ಮಹೇಶ್ ಬಾಬು ತಂದೆ ನಟ ಸೂಪರ್ ಸ್ಟಾರ್ ಕೃಷ್ಣ ಆರೋಗ್ಯದಲ್ಲಿ ಏರುಪೇರು!
ತೆಲುಗಿನ ದಿಗ್ಗಜ ನಟ, ಮಹೇಶ್ ಬಾಬು ತಂದೆ ಕೃಷ್ಣ ಆರೋಗ್ಯದ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿ ಇಂದಿರಾ ದೇವಿ ನಿಧನನ ನಂತರ ಕುಗ್ಗಿ ಹೋಗಿದ್ದ ಸೂಪರ್ ಸ್ಟಾರ್ ಕೃಷ್ಣ ಆರೋಗ್ಯದ ಏರುಪೇರಾಗಿದೆ ಎನ್ನಲಾಗುತ್ತಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನು ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಕೆಲ ವರ್ಷಗಳಿಂದ ನಟ ಸೂಪರ್ ಸ್ಟಾರ್ ಕೃಷ್ಣ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ನಿನ್ನೆ ಸಂಜೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕೃಷ್ಣ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅವರ ಮಗ ಮಹೇಶ್ ಬಾಬು ಟಾಲಿವುಡ್ನಲ್ಲಿ ಸ್ಟಾರ್ ನಟನಾಗಿ ದರ್ಬಾರ್ ನಡೆಸುತ್ತಿದ್ದಾರೆ. 1943, ಮೇ 31ರಂದು ಗುಂಟೂರಿನಲ್ಲಿ ಹುಟ್ಟಿದ ಕೃಷ್ಣ, ಬಿಎಸ್ಸಿ ಮುಗಿಸಿದ್ದರು. ಸಿನಿಮಾರಂಗಕ್ಕೆ ಹೋಗುವ ಆಸೆಯಿಂದ ಮೊದಲಿಗೆ ನಾಟಕಗಳಲ್ಲಿ ನಟಿಸಲು ಆರಂಭಿಸಿದರು. 'ತೇನ ಮನಸುಲು' ಸಿನಿಮಾ ಮೂಲಕ ಕೃಷ್ಣಗೆ ಹೀರೋ ಆಗಿ ದೊಡ್ಡ ಬ್ರೇಕ್ ಸಿಕ್ಕಿತ್ತು.

350ಕ್ಕೂ ಅಧಿಕ ಸಿನಿಮಾಗಳಲ್ಲಿ ಕೃಷ್ಣ ನಟಿಸಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಸೂಪರ್ ಸ್ಟಾರ್ ಬಿರುದು ಕೊಟ್ಟಿದ್ದಾರೆ. ಸಾಮಾಜಿಕ, ಜಾನಪದ, ಪೌರಾಣಿಕ, ಜೇಮ್ಸ್ ಬಾಂಡ್, ಕೌಬಾಯ್ ಹೀಗೆ ಭಿನ್ನ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ಕೃಷ್ಣ ಸೈ ಅನ್ನಿಸಿಕೊಂಡಿದ್ದಾರೆ. ಸದ್ಯ ಸೂಪರ್ ಸ್ಟಾರ್ ಕೃಷ್ಣ ಅವರ ಆರೋಗ್ಯದ ಬಗ್ಗೆ ಪುತ್ರ ನರೇಶ್ ಮಾಹಿತಿ ನೀಡಿದ್ದು, ಯಾರು ಆತಂಕಗೊಳ್ಳುವ ಅಗತ್ಯ ಇಲ್ಲ. ರೆಗ್ಯುಲರ್ ಚೆಕಪ್ಗಾಗಿ ತಂದೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ ಎಂದಿದ್ದಾರೆ. ಎರಡು ದಿನಗಳ ಕಾಲ ಕೃಷ್ಣ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.


Click it and Unblock the Notifications











