಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಎತ್ತರಕ್ಕೆ ಬೆಳೆದ ಮನುಷ್ಯರು ತಾವು ನಡೆದು ಬಂದ ಹಾದಿಯನ್ನು ಮರೆಯುತ್ತಾರೆ. ಸಿಟಿಯಲ್ಲಿ ನೆಲೆಸಿದ ತಕ್ಷಣ ತಮ್ಮ ಕುಟುಂಬವನ್ನು ಮರೆಯುತ್ತಾರೆ. ಆದರೆ ಸುಕುಮಾರ್ ಹಾಗಲ್ಲ" ಎಂದು ನಿರ್ದೇಶಕರನ್ನು ಹಾಡಿ ಹೊಗಳಿದ್ದಾರೆ.

ಊರಿಗಾಗಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಿರುವ ಸುಕುಮಾರ್
ಸುಕುಮಾರನ್ ತನ್ನ ಊರಿಗಾಗಿ ಸಹಾಯ ಹಸ್ತಚಾಚುತ್ತಿರುವುದು ಇದೇ ಮೊದಲಲ್ಲ. ಕೊರೊನಾ ವೈರಸ್ 2ನೇ ಅಲೆಯ ಸಮಯದಲ್ಲಿ ಆಕ್ಸಿಜನ್ ಗಾಗಿ ಪರದಾಡುತ್ತಿದ್ದ ಸೋಂಕಿತನ್ನು ನೋಡಿ ಮನನೊಂದ ಸುಕುಮಾರನ್ ತನ್ನ ಊರಿನಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲು 45 ಲಕ್ಷ ರೂ. ಗಳನ್ನು ನೀಡಿದ್ದಾರೆ. ಈ ಬಗ್ಗೆಯೂ ಶಾಸಕರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಗಣಿತ ಉಪನ್ಯಾಸಕರಾಗಿದ್ದ ಸುಕುಮಾರ್
ಅಂದಹಾಗೆ ಸುಕುಮಾರನ್ ನಿರ್ದೇಶಕರಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲು ಗಣಿತ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಬಳಿಕವೂ ಸುಕುಮಾರ್ ರಾತ್ರಿ ಉಪನ್ಯಾಸ ಮಾಡುತ್ತಿದ್ದರು. ಆರ್ಯ ಸಿನಿಮಾದಿಂದ ನಿರ್ದೇಶಕರಾಗಿ ತೆಲುಗು ಸಿನಿಮಾರಂಗದಲ್ಲಿ ಸಕ್ರೀಯಲಾಗಿರುವ ಸುಕುಮಾರ್ ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡರು.

ಸೂಪರ್ ಹಿಟ್ ಸಿನಿಮಾಗಳ ಸರದಾರ
'ಆರ್ಯ', 'ಆರ್ಯ2', '100% ಲವ್', 'ನೇನೊಕ್ಕಡಿನೇ', 'ನಾನ್ನಕು ಪ್ರೇಮತೋ' ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಸುಕುಮಾರ್ ಬಹುನಿರೀಕ್ಷೆಯ 'ಪುಷ್ಪ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆಯಾಗುತ್ತಿದ್ದು, ಮೊದಲ ಭಾಗ ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್ಮಸ್ ಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











