twitter
    For Quick Alerts
    ALLOW NOTIFICATIONS  
    For Daily Alerts

    ನೊಂದವರ ಕಣ್ಣೀರೊರೆಸಲು ಬಂದ್ರು ಹ್ಯಾಟ್ರಿಕ್ ಹೀರೋ

    By Rajendra
    |

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ಕಿರುತೆರೆಗೆ ಲಗ್ಗೆ ಇಡಲಿದ್ದು, ಕಿರುತೆರೆಯ ಬಹುನಿರೀಕ್ಷೆಯ ಸಮಾಜ ಮುಖಿ ಕಾರ್ಯಕ್ರಮ 'ನಾನಿರುವುದೇ ನಿಮಗಾಗಿ' ಸೆಪ್ಟೆಂಬರ್ 6ರ ಸೋಮವಾರದಿಂದ ರಾತ್ರಿ 9 ರಿಂದ 10 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವುದು.

    ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಾರಥ್ಯದಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ನಿರ್ಮಿಸುವುದಾಗಿ ಜೀ ಕನ್ನಡ ಕಳೆದ ತಿಂಗಳಷ್ಟೇ ಪ್ರಕಟಿಸಿತ್ತು. ಇದರ ಬೆನ್ನಲ್ಲೆ ವಾಹಿನಿಯು ಕಾರ್ಯ ಪ್ರವೃತ್ತವಾಗಿ ಈಗಾಗಲೇ ಕಾರ್ಯಕ್ರಮ ಸಿದ್ಧಪಡಿಸಿದ್ದು ಸೋಮವಾರದಿಂದ (ಸೆ.6) ಪ್ರಸಾರ ಕಾಣಲಿದೆ.

    ಪ್ರತೀ ಸೋಮವಾರ ಹಾಗೂ ಮಂಗಳವಾರ ವಾರದಲ್ಲಿ ಎರಡು ದಿನ ಒಂದೊಂದು ಗಂಟೆಗಳ ಕಾಲ ಶಿವರಾಜ್ ಕುಮಾರ್ ನಿರೂಪಣೆಯ 'ನಾನಿರುವುದೇ ನಿಮಗಾಗಿ' ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಹಾಗೂ ರಾಜ್ ಕುಟುಂಬದ ಕುಡಿ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವುದು ಈ ಕಾರ್ಯಕ್ರಮದ ವಿಶೇಷ.

    ಭಾರತೀಯ ಸಮಾಜದಲ್ಲಿ ವಿವಿಧ ವರ್ಗದ ಜನರಿದ್ದು ಹಲವು ಭಿನ್ನತೆಗಳೊಂದಿಗೆ ಬದುಕುತ್ತಿದ್ದಾರೆ. ಸಮಾಜದಲ್ಲಿನ ಅಶಕ್ತ ಜನರ ಆಸೆ ಆಕಾಂಕ್ಷೆಗಳನ್ನು ತಕ್ಕಷ್ಟು ಮಟ್ಟಿಗೆ ಈಡೇರಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಪ್ರಯತ್ನದಲ್ಲಿ ಶಿವರಾಜ್ ಕುಮಾರ್ ಅವರ ಸಂಪೂರ್ಣ ಸಹಕಾರವೂ ಇದೆ.

    ಡಾ.ರಾಜ್ ಕುಮಾರ್ ಅವರಿಗಿದ್ದ ಸಾಮಾಜಿಕ ಕಳಕಳಿಯನ್ನು ಈಡೇರಿಸುವ ಸಲುವಾಗಿ ಶಿವರಾಜಕುಮಾರ್ ಈ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿರುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಹಲವು ದುರ್ಬಲರನ್ನು ಗುರುತಿಸಿ ಅವರ ಆಸೆಗಳನ್ನು ಪೂರೈಸುವ ಪ್ರಯತ್ನವನ್ನು ಇಲ್ಲಿ ಮಾಡಿರುವುದಾಗಿ ವಾಹಿನಿಯು ಹೇಳಿಕೊಂಡಿದೆ.

    ಕ್ಯಾನ್ಸರ್ ಪೀಡಿತ ಬಡಕುಟುಂಬದ ಬಾಲಕಿಯೋರ್ವಳನ್ನು ಗುರುತಿಸಿ ಅವಳ ಜೀವನದ ಬಹು ನಿರೀಕ್ಷೆಯ ಬಯಕೆಯೊಂದನ್ನು ಈಡೇರಿಸಲಾಗಿದ್ದು ಈ ಕುರಿತಾದ ವಿವರಗಳು ಮೊದಲ ಸಂಚಿಕೆಯಲ್ಲಿ ಅನಾವರಣಗೊಳ್ಳಲಿದೆ. ಅಂತೆಯೇ ರಾಜ್ಯದಲ್ಲಿಯೇ ಅತ್ಯಂತ ಗಿಡ್ಡವಾಗಿರುವ ವಾಮನಮೂರ್ತಿಗಳನ್ನು ಗುರುತಿಸಲಾಗಿದ್ದು ಅವರ ಅಪೇಕ್ಷೆಗಳನ್ನು ಈಡೇರಿಸಿರುವ ವಿವರಗಳು ತೆರೆಯ ಮೇಲೆ ಮೂಡಿಬರಲಿದೆ.

    Saturday, September 4, 2010, 12:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X