'ನಿನ್ನ ಚಿತ್ರದ ಬಜೆಟ್ ಪವನ್ ಕಲ್ಯಾಣ್ ಮಾರ್ನಿಂಗ್ ಶೋ ಕಲೆಕ್ಷನ್ ಅಷ್ಟೇ'
ತೆಲುಗು ಚಿತ್ರೋದ್ಯಮದಲ್ಲಿ ಮಾ ಚುನಾವಣೆ ಪ್ರತಿಷ್ಠೆಯಾಗಿ ಬದಲಾಗಿದೆ. ಸಿನಿಮಾರಂಗಕ್ಕೆ ಮಾತ್ರವಲ್ಲದೇ ಆಂಧ್ರಪ್ರದೇಶ ರಾಜಕೀಯದ ಮೇಲೂ ಹೆಚ್ಚು ಪ್ರಭಾವ ಬೀರುತ್ತಿದೆ. ಮಾ ಚುನಾವಣೆಯಲ್ಲಿ ಪ್ರಕಾಶ್ ರಾಜ್ ಮತ್ತು ವಿಷ್ಣು ಮಂಚು ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಮತ್ತೊಂದಡೆ ಈ ಚುನಾವಣೆ ಪವನ್ ಕಲ್ಯಾಣ್ ವರ್ಸಸ್ ಸಿಎಂ ಜಗನ್ ಮೋಹನ್ ರೆಡ್ಡಿ ಎನ್ನುವಂತೆ ಬಿಂಬಿತವಾಗಿದೆ.
ಪ್ರಕಾಶ್ ರಾಜ್ ಪರವಾಗಿ ಪವನ್ ಕಲ್ಯಾಣ್ ಮತ್ತು ಮೆಗಾ ಕುಟುಂಬ ನಿಂತಿದ್ದರೆ, ಮಂಚು ವಿಷ್ಣು ಸಿಎಂ ಜಗನ್ ಮೋಹನ್ ರೆಡ್ಡಿ ಬೆಂಬಲ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ವಾಸ್ತವ.
ಇತ್ತೀಚಿಗಷ್ಟೆ ಜಗನ್ ಮೋಹನ್ ರೆಡ್ಡಿ ವಿರುದ್ಧ ನಟ-ರಾಜಕಾರಣಿ ಪವನ್ ಕಲ್ಯಾಣ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಚಿತ್ರರಂಗದ ಮೇಲೆ ಜಗನ್ ಹಸ್ತಕ್ಷೇಪ ಮಾಡ್ತಿದ್ದಾರೆ, ನನ್ನ ವಿರುದ್ಧ ಸೇಡನ್ನು ಸಿನಿಮಾರಂಗದ ಮೇಲೆ ತೋರಿಸುತ್ತಿದ್ದಾರೆ ಎಂದು ಗುಡುಗಿದ್ದರು.

ಮುಖ್ಯಮಂತ್ರಿಯನ್ನು ಏಕವಚನದಲ್ಲಿ ನಿಂದಿಸುತ್ತಿದ್ದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಇಂಡಸ್ಟ್ರಿಯ ಕೆಲವರು ಸಿಎಂ ಭೇಟಿ ನಮಗೂ ಪವನ್ ಕಲ್ಯಾಣ್ ಹೇಳಿಕೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಚು ವಿಷ್ಣು, ''ಪವನ್ ಕಲ್ಯಾಣ್ ಹೇಳಿಕೆಗೆ ಇಂಡಸ್ಟ್ರಿಗೆ ಸಂಬಂಧವಿಲ್ಲ ಅಂತ ಫಿಲಂ ಚೇಂಬರ್ ಸ್ಪಷ್ಟವಾಗಿ ಹೇಳಿದೆ. ನಾನು ಸಿನಿಮಾರಂಗದ ಪರವಾಗಿದ್ದೇನೆ, ಪ್ರಕಾಶ್ ರಾಜ್ ಯಾರ ಪರವಾಗಿ ಇದ್ದಾರೆ, ಇಂಡಸ್ಟ್ರಿ ಪರ ಅಥವಾ ಪವನ್ ಕಲ್ಯಾಣ್ ಪರವಾಗಿನಾ ಎಂದು ಹೇಳಲಿ'' ಎಂದು ಸವಾಲು ಹಾಕಿದ್ದರು.
ಮಂಚು ವಿಷ್ಣು ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ''ಪವನ್ ಕಲ್ಯಾಣ್ ಸಿನಿಮಾ ಇಂಡಸ್ಟ್ರಿಯ ಭಾಗ, ಅವರ ಚಿತ್ರದ ಮಾರ್ನಿಂಗ್ ಕಲೆಕ್ಷನ್ ನಿನ್ನ ಸಿನಿಮಾದ ಬಜೆಟ್'' ಎಂದು ತಿರುಗೇಟು ಕೊಟ್ಟಿದ್ದಾರೆ. 'ಪವನ್ ಕಲ್ಯಾಣ್ ಸಿನಿಮಾ ಇಂಡಸ್ಟ್ರಿಯ ಒಂದು ಭಾಗ. ಮೊದಲು ಅವರೊಬ್ಬರ ನಟ ಆಮೇಲೆ ಅವರು ರಾಜಕಾರಣಿ. ಅವರನ್ನು ಏಕೆ ಪ್ರತ್ಯೇಕವಾಗಿ ನೋಡಲಾಗುತ್ತಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ವಿಷ್ಣು ಅವರು ತಮ್ಮ ಮಾತಿನ ಮೇಲೆ ನಿಗಾ ವಹಿಸಬೇಕು'' ಎಂದು ಎಚ್ಚರಿಸಿದ್ದಾರೆ.
ಅಕ್ಟೋಬರ್ 10 ರಂದು ಮಾ ಚುನಾವಣೆಯ ಮತದಾನ ನಡೆಯಲಿದೆ.


Click it and Unblock the Notifications











