ರಾಜ್ಯದ ಕೆಲವೆಡೆ ಚಿರಂಜೀವಿಯ 'ವಾಲ್ತೇರು ವೀರಯ್ಯ' ಸಿನಿಮಾ ಶೋ ಕ್ಯಾನ್ಸಲ್!
ಸಂಕ್ರಾಂತಿ ಹಬ್ಬಕ್ಕೆ ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳು ಬಿಡಗುಡೆ ಆಗುತ್ತಿದ್ದು ಅದರಲ್ಲಿ ನಟ ಚಿರಂಜೀವಿ ಅವರ 'ವಾಲ್ತೇರು ವೀರಯ್ಯ' ಸಹ ಒಂದು.
ಆಂಧ್ರ, ತೆಲಂಗಾಣಗಳಲ್ಲಿ ಇರುವಂತೆಯೇ ಕರ್ನಾಟಕದಲ್ಲಿಯೂ ನಟ ಚಿರಂಜೀವಿ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಅದರಲ್ಲಿಯೂ ತೆಲುಗು ರಾಜ್ಯಗಳಿಗೆ ಗಡಿ ಹಂಚಿಕೊಂಡಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದ ಕೆಲವು ಭಾಗಗಳಲ್ಲಿ ಚಿರಂಜೀವಿ ಸಿನಿಮಾವನ್ನು ಅರ್ಲಿ ಮಾರ್ನಿಂಗ್ ಶೋ ನೋಡುವವರ ಸಂಖ್ಯೆ ದೊಡ್ಡದಿದೆ.
ಇದೀಗ 'ವಾಲ್ತೇರು ವೀರಯ್ಯ' ಸಿನಿಮಾಕ್ಕೂ ಬೆಂಗಳೂರು ಗ್ರಾಮಾಂತರದ ವಿಜಯಪುರ, ಕೋಲಾರದ ಕೆಲವು ಚಿತ್ರಮಂದಿರಗಳು, ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹಾಗೂ ಇತರೆ ಕೆಲವು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಶೋ ನಿಗದಿ ಪಡಿಸಲಾಗಿತ್ತು. ಆದರೆ ಹಠಾತ್ತನೆ ಅರ್ಲಿ ಮಾರ್ನಿಂಗ್ ಶೋ ಅನ್ನು ರದ್ದು ಮಾಡಲಾಗಿದೆ.

'ವಾಲ್ತೇರು ವೀರಯ್ಯ' ಸಿನಿಮಾದ ಮುಖ್ಯ ವಿತರಕರು ಹಾಗೂ ಸಬ್ ವಿತರಕರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ನಾಳೆ ಬೆಳಿಗ್ಗೆ ಸಿನಿಮಾದ ಮೊದಲ ಶೋಗೆ ಲೈಸೆನ್ಸ್ ಬರುವುದು ಅನುಮಾನವಾಗಿರುವ ಕಾರಣ ಹಲವು ಚಿತ್ರಮಂದಿರಗಳು ಬೆಳೆಗಿನ ಶೋ ಅನ್ನು ರದ್ದು ಮಾಡಿರುವುದಲ್ಲದೆ. ಟಿಕೆಟ್ ಹಣವನ್ನು ವಾಪಾಸ್ ಪಡೆಯುವಂತೆ ಕೋರಿವೆ.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದ ಕೆಲವು ಭಾಗಗಳಲ್ಲಿ ಮಾತ್ರವೇ ಈ ಸಮಸ್ಯೆ ಇದೆ. ಬೆಂಗಳೂರು ನಗರದ ಚಿತ್ರಮಂದಿರಗಳಲ್ಲಿ ಬೆಳಗಿನ ಶೋ ನಿಗದಿತ ಸಮಯಕ್ಕೆ ನಡೆಯಲಿದೆ ಎನ್ನಲಾಗಿದೆ.
ಭರ್ಜರಿ ಮಾಸ್ ಅವತಾರದಲ್ಲಿ 'ವಾಲ್ತೇರು ವೀರಯ್ಯ' ಸಿನಿಮಾದಲ್ಲಿ ಚಿರಂಜೀವಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ಮಾಸ್ ಮಹಾರಾಜ ರವಿತೇಜ ಸಹ ಇರಲಿದ್ದಾರೆ. ಸಿನಿಮಾವನ್ನು ಕೆಎಸ್ ರವೀಂದ್ರ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್. ಸಿನಿಮಾದಲ್ಲಿ ಶ್ರುತಿ ಹಾಸನ್ ಹಾಗೂ ಕ್ಯಾತರೀನಾ ಥೆರೆಸಾ ನಾಯಕಿಯಾಗಿ ನಟಿಸಿದ್ದಾರೆ. ಪ್ರಕಾಶ್ ರೈ, ಬಾಬಿ ಸಿಂಹ, ನಾಸರ್ ಅವರುಗಳು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











