ತೆಲುಗಿನ ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಭಾರತ ಚಿತ್ರರಂಗದ ಉದಯೋನ್ಮುಖ ತಾರೆ. ಕಡಿಮೆ ಅವಧಿಯಲ್ಲಿ ಅವರು ಗಳಿಸಿರುವ ಜನಪ್ರಿಯತೆ, ಅಭಿಮಾನಿಗಳನ್ನು ಇನ್ಯಾವ ಹೊಸ ನಟರೂ ಗಳಿಸಿಲ್ಲ.
'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ಪ್ರತ್ಯೇಕ ಅಭಿಮಾನಿ ವರ್ಗ ಸೃಷ್ಟಿಸಿಕೊಂಡ ವಿಜಯ್ ದೇವರಕೊಂಡ ಆ ನಂತರ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಾ ವೇಗವಾಗಿ ಮುಂದೆ ಸಾಗುತ್ತಿದ್ದಾರೆ. ಇದೀಗ ಅವರ ನಟನೆಯ ಹೊಸ ಸಿನಿಮಾ 'ಲೈಗರ್' ಬಿಡುಗಡೆ ಆಗುತ್ತಿದೆ.
'ಲೈಗರ್' ಸಿನಿಮಾದ ಪ್ರಚಾರ ಕಾರ್ಯಕ್ರಮ ಜೋರಾಗಿ ನಡೆಯುತ್ತಿದ್ದು, ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಕೆಲವು ಸ್ಟಾರ್ ನಟರಿಗೆ ನೇರವಾಗಿ ಟಾಂಗ್ ನೀಡಿದಂತಿದೆ. ವಿಜಯ್ ಮಾತುಗಳಿಗೆ ಜೂ ಎನ್ಟಿಆರ್, ಮಹೇಶ್ ಬಾಬು, ನಾಗಾರ್ಜುನ, ನಾಗ ಚೈತನ್ಯ, ರಾಮ್ ಚರಣ್, ಅಲ್ಲು ಅರ್ಜುನ್ ಅಭಿಮಾನಿಗಳು ಈಗಾಗಲೇ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ಅದ್ಧೂರಿಯಾಗಿ ನಡೆದ ಲೈಗರ್ ಟ್ರೈಲರ್ ಬಿಡುಗಡೆ
'ಲೈಗರ್' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿಯೇ ನಡೆಯಿತು. ಸಿನಿಮಾದ ಹಿಂದಿ ಟ್ರೈಲರ್ ಅನ್ನು ಕರಣ್ ಜೋಹರ್ ಹಾಗೂ ರಣ್ವೀರ್ ಸಿಂಗ್ ಬಿಡುಗಡೆಗೊಳಿಸಿ ವಿಜಯ್ಗೆ ಶುಭ ಹಾರೈಸಿದರೆ, ತೆಲುಗು ಟ್ರೈಲರ್ ಅನ್ನು ನಟ ಚಿರಂಜೀವಿ ಹಾಗೂ ಪ್ರಭಾಸ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಎಲ್ಲರೂ ವಿಜಯ್ ದೇವರಕೊಂಡ ಶ್ರಮವನ್ನು ಹೊಗಳಿದರು.

ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ವಿಜಯ್
ಇನ್ನು ವಿಜಯ್ ದೇವರಕೊಂಡ ಮಾತನಾಡುವ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ಪ್ರೀತಿಯ ಬಗ್ಗೆ ಮಾತನಾಡುತ್ತಾ, ''ನನ್ನ ತಾತ ನನ್ನ ತಂದೆ ಯಾರು ಎಂಬುದು ನಿಮಗೆ ಗೊತ್ತಿಲ್ಲ. ಆದರೂ ನನ್ನನ್ನು ಸ್ಟಾರ್ ಅನ್ನಾಗಿ ನೀವು ಮಾಡಿದ್ದೀರಿ. ನಿಮಗೆ ನಾನು ಸದಾ ಋಣಿ. 'ಲೈಗರ್' ಸಿನಿಮಾ ನಿಮಗೆ ಅರ್ಪಣೆ. ಈ ಸಿನಿಮಾದಲ್ಲಿ ನಾನು ಮಾಡಿರುವ ಬಾಡಿ ಬಿಲ್ಡಿಂಗ್, ಡ್ಯಾನ್ಸ್, ನಟನೆ ಎಲ್ಲವೂ ನಿಮಗಾಗಿಯೇ ಮಾಡಿದ್ದು'' ಎಂದಿದ್ದಾರೆ ವಿಜಯ್ ದೇವರಕೊಂಡ.

ತೆಲುಗಿನ ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ವಿಜಯ್
'ನನ್ನ ತಾತ ನನ್ನ ತಂದೆ ಯಾರು ಎಂಬುದು ನಿಮಗೆ ಗೊತ್ತಿಲ್ಲ' ಎಂಬ ವಿಜಯ್ ದೇವರಕೊಂಡ ಮಾತುಗಳ ಬಗ್ಗೆ ಇದೀಗ ಆಕ್ಷೇಪಣೆ ವ್ಯಕ್ತವಾಗಿದೆ. ಜೂ ಎನ್ಟಿಆರ್, ಪ್ರಭಾಸ್, ನಾಗ ಚೈತನ್ಯ, ನಾಗಾರ್ಜುನ, ಅಲ್ಲ ಅರ್ಜುನ್, ರಾಮ್ ಚರಣ್ ತೆಲುಗಿನ ಇನ್ನೂ ಕೆಲವು ಯುವ ನಟರು ತಮ್ಮ ತಾತ ಹಾಗೂ ತಂದೆಯ ಕಾರಣದಿಂದ ಚಿತ್ರರಂಗಕ್ಕೆ ಎಂಟ್ರಿ ಆದವರು, ಅಂಥಹವರನ್ನು ಗೇಲಿ ಮಾಡಲೆಂದೇ ವಿಜಯ್ ಹೀಗೆ ಹೇಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಂಡ್ಲ ಗಣೇಶ್ ಟ್ವೀಟ್
ನಟ, ನಿರ್ಮಾಪಕ ಬಂಡ್ಲ ಗಣೇಶ್ ಅಂತೂ ಟ್ವಿಟ್ಟರ್ ಮೂಲಕ ವಿಜಯ್ ವಿರುದ್ಧ ಹರಿಹಾಯ್ದಿದ್ದಾರೆ. ''ಕೇವಲ ತಾತ, ಅಪ್ಪ ಇದ್ದ ಮಾತ್ರಕ್ಕೆ ಸರಿಹೋಗುವುದಿಲ್ಲ. ಜೂ ಎನ್ಟಿಆರ್, ಮಹೇಶ್ ಬಾಬು, ರಾಮ್ ಚರಣ್, ಪ್ರಭಾಸ್ ರೀತಿಯಲ್ಲಿ ಟ್ಯಾಲೆಂಟ್ ಸಹ ಇರಬೇಕು ನೆನಪಿಟ್ಟುಕೊ'' ಎಂದು ಖಡಕ್ ಆಗಿಯೇ ವಿಜಯ್ಗೆ ಹೇಳಿದ್ದಾರೆ. ತಾತ-ಅಪ್ಪ ಇದ್ದ ಮಾತ್ರಕ್ಕೆ ಅವರು ಸ್ಟಾರ್ಗಳಾಗಿಲ್ಲ ಅವರ ಬಳಿ ಟ್ಯಾಲೆಂಟ್ ಸಹ ಇತ್ತು ಎಂದು ಪರೋಕ್ಷವಾಗಿ ಬಂಡ್ಲ ಗಣೇಶ್ ವಿಜಯ್ಗೆ ಹೇಳಿದ್ದಾರೆ. ಬಂಡ್ಲ ಗಣೇಶ್ರ ಟ್ವೀಟ್ ಅನ್ನು 4700 ಮಂದಿ ರೀಟ್ವೀಟ್ ಮಾಡಿದ್ದಾರೆ.


Click it and Unblock the Notifications











