ನಾನು ಮಾಡಿದ್ದು ತಪ್ಪಲ್ಲ: ಅರ್ಜುನ್ ಸರ್ಜಾ ಆರೋಪಕ್ಕೆ ಯುವನಟ ವಿಶ್ವಕ್ ಪ್ರತ್ಯುತ್ತರ
ಬಹುಭಾಷಾ ನಟ ಅರ್ಜುನ್ ಸರ್ಜಾ, ತಮ್ಮ ಹೊಸ ಸಿನಿಮಾದ ಬಗ್ಗೆ, ಸಿನಿಮಾದಲ್ಲಿ ನಟಿಸಲಿದ್ದ ಹೀರೋವಿನ ಅವೃತ್ತಿಪರತೆ ಬಗ್ಗೆ ಮಾಡಿರುವ ಪತ್ರಿಕಾಗೋಷ್ಠಿ ವೈರಲ್ ಆಗಿದೆ.
ಮಗಳನ್ನು ತೆಲುಗು ಚಿತ್ರರಂಗದಲ್ಲಿ ಲಾಂಚ್ ಮಾಡಲೆಂದು ನಟ ಅರ್ಜುನ್ ಸರ್ಜಾ, ಹೊಸ ತೆಲುಗು ಸಿನಿಮಾ ನಿರ್ದೇಶಿಸಲು ಮುಂದಾಗಿದ್ದರು, ಸಿನಿಮಾಕ್ಕೆ ಬಂಡವಾಳವೂ ಅವರದ್ದೇ, ಆದರೆ ಸಿನಿಮಾದಲ್ಲಿ ನಾಯಕನಾಗಿ ಆಯ್ಕೆಯಾಗಿದ್ದ ವಿಶ್ವಕ್ ಸೇನ್, ಸಿನಿಮಾ ಚಿತ್ರೀಕರಣ ಆಗಬೇಕಿದ್ದ ದಿನದಿಂದ ಸಿನಿಮಾದಿಂದ ಹೊರಗೆ ನಡೆದಿದ್ದಾರೆ! ಇದು ಅರ್ಜುನ್ ಸರ್ಜಾ ಸಿಟ್ಟಿಗೆ ಕಾರಣವಾಗಿದೆ.
ಈ ಬಗ್ಗೆ ಸುದ್ದಿ ಗೋಷ್ಠಿ ನಡೆಸಿದ ಅರ್ಜುನ್ ಸರ್ಜಾ, ವಿಶ್ವಕ್ ಸೇನ್ ಕೆಟ್ಟ ವೃತ್ತಿಪರತೆಯುಳ್ಳ ಮನುಷ್ಯ. ಅಷ್ಟು ಬೇಜವಾಬ್ದಾರಿ ಇರುವ ವ್ಯಕ್ತಿಯನ್ನು ಈವರೆಗೆ ನೋಡಿಲ್ಲ ಎಂದಿದ್ದಾರೆ. ಅರ್ಜುನ್ ಸರ್ಜಾ ಮಾಡಿರುವ ಆರೋಪಗಳ ಬಗ್ಗೆ ನಟ ವಿಶ್ವಕ್ ಸೇನ್ ಇದೀಗ ಪ್ರತಿಕ್ರಿಯೆ ನೀಡಿದ್ದು, ''ನನ್ನದು ತಪ್ಪಲ್ಲ'' ಎಂದಿದ್ದಾರೆ.
ಬೇರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವಕ್ ಸೇನ್, ''ನಾನು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಸಾಕಷ್ಟು ಅವಮಾನ ಎದುರಿಸಿದ್ದೇನೆ. ಈಗ ಚೆನ್ನಾಗಿದ್ದೇನಾದರೂ ಮತ್ತೆ ಆ ಕೆಟ್ಟ ದಿನಗಳಿಗೆ ಹೋಗಬಾರದೆಂದು ಜಾಗೃತೆಯಿಂದ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಅನ್ಪ್ರೊಫೆಶನಲ್ ಎಂದಿದ್ದಾರೆ. ಆದರೆ ನನಗಿಂತಲೂ ವೃತ್ತಿಪರ ಯಾರೂ ಇಲ್ಲ ಇಲ್ಲಿ. ಇದೊಂದೇ ವರ್ಷದಲ್ಲಿ ಮೂರು ಸಿನಿಮಾ ನಾನು ಮುಗಿಸಿದ್ದೇನೆ. ಅದರಲ್ಲಿ ಒಂದು ಸಿನಿಮಾಕ್ಕೆ ನಾನೇ ಹೀರೋ, ನಾನೇ ನಿರ್ದೇಶಕ ಹಾಗೂ ನಿರ್ಮಾಪಕ ಸಹ'' ಎಂದಿದ್ದಾರೆ ವಿಶ್ವಕ್.
''ನಾನು ಅತ್ಯಂತ ವೃತ್ತಿಪರ ಹಾಗೂ ಡೆಡಿಕೇಟೆಡ್ ನಟ. ನಾನು ಮಾಡಿರುವುದು ಸಣ್ಣ ಸಿನಿಮಾಗಳಾದರೂ ಎಲ್ಲ ದೊಡ್ಡ ನಿರ್ಮಾಪಕರೊಟ್ಟಿಗೆ ಕೆಲಸ ಮಾಡಿದ್ದೇನೆ. ನಾನು ಈವರೆಗೆ ಕೆಲಸ ಮಾಡಿದ ಸಿನಿಮಾಗಳ ಲೈಟ್ ಬಾಯ್ ಸಹ ನಾನು ವೃತ್ತಿಪರ ಅಲ್ಲ ಎಂದು ಹೇಳಿಬಿಟ್ಟರೆ ನಾನು ಚಿತ್ರರಂಗವೇ ಬಿಟ್ಟು ತೆರಳಲು ರೆಡಿ'' ಎಂದು ಸವಾಲು ಎಸೆದಿದ್ದಾರೆ ವಿಶ್ವಕ್.

ಅರ್ಜುನ್ ಸರ್ಜಾ ಮೇಲಿನ ಗೌರವದಿಂದ ಒಪ್ಪಿಕೊಂಡೆ: ವಿಶ್ವಕ್
''ನಾನು ಈವರೆಗೆ ಸಿನಿಮಾ ಮಾಡಿರುವುದು ಒಟ್ಟಿಗೆ ಕೆಲಸ ಮಾಡುವ ವಾತಾವರಣದಲ್ಲಿ. ಇಡೀ ತಂಡ ಒಟ್ಟಿಗೆ ಚರ್ಚಿಸಿ ಸಿನಿಮಾ ಮಾಡಿರುವ ವಾತಾವರಣದಲ್ಲಿ ನಾನು ಸಿನಿಮಾ ಮಾಡಿದ್ದೇನೆ. ಆದರೆ ಈ ಸಿನಿಮಾವನ್ನು ನಾನು ಅರ್ಜುನ್ ಸರ್ಜಾ ಅವರ ಮೇಲಿನ ಗೌರವದಿಂದ ಒಪ್ಪಿಕೊಂಡೆ. ನಮ್ಮಿಬ್ಬರ ಸಿನಿಮಾ ಜರ್ನಿ ಚೆನ್ನಾಗಿ ನಡೆಯುತ್ತಿತ್ತು. ಶೂಟಿಂಗ್ ಪ್ರಾರಂಭವಾಗುವ ಒಂದು ವಾರದ ಮೊದಲು ಸಿನಿಮಾದ ಫರ್ಸ್ಟ್ ಹಾಫ್ ಚಿತ್ರಕತೆ ಬಂತು. ಕತೆಯೂ ಇಷ್ಟವಾಯಿತು. ಆದರೆ ಬರುಬರುತ್ತಾ, ನಮ್ಮಿಬ್ಬರ ನಡುವೆ ಸಂವಾದ ಸಾಧ್ಯವಾಗುತ್ತಿರಲಿಲ್ಲ'' ಎಂದಿದ್ದಾರೆ ವಿಶ್ವಕ್.

ನಂಬಿಕೆ ಇಲ್ವಾ ಎಂದು ಬಿಡುತ್ತಿದ್ದರು: ವಿಶ್ವಕ್
''ಏನಾದರೂ ಬದಲಾವಣೆ ಮಾಡೋಣ ಎಂದು ಹೇಳಿದಾಗ, ಅದನ್ನು ಸ್ವೀಕರಿಸುವ ಅಥವಾ, ಇರುವುದನ್ನೇ ನನಗೆ ಒಪ್ಪಿಗೆಯಾಗುವಂತೆ ಹೇಳುವುದು ಒಂದು ರೀತಿ. ಆದರೆ ಇವರು, ಅದನ್ನು ಬಿಟ್ಟಾಕು, ನನ್ನನ್ನು ನಂಬಿ ಮುಂದೆ ಹೋಗು' ಎನ್ನುತ್ತಿದ್ದರು. ಇಲ್ಲವೇ, ಬದಲಾವಣೆ ಕೇಳಿದಾಗ, ನನ್ನ ಮೇಲೆ ನಂಬಿಕೆ ಇಲ್ಲವಾ ಎಂದು ಪ್ರಶ್ನೆ ಮಾಡುತ್ತಿದ್ದರು. ಒಂದು ರೀತಿ ಕಣ್ಣು ಮುಚ್ಚಿಕೊಂಡು ಸಂಸಾರ ಮಾಡುವ ರೀತಿ ಆಗಿತ್ತು. ಹಾಗಿದ್ದರೂ ಸಹ ನಾನೇ ಅಡ್ಜಸ್ಟ್ ಮಾಡಿಕೊಂಡು ಸುಮ್ಮನೆ ಇದ್ದೆ'' ಎಂದಿದ್ದಾರೆ ವಿಶ್ವಕ್.

ಒಂದು ದಿನ ಕ್ಯಾನ್ಸಲ್ ಮಾಡೋಣ ಎಂದಿದ್ದೆ: ವಿಶ್ವಕ್
''ಆದರೆ ಬೆಳಿಗ್ಗೆ ಎದ್ದು ಚಿತ್ರೀಕರಣಕ್ಕೆ ಹೋಬೇಕಾದರೆ, ನನಗೆ ಒಂದು ರೀತಿಯ ಭಯ ಶುರುವಾಯ್ತು. ಇಷ್ಟು ದಿನ ಸೆಟ್ಗೆ ಹೋಗಬೇಕಾದರೆ ಖುಷಿ ಆಗೋದು, ಏನಾದರೂ ಸಾಧನೆ ಮಾಡೋಣ ಎನಿಸೋದು. ಮೊದಲ ಬಾರಿಗೆ ಭಯ ಪ್ರಾರಂಭವಾಯ್ತು. ಅದಕ್ಕೆ ನಾನು ಮೆಸೇಜ್ ಮಾಡಿ, ಇದೊಂದು ದಿನ ಚಿತ್ರೀಕರ ಕ್ಯಾನ್ಸಲ್ ಮಾಡಿ, ಕೆಲವು ವಿಷಯ ಡಿಸ್ಕಸ್ ಮಾಡಬೇಕಿದೆ ಎಂದಿದ್ದೇನೆ ಹೊರತು, ಸಿನಿಮಾವನ್ನೇ ಕ್ಯಾನ್ಸಲ್ ಮಾಡಿ ಎಂದಿಲ್ಲ. ಆ ನಂತರವೂ ನಾವು ಚರ್ಚೆ ಮಾಡಲು ರೆಡಿ ಇದ್ದೆವು, ಆದರೆ ಆ ವೇಳೆಗೆ ಅವರ ಕಡೆಯ ಮ್ಯಾನೇಜರ್ ನಮಗೆ ಸಿನಿಮಾಕ್ಕೆ ಖರ್ಚು ಮಾಡಿದ ಲೆಕ್ಕ ಕಳಿಸಿ ಇಷ್ಟು ಹಣ ತುಂಬಿ ಕೊಡಿ' ಎಂದು ಮೆಸೇಜ್ ಮಾಡಿದ'' ಎಂದಿದ್ದಾರೆ ವಿಶ್ವಕ್.

ನಾಲ್ಕು ಗೋಡೆಗಳ ಮಧ್ಯೆ ಇರಬೇಕಿತ್ತು: ವಿಶ್ವಕ್ ಸೇನ್
''ಮೂರು ನಾಲ್ಕು ದಿನ ಚಿತ್ರೀಕರಣದಲ್ಲಿ ಭಾಗವಹಿಸಿ ಆ ನಂತರ ಸಿನಿಮಾದಿಂದ ಹೊರಗೆ ಹೋಗಿದ್ದಿದ್ದರೆ, ಏನಯ್ಯ ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಹೇಳಬಾರದಿತ್ತ ಎನ್ನುತ್ತಿದ್ದರು. ಅದಕ್ಕೆ ನಾನು ಮೊದಲೇ ಹೇಳಿದ್ದೀನಿ. ನನಗೆ ಏನೇ ಸಮಸ್ಯೆ ಇದ್ದರೂ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಸರಿಪಡಿಸಿಕೊಳ್ಳುತ್ತಿದ್ದೆ. ಆದರೆ ಅವರೇ ಹೊರಗೆ ಹೋಗಿ ಪ್ರೆಸ್ ಮೀಟ್ ಮಾಡಿದ್ದಾರೆ ಸಂತೋಶ. ನನ್ನನ್ನು ಸಿನಿಮಾದಿಂದ ತೆಗೆದಿದ್ದಾರಲ್ಲ. ಅವರ ಸಿನಿಮಾ ಬಗ್ಗೆ ನಾನು ಹೆಚ್ಚು ಮಾತನಾಡಬಾರದು ಎಂದೇ ಸುಮ್ಮನೆ ಇದ್ದೆ'' ಎಂದಿದ್ದಾರೆ ವಿಶ್ವಕ್ ಸೇನ್.


Click it and Unblock the Notifications











