ನಟಿ ಅನುಷ್ಕಾಶೆಟ್ಟಿ ಸೋದರನ ಹತ್ಯೆಗೆ ಸ್ಕೆಚ್ ಹಾಕಿದ್ದು ಯಾರು? ಏಕೆ?
ತೆಲುಗು ಚಿತ್ರರಂಗದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಸೋದರನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸುದ್ದಿ ಬಂದಿದೆ. ಮಂಗಳೂರು ಮೂಲದ ನಟಿ ಅನುಷ್ಕಾ ಸೋದರ ಗುಣರಂಜನ್ ಶೆಟ್ಟಿ ಅವರಿಗೆ ಜೀವ ಬೆದರಿಕೆ ಇರುವುದು ಇದೀಗ ದೃಢಪಟ್ಟಿದೆ. ಪರಿಸರವಾದಿ, ಉದ್ಯಮಿಯಾಗಿ ಗುರುತಿಸಿಕೊಂಡಿರುವ ಗುಣರಂಜನ್ ಅವರ ಬೆಂಬಲಕ್ಕೆ ಜಯ ಕರ್ನಾಟಕ ಸಂಘಟನೆ ನಿಂತಿದೆ.
ದಿವಂಗತ ಡಾನ್ ಮುತ್ತಪ್ಪ ರೈ ಸ್ಥಾಪಿಸಿದ ಜಯ ಕರ್ನಾಟಕ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಗುಣರಂಜನ್ ವಿರುದ್ಧ ಮುತ್ತಪ್ಪ ರೈ ಅಕ್ಕನ ಮಗ ಮನ್ವಿತ್ ರೈ ಕತ್ತಿ ಮಸೆಯುತ್ತಿದ್ದಾನೆ ಎಂಬ ಸುದ್ದಿಯಿದೆ. ಈ ಹಿಂದೆ ಕೂಡಾ ಒಂದೆರಡು ಕೇಸುಗಳಲ್ಲಿ ಮನ್ವಿತ್ ಹೆಸರು ಕೇಳಿ ಬಂದಿತ್ತು. ಆದರೆ, ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ವಿಡಿಯೋ ಸಂದೇಶ ಕಳಿಸಿದ್ದ. ಆದರೆ, ಈಗ ಮತ್ತೊಮ್ಮೆ ಆತನ ಹೆಸರು ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಜಯ ಕರ್ನಾಟಕ ಸಂಘಟನೆ ಸದಸ್ಯರು ಇಂದು ದೂರು ನೀಡಿದ್ದಾರೆ.
ಜಯಕರ್ನಾಟಕ ಸಂಘಟನೆ ಪ್ರಮುಖ ಸ್ಥಾನದಲ್ಲಿರುವ ಗುಣರಂಜನ್ ಶೆಟ್ಟಿ ಹತ್ಯೆಗೆ ಮನ್ವೀತ್ ರೈ ಸಂಚು ರೂಪಿಸಿದ್ದು ಏಕೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಈ ಮುಂಚೆ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮನ್ವಿತ್ ಸದ್ಯ ಸಂಘಟನೆಯನ್ನು ತೊರೆದಿದ್ದ, ತನ್ನದೇ ವ್ಯವಹಾರ, ಉದ್ಯಮ ನೋಡಿಕೊಂಡಿದ್ದ. ದಿವಂಗತ ಡಾ. ಮುತ್ತಪ್ಪ ರೈ ಅವರ ಪರಮಾಪ್ತರಾಗಿ ಗುಣರಂಜನ್ ಶೆಟ್ಟಿ ಗುರುತಿಸಿಕೊಂಡಿದ್ದರು.

ಪೊಲೀಸರಿಂದ ಮಾಹಿತಿ
ನನ್ನ ಹತ್ಯೆ ಸಂಚು ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ತಿಳ್ದಿ ಬಂದಿದೆ. ಕೆಲ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಮನ್ಮಿತ್ ರೈ ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ, ಈ ಬಗ್ಗೆ ಮನ್ಮಿತ್ ಸ್ಪಷ್ಟನೆ ನೀಡಿದ್ದು, ಯಾವುದೇ ಕೈವಾಡವಿಲ್ಲ ಎಂದಿದ್ದಾರೆ. ನನಗೂ ಈ ಬಗ್ಗೆ ಅನಾಮಧೇಯ ಎಸ್ಎಂಎಸ್ ಬಂದಿತ್ತು. ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿದ್ದೇನೆ. ಜಯ ಕರ್ನಾಟಕ ಹಾಗೂ ಬ್ರಿಗೇಡ್ ಸಂಸ್ಥೆಯವರಿಂದ ಅಧಿಕೃತವಾಗಿ ದೂರು ನೀಡಲಾಗಿದೆ.

ಆಡಿಯೋ ರಿಲೀಸ್
ಇನ್ನು ಈ ಸುದ್ದಿ ಹೊರ ಬರುತ್ತಿದ್ದಂತೆ ಈ ಬಗ್ಗೆ ಮನ್ವಿತ್ ಪ್ರತಿಕ್ರಿಯಿಸಿ, ಆಡಿಯೋ ರೆರ್ಕಾಡ್ ಕಳಿಸಿದ್ದಾರೆ. ''ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಎಂಬ ವದಂತಿ ಬರ್ತಾಯಿವೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಾರೆ. ಆದರೆ ಈ ವಿಚಾರದಲ್ಲಿ ಯಾಕೆ ನನ್ನ ಹೆಸರು ಬರ್ತಾ ಇದೆಯೋ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ. ಇದಕ್ಕೂ ನನಗೂ ಸಂಬಂಧ ಇಲ್ಲ'' ಎಂದು ಆಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

ಭೂಗತ ಜಗತ್ತಿನ ನಂಟು ಇಲ್ಲ
ವಿನಾಃಕಾರಣ ನನ್ನ ಹೆಸರು ಯಾಕೆ ಬಳಸುತ್ತಿದ್ದಾರೋ ಗೊತ್ತಿಲ್ಲ. ನನ್ನ ಮೇಲೆ ಇದುವರೆಗೂ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ. ಒಂದು ಎಫ್ಐಆರ್ ಕೂಡ ಆಗಿಲ್ಲ ಎಂದು ಮನ್ವಿತ್ ಸ್ಪಷ್ಟನೆ ನೀಡಿದ್ದಾರೆ. ಇನ್ನೊಂದೆಡೆ ಮುತ್ತಪ್ಪ ರೈ ಅವರ ಆಪ್ತರಾಗಿ ಗುರುತಿಸಿಕೊಂಡಿರುವ, ಜಯ ಕರ್ನಾಟಕ ಸಂಘಟನೆಯ ಗುಣರಂಜನ್ ಶೆಟ್ಟಿಗೆ ಯಾವುದೇ ಉದ್ಯಮದಲ್ಲಿ ಶತ್ರುಗಳಿಲ್ಲ, ಜೊತೆಗೆ ಭೂಗತ ಜಗತ್ತಿನ ಸಂಪರ್ಕವಿಲ್ಲ, ಇವರಿಬ್ಬರ ಹೆಸರು ತಂದು ಬೇರೆಯವರು ಆಟವಾಡುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.

ರಾಕೇಶ್ ಮಲ್ಲಿ ಕೊಲೆ ಪ್ರಕರಣ
2020 ರಲ್ಲಿ ಮುತ್ತಪ್ಪ ರೈ ಪರಮಾಪ್ತ ರಾಕೇಶ್ ಮಲ್ಲಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿರುವ ವಿಚಾರದಲ್ಲಿ ಮನ್ವಿತ್ ರೈ ಹೆಸರು ಕೇಳಿ ಬಂದಿತ್ತು. ಮೂರು ಕೋಟಿ ರೂ.ಗೆ ಮುತ್ತಪ್ಪ ರೈ ಅವರೇ ಸುಪಾರಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ವೇಳೆ ರಾಕೇಶ್ ಮಲ್ಲಿ ಮಾಧ್ಯಮಗಳ ಎದುರು ಬಂದು ನನ್ನ ಕೊಲೆಗೆ ಮುತ್ತಪ್ಪ ರೈ ಸುಪಾರಿ ನೀಡಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ. ಅಂದು ಕೂಡಾ ವಿದೇಶದಲ್ಲಿದ್ದ ಮನ್ವಿತ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ರಾಕೇಶ್ ಮಲ್ಲಿ ಕೊಲ್ಲಲು ಸುಪಾರಿ ಕೊಡುವುದಾಗಿ ಹೇಳಿದ್ದು ನಿಜ ಎಂದು ಹೇಳಿದ್ದ. ಈಗ ಮತ್ತೊಮ್ಮೆ ಮನ್ವಿತ್ ಹೆಸರು ಕೇಳಿ ಬರುತ್ತಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.


Click it and Unblock the Notifications











