ಕನ್ನಡಿಗರ ಕನಸಿನ ಕನ್ಯೆಯಾಗಿ ಯಜ್ಞಾಶೆಟ್ಟಿ!
ಎದ್ದೇಳು ಮಂಜುನಾಥ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಜತೆ ನಟಿಸಿದ್ದ ಯಜ್ಞಾ ಶೆಟ್ಟಿ ಇದೀಗ ಕಿರುತೆರೆಯಲ್ಲಿ ಸುದ್ದಿ ಮಾಡಿದ್ದಾರೆ. ಕಸ್ತೂರಿ ವಾಹಿನಿಯ ರಿಯಾಲಿಟಿ ಶೋ 'ಡ್ರೀಮ್ ಗರ್ಲ್' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ನಗದು ಬಹುಮಾನವಾಗಿ ಯಜ್ಞಾಶೆಟ್ಟಿ ಅವರಿಗೆ ರು.5 ಲಕ್ಷಗಳನ್ನು ನೀಡಲಾಗಿದೆ.
ಫೆಬ್ರವರಿ 2009ರಿಂದ ಕಸ್ತೂರಿ ವಾಹಿನಿಯಲ್ಲಿ ಡ್ರೀಮ್ ಗರ್ಲ್ ರಿಯಾಲಿಟಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಡ್ರೀಮ್ ಗರ್ಲ್ ಪಟ್ಟಕ್ಕಾಗಿ ಒಟ್ಟು 12 ಮಂದಿ ಸ್ಪರ್ಧಿಗಳು ಕಣದಲ್ಲಿದ್ದರು. ಅವರನ್ನೆಲ್ಲಾ ಹಿಂದಿಕ್ಕಿರುವ ಯಜ್ಞಾಶೆಟ್ಟಿ ಅಂತಿಮವಾಗಿ ವಿಜಯ ಮಾಲೆ ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ. ಇದೀಗ ಅವರು ಕನಸಿನ ಕನ್ಯೆ!
ಎಪ್ಪತ್ತು ಕಂತುಗಳಲ್ಲಿ ಪ್ರಸಾರವಾದ ಡ್ರೀಮ್ ಗರ್ಲ್ ಕಾರ್ಯಕ್ರಮ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಅಂತಿಮ ಸುತ್ತಿನ ಹಣಾಹಣಿಗೆ ಯಜ್ಞಾ ಶೆಟ್ಟಿ ಜೊತೆಗೆ ಸ್ಫೂರ್ವಿ, ಪ್ರಿಯಾಂಕಾ ಮತ್ತು ವಿದ್ಯಾ ಸೆಣೆಸಿದ್ದರು. ಖ್ಯಾತ ನೃತ್ಯ ಸಂಯೋಜಕಿ ತಾರಾ, ಇಮ್ರಾನ್ ಸರ್ದಾರಿಯಾ ಮತ್ತು ನಿರ್ದೇಶಕ ಗುರುದತ್ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.
ಅಂತಿಮ ಸುತ್ತಿನ ತೀರ್ಪುಗಾರರಾಗಿ 'ತಾಜ್ ಮಹಲ್' ಖ್ಯಾತಿಯ ಅಜಯ್ ರಾವ್ ಆಗಮಿಸಿದ್ದರು. ಎರಡನೇ ಹಂತದ ರಿಯಾಲಿಟಿ ಕಾರ್ಯಕ್ರಮ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕಸ್ತೂರಿ ವಾಹಿನಿ ತಿಳಿಸಿದೆ. ಒಂದೆಡೆ ಎದ್ದೇಳು ಮಂಜುನಾಥ ಚಿತ್ರ ಯಶಸ್ಸಿನ ಖುಷಿ ಮತ್ತೊಂದೆಡೆ ಡ್ರೀಮ್ ಗರ್ಲ್ ಆದ ಸಂತೋಷ ಯಜ್ಞಶೆಟ್ಟಿ ಪಾಲಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











