ಮೈಸೂರು ಅರಮನೆ ನೆಲಮಾಳಿಗೆಯಲ್ಲೂ ಇದೆ ಅನಂತ ನಿಧಿ

ಕನ್ನಡದ ಹೊಸ ಚಾನೆಲ್ 'ಕಸ್ತೂರಿ ನ್ಯೂಸ್ 24' ಈ ಬಗ್ಗೆ ಮಂಗಳವಾರ ರಾತ್ರಿ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿದೆ. ಆದರೆ ಕೇರಳದ ಪದ್ಮನಾಭ ಸ್ವಾಮಿ ದೇವಸ್ಥಾನದ 'ಅನಂತ ನಿಧಿ' ಜಗತ್ತಿಗೆ ಗೊತ್ತಾಗುವುದಕ್ಕಿಂತ ಮೊದಲೂ ಸರಿಯಾಗಿ 100 ವರ್ಷಗಳ ಹಿಂದೆ ನಿರ್ಮಾಣವಾದ ಈ ಅರಮನೆಯಲ್ಲಿ ಅಗಣಿತ ನಿಧಿ ಇದೆ ಎಂಬ ಮಾತುಗಳು ಆಗಾಗ್ಗೆ ಕೇಳಿಬಂದಿದೆ.
ಒಮ್ಮೆ ಅರಮನೆಗೆ ಭಾಗಶಃ ಬೆಂಕಿ ಬಿದ್ದು ಸಾಕಷ್ಟು ಹಾನಿ ಸಂಭವಿಸಿತು. ಆಗ ಎಚ್ಚೆತ್ತ ರಾಜಮನೆತನ ದೀವಾನರಿಗೂ ತಿಳಿಸದೆ ತನ್ನಲ್ಲಿದ್ದ ಅಷ್ಟೂ ಸಂಪತ್ತನ್ನು ನೆಲಮಾಳಿಗೆಗಳಲ್ಲಿ ರಹಸ್ಯವಾಗಿ ಸಂಗ್ರಹಿಸಿಟ್ಟಿತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಕೇರಳದ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ದೊರೆತಿರುವ 'ಅನಂತ ನಿಧಿ'ಯಂತೆ ಅಂಬಾ ವಿಲಾಸದಲ್ಲೂ ಅಮೂಲ್ಯ ನಿಧಿ ಇದೆ ಎನ್ನಲಾಗಿದೆ. ಪ್ರಸ್ತುತ ಅರಮನೆಯ ಗ್ರಂಥಾಲಯದಲ್ಲಿ ಒಂದು ಸಾಮಾನ್ಯ ಕೋಣೆಯಿದ್ದು, ಅದರ ಮೂಲಕ ನೆಲಮಾಳಿಗೆಗೆ ತಲುಪಿದಾಗ ಈ ರಹಸ್ಯ ನಿಧಿ ಕಣ್ಣಿಗೆ ಕಾಣುತ್ತದೆ. ಪ್ರಾಚ್ಯ ಇಲಾಖೆ ಈ ನಿಧಿಯನ್ನು ಪ್ರತಿ ವರ್ಷ ತಪಾಸಣೆ ಮಾಡುತ್ತಾ ಬಂದಿದೆ ಎಂದು ಪ್ರಾಚ್ಯ ಇಲಾಖೆ ನಿರ್ದೇಶಕ ಡಾ. ಗೋಪಾಲ್ ಹೇಳುತ್ತಾರೆ.
ಆದರೆ ಈ ನಿಧಿ ಪ್ರಮಾಣ ಕೇರಳ ಪದ್ಮನಾಭಸ್ವಾಮಿಯ 'ಅನಂತ ನಿಧಿ'ಯಷ್ಟು ಅಗಾಧವಾಗಿ ಇಲ್ಲ ಎನ್ನುತ್ತಾರೆ ಡಾ. ಗೋಪಾಲ್. ಈ ನಿಧಿಯಿರುವ ಅರಮನೆಯ ಜಾಗ ಪ್ರಸ್ತುತ ಪ್ರಾಚ್ಯ ಇಲಾಖೆಯ ಸುಪರ್ದಿಯಲ್ಲಿದೆ. ಅರಮನೆಯ ಸುತ್ತಮುತ್ತಲ ದೇವಸ್ಥಾನಗಳು, ಹಳೆಯ ಗುಡಿಗೋಪುರಗಳು ರಾಜ್ಯ ಮುಜರಾಯಿ ಇಲಾಖೆಯ ಉಸ್ತುವಾರಿಯಲ್ಲಿದೆ.
ಸಾಮಾನ್ಯವಾಗಿ ಚಂದಮಾಮ ಕಥೆಗಳಲ್ಲಿ ಓದಿದಂತೆ ಕೊಪ್ಪರಿಗೆಗಳಲ್ಲಿ ಅನಂತ ನಿಧಿಯಿರುವಾಗ ಅದನ್ನು ಕಾಳಸರ್ಪ ಕಾಯುತ್ತಿರುತ್ತದೆ ಎಂದೂ ಚಿತ್ರಿಸಲಾಗುತ್ತದೆ. ಆದರೆ ಇಲ್ಲಿ ಕಾಳಸರ್ಪ ಇದೆಯೋ ಇಲ್ಲವೋ ತಿಳಿಯದು. ಆದರೆ ಇರುವ ಅಷ್ಟೋ ಇಷ್ಟೋ ನಿಧಿಯನ್ನೂ ಕಾಪಾಡಲೂ ನರಪಿಳ್ಳೆ ರಕ್ಷಕರೂ ಇಲ್ಲ ಎಂಬುದಕ್ಕೆ ಕಸ್ತೂರಿ ನ್ಯೂಸ್ ಕನ್ನಡಿ (ಕ್ಯಾಮರಾ) ಹಿಡಿದಿದೆ.


Click it and Unblock the Notifications











