ತೆಲುಗಿನ 'ವೀರ ಸಿಂಹ ರೆಡ್ಡಿ' ವೇದಿಕೆಯಲ್ಲಿ ದುನಿಯಾ ವಿಜಯ್ ಮಾತು
ಕನ್ನಡದ ನಟ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಪರಭಾಷೆ ಸಿನಿಮಾದಲ್ಲಿ ನಟಿಸಿದ್ದು, ಕೆಲವೆ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ನಟನೆಯ 'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಉಂಗೋಲು ನಲ್ಲಿ ನಿನ್ನೆ (ಜನವರಿ 06) ರಂದು ನಡೆದಿದ್ದು, ವೇದಿಕೆಯಲ್ಲಿ ದುನಿಯಾ ವಿಜಯ್ ಮಾತನಾಡಿದರು.
ತೆಲುಗಿನಲ್ಲಿಯೇ ಮಾತು ಪ್ರಾರಂಭಿಸಿದ ನಟ ದುನಿಯಾ ವಿಜಯ್, ಕನ್ನಡಿಗರ ಪರವಾಗಿ ಆಂಧ್ರ ಸಿನಿ ಪ್ರೇಕ್ಷಕರಿಗೆ, ಬಾಲಯ್ಯ ಅಭಿಮಾನಿಗಳಿಗೆ ಧನ್ಯವಾದ ಸಹ ಹೇಳಿದರು. ವೇದಿಕೆ ಮೇಲೆ ದುನಿಯಾ ವಿಜಯ್ ಆಡಿದ ಮಾತುಗಳು ಇಂತಿವೆ.
''ಜೈ ಬಾಲಯ್ಯ. ಜೈ ಬಾಲಯ್ಯ'' ಎನ್ನುತ್ತಾ ಮಾತು ಆರಂಭಿಸಿದ ನಟ ದುನಿಯಾ ವಿಜಯ್, ''ಎಲ್ಲರಿಗೂ ನಮಸ್ಕಾರ, ಈ ದಿನ ನನಗೆ ಸಿಕ್ಕಿರುವ ಈ ಸುವರ್ಣ ಅವಕಾಶಕ್ಕೆ ನಿರ್ದೇಶಕ ಗೋಪಿಚಂದ್ ಮೇಲಿನೇನಿ, ಮೈತ್ರಿ ಮೂವಿ ಮೇಕರ್ಸ್ ಹಾಗೂ ನಟ ಬಾಲಕೃಷ್ಣ ಅವರುಗಳೇ ಕಾರಣ'' ಎಂದು ದುನಿಯಾ ವಿಜಯ್. ಬಳೀಕ ವೇದಿಕೆ ಮೇಲೆ ಮಾತನಾಡಲು ತುಸು ಹಿಂಜರಿದು, ನಿರೂಪಕಿಯನ್ನು, ನೀವು ಏನಾದರೂ ಕೇಳಿದರೆ ಅದಕ್ಕೆ ಉತ್ತರ ನೀಡುತ್ತೇನೆ ಎಂದರು.

ಸಿಂಹದ ಮುಂದೆ ನಟಿಸುವುದು ಸುಲಭವಾಗಿರಲಿಲ್ಲ: ವಿಜಿ
ಮೊದಲ ಬಾರಿಗೆ ಬಾಲಕೃಷ್ಣ ಜೊತೆಗೆ ನಟಿಸಿದ ಅನುಭವ ಹೇಗಿತ್ತು ಎಂದು ನಿರೂಪಕಿ ಕೇಳಿದರು. ಅದಕ್ಕೆ ಉತ್ತರಿಸಿದ ನಟ ದುನಿಯಾ ವಿಜಯ್, ''ಸಿಂಹದ ಮುಂದೆ ನಟಿಸುವುದು ಬಹಳ ಕಷ್ಟ. ಅದಕ್ಕೆ ಬಹಳ ಧೈರ್ಯ ಬೇಕು. ನಾನು ಪ್ರತಿದಿನ ಪ್ರಾರ್ಥನೆ ಮಾಡಿಕೊಂಡು ಸೆಟ್ಗೆ ಬರುತ್ತಿದ್ದೆ. ಬರ-ಬರುತ್ತಾ ಬಾಲಯ್ಯ ಅವರೊಟ್ಟಿಗೆ ಕನೆಕ್ಟ್ ಆದೆ. ಆ ನಂತರ ಸುಲಭವಾಯಿತು'' ಎಂದಿದ್ದಾರೆ ದುನಿಯಾ ವಿಜಯ್.

ಚಿತ್ರಮಂದಿರದಲ್ಲಿ ಅಬ್ಬರಿಸಲಿದೆ ಸಿಂಹ: ದುನಿಯಾ ವಿಜಿ
''ಈ ಸಂಕ್ರಾಂತಿ ಹಬ್ಬಕ್ಕೆ ಉಗ್ರ ನರಸಿಂಹ, ಶಾಂತಿ ಹಾಗೂ ಉಗ್ರ ಎರಡೂ ರೂಪದಲ್ಲಿ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದ್ದಾನೆ. ಪ್ರೇಕ್ಷಕರು ಶಾಂತ ರೀತಿಯಲ್ಲಿ ನೋಡಿದರೆ ಶಾಂತ ರೀತಿಯಲ್ಲಿ ಕಾಣುತ್ತಾರೆ. ಉಗ್ರವಾಗಿ ನೋಡಲು ಬಯಸಿದರೆ ಉಗ್ರರೂಪವನ್ನು ತೋರಿಸಲಿದ್ದಾರೆ. ಅದೇ ನಮ್ಮ ಸಮರ ಸಿಂಹಾ ರೆಡ್ಡಿಯ ವಿಶೇಷತೆ'' ಎಂದು ಬಾಲಕೃಷ್ಣ ಅವರನ್ನು ಹೊಗಳಿದ್ದಾರೆ ನಟ ದುನಿಯಾ ವಿಜಯ್.

ಕನ್ನಡದಲ್ಲಿ ಮಾತನಾಡಿದ ದುನಿಯಾ ವಿಜಿ
''ಎಲ್ಲ ರೀತಿಯ ಜನರಿಗೆ ಎಂಟರ್ಟೈನ್ಮೆಂಟ್ ನೀಡುವ ರೀತಿಯಲ್ಲಿ. ಜೊತೆಗೆ ಭಾವುಕ ಸನ್ನಿವೇಶಗಳನ್ನು ಸಹ ಬೆರೆಸಿ ನಿರ್ಮಿಸಲಾಗಿದೆ. ಈ ಸಿನಿಮಾ ಈಗಾಗಲೇ ಸೂಪರ್-ಡೂಪರ್ ಹಿಟ್ ಆಗಿದೆ. ಆ ಹಿಟ್ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳಲಷ್ಟೆ ಚಿತ್ರಮಂದಿರಗಳಲ್ಲಿ ಬರುತ್ತಿದೆ. ನಾನು ಕೂಡ ಅದಕ್ಕಾಗಿ ಕಾಯುತ್ತಿದ್ದೇನೆ. ಗೋಪಿಚಂದ್ ನೀಡಿರುವ ಅವಕಾಶಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಲ್ಲದೆ, ಸಿನಿಮಾ ನಿರ್ಮಾಪಕರಾದ ಮೈತ್ರಿ ಮೂವೀಸ್ ಅವರಿಗೂ ಧನ್ಯವಾದ'' ಎಂದಿದ್ದಾರೆ ದುನಿಯಾ ವಿಜಯ್. ಆ ವರೆಗೆ ತೆಲುಗಿನಲ್ಲಿ ಮಾತನಾಡಿ ಬಳಿಕ ಕನ್ನಡಕ್ಕೆ ಬದಲಾದ ದುನಿಯಾ ವಿಜಯ್, ''ನಮ್ಮ ಕನ್ನಡ ನಾಡಿನ ಜನತೆಯ ಪರವಾಗಿ ಬಾಲಕೃಷ್ಣ ಅವರಿಗೆ ಅಭಿನಂದಿಸುತ್ತಿದ್ದೇನೆ. ಜೈ ಕರ್ನಾಟಕ ಮಾತೆ'' ಎಂದು ಮಾತು ಮುಗಿಸಿದರು.

ವಿಜಿ ಬಗ್ಗೆ ಬಾಲಕೃಷ್ಣ ಮಾತು
ಅದೇ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಬಗ್ಗೆ ಮಾತನಾಡಿದ ಬಾಲಕೃಷ್ಣ, '''ಲೆಜೆಂಡ್' ಚಿತ್ರದಲ್ಲಿ ಜಗಪತಿ ಬಾಬು, 'ಅಖಂಡ' ಶ್ರೀಕಾಂತ್ ಪಾತ್ರಗಳ ರೀತಿಯಲ್ಲೇ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ದುನಿಯಾ ವಿಜಯ್ ಪಾತ್ರ ಇದೆ. ಬಹಳ ಚೆನ್ನಾಗಿ ನಟಿಸಿದ್ದಾರೆ. ಅವಕಾಶ ಬಂದಾಗ ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ನಟನೆ ಅಂದರೆ ಇದೇ ಪಾತ್ರ, ಅದೇ ಪಾತ್ರ ಎನ್ನಬಾರದು. ಎಲ್ಲವನ್ನು ಒಪ್ಪಿಕೊಳ್ಳಬೇಕು. ವಿಜಯ್ ನಟನೆ ಹೇಗಿದೆ ಅನ್ನೋದನ್ನು ನೀವು ಥಿಯೇಟರ್ನಲ್ಲಿ ನೋಡ್ತೀರಾ. ಒಳ್ಳೆ ಹೆಸರು ತಂದು ಕೊಡುವ ಪಾತ್ರವನ್ನು ನನ್ನ ಸಹೋದರ ವಿಜಯ್ ಮಾಡಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಹೀರೊ ದುನಿಯಾ ವಿಜಯ್. ಅಂಥಾದ್ರಲ್ಲಿ ಅವರು ಇಲ್ಲಿ ಬಂದು ವಿಲನ್ ಆಗಿ ನಟಿಸೋದು ತಮಾಷೆ ಮಾತಲ್ಲ. ಕನ್ನಡ - ತೆಲುಗು ಮೈತ್ರಿಗೆ ಗುರುತಾಗಿ ನಮ್ಮ ಚಿತ್ರದಲ್ಲಿ ವಿಜಯ್ ಬಂದು ನಟಿಸಿದ್ದಾರೆ" ಎಂದು ಬಾಲಕೃಷ್ಣ ಹೇಳಿದ್ದಾರೆ.


Click it and Unblock the Notifications











